ಸುರತ್ಕಲ್, ಡಿ.10: ಸುರತ್ಕಲ್ ಕೃಷ್ಣಾಪುರ ನಾಲ್ಕನೆ ಬ್ಲಾಕ್ನಲ್ಲಿ ಯುವಕನೊಬ್ಬನನ್ನು ತಲವಾರಿನಿಂದ ಕಡಿದು ಕೊಲೆಗೆ ಯತ್ನಿಸಿದ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಕೃಷ್ಣಾಪುರ ನಿವಾಸಿ ತಸ್ಲಿಮ್ ಆರೀಫ್ (23) ಎಂಬಾತನ ಮೇಲೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ತಲವಾರಿನಿಂದ ಕಡಿದು ಪರಾರಿಯಾಗಿದ್ದಾರೆ. ತಲವಾರಿನೇಟಿಗೆ ತಸ್ಲಿಮ್ನ ಎಡಗೈ ತುಂಡಾಗಿದೆ ಎಂದು ತಿಳಿದು ಬಂದಿದೆ.
ಕೂಲಿ ಕೆಲಸ ಮಾಡಿಕೊಂಡಿರುವ ತಸ್ಲಿಮ್, ಕೆಲಸ ಮುಗಿಸಿಕೊಂಡು ರಾತ್ರಿ ಎಂಟು ಗಂಟೆಯ ಸುಮಾರಿಗೆ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆತನ ಮೇಲೆ ದಾಳಿ ಮಾಡಲಾಗಿದೆ.
ಸೋಮವಾರ ರಾತ್ರಿ ಸುರತ್ಕಲ್ನಲ್ಲಿ ವಿನಯ್ ಎಂಬಾತನಿಗೆ ಚೂರಿಯಿಂದ ಇರಿಯಲಾಗಿತ್ತು. ಇದೂ ಸೇರಿದಂತೆ ಕಳೆದ ಎರಡು ದಿನಗಳಲ್ಲಿ ನಾಲ್ಕು ಚೂರಿ ಇರಿತದ ಪ್ರಕರಗಳು ನಗರದಲ್ಲಿ ನಡೆದಿವೆ. ಶನಿವಾರ ರಾತ್ರಿ ಬಂದರುನಲ್ಲಿ ಹಾಗೂ ರವಿವಾರ ರಾತ್ರಿ ಮೂಡುಶೆಡ್ಡೆ ಪ್ರದೇಶದಲ್ಲಿ ಚೂರಿ ಇರಿತ ಪ್ರಕರಣಗಳು ನಡೆದಿವೆ.