ಮಂಗಳೂರು: ಕ್ಷುಲ್ಲಕ ಕಾರಣಗಳಿಂದ ಅಶಾಂತಿ ಉಂಟು ಮಾಡುವ ಸಮಾಜಘಾತುಕ ಶಕ್ತಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಆರ್. ಹಿತೇಂದ್ರ ತಿಳಿಸಿದ್ದಾರೆ. ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಮಂಗಳವಾರ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.
ಉಳಾಯಿಬೆಟ್ಟಿನಲ್ಲಿ ಶುಕ್ರವಾರ ಬೆಳಗ್ಗೆ ನಡೆದ ಘಟನೆ ಮತ್ತು ಆ ಬಳಿಕ ನಡೆದ ಕೆಲವು ಅಹಿತಕರ ಘಟನೆ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ಎಸಿಪಿ ಸುಬ್ರಹ್ಮಣ್ಯ ಅವರಿಗೆ ಸೂಚನೆ ನೀಡಿದ್ದೇನೆ. ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು. ಆರಂಭದಲ್ಲಿ ಗಲಭೆ ಹರಡಲು ಇನ್ಸ್ಪೆಕ್ಟರ್ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಲಾಗಿದೆ ಎಂದು ಕಮಿಷನರ್ ತಿಳಿಸಿದರು.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಮಾತನಾಡಿ, ನಮ್ಮ ಜಿಲ್ಲೆ ಹಲವಾರು ವಿಷಯಗಳಲ್ಲಿ ಖ್ಯಾತಿ ಗಳಿಸಿದ ಜಿಲ್ಲೆ. ಸಾಮರಸ್ಯ ಕಾಪಾಡಿ ಅದನ್ನು ಉಳಿಸುವ ಕೆಲಸ ಆಗಬೇಕು. ಇದಕ್ಕೆ ಎಲ್ಲ ಸಮುದಾಯದ ಮುಖಂಡರು ಸಹಕಾರ ನೀಡಬೇಕು ಎಂದು ತಿಳಿಸಿದರು.
ವಿಶ್ವ ಹಿಂದೂ ಪರಿಷತ್ ಮುಖಂಡ ಎಂ.ಬಿ.ಪುರಾಣಿಕ್ ಮಾತನಾಡಿ, ಶಾಂತಿ ಸಭೆ ಅಂದರೆ ಸಂಬಂಧಪಟ್ಟ ಸಮುದಾಯದವರು ಭಾಗವಹಿಸಬೇಕು. ಆದರೆ ಇಲ್ಲಿ ಒಂದು ಸಮುದಾಯದ ಮುಖಂಡರು ಮಾತ್ರ ಭಾಗವಹಿಸಿದ್ದಾರೆ. ಆದ್ದರಿಂದ ಈ ಸಭೆ ಅರ್ಥಹೀನ. ಹಿಂದೂ ಸಮುದಾಯವನ್ನು ಗುರಿಯಾಗಿಸಿ ನಿರಂತರ ದಾಳಿ ನಡೆಯುತ್ತಿದೆ. ನಾವು ಏನು ಮಾಡಿದರೂ ನಡೆಯುತ್ತದೆ, ನಮ್ಮನ್ನು ರಕ್ಷಿಸುವ ನಾಯಕರಿದ್ದಾರೆ ಎನ್ನುವ ಭಾವನೆ ಕೆಲವರಲ್ಲಿದೆ. ಇದೇ ಇಂತಹಾ ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ದೂರಿದರು.
ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಮಾತನಾಡಿ, ಮಂಗಳೂರಿನ ಪೊಲೀಸ್ ಕಮಿಷನರ್ ಕಾನೂನು ಸುವ್ಯವಸ್ಥೆಯಲ್ಲಿ ಸಮರ್ಥರಾಗಿಲ್ಲ. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಗಲಭೆಗಳು ನಡೆದಿದ್ದರೂ ಅಪರಾಧಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಪೊಲೀಸರ ಮೇಲೆಯೇ ಹಲ್ಲೆಗಳು ನಡೆಯುತ್ತಿವೆ. ಜೈಲ್ ಒಳಗಡೆ, ಕದ್ರಿ ಠಾಣೆ ಒಳಗಡೆ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದೆ. ಆದರೆ ಏನೂ ಕ್ರಮ ಆಗಿಲ್ಲ. ಶಾಂತಿ ನೆಲೆಸಬೇಕಾದರೆ ಪೊಲೀಸರ ಭಯ ಬೇಕು. ಆದರೆ ಭಯ ಇಲ್ಲದ ಕಾರಣ ಸಮಾಜ ಘಾತಕರಿಗೆ ಇದು ವರವಾಗಿದೆ ಎಂದು ತಿಳಿಸಿದರು.
ಮಾಜಿ ಎಂಎಲ್ಸಿ ಮೋನಪ್ಪ ಭಂಡಾರಿ ಮಾತನಾಡಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ, ಗೋ ಹತ್ಯೆ, ಲವ್ ಜೆಹಾದ್ ಪ್ರಕರಣಗಳು ಅಲ್ಲಲ್ಲಿ ಘರ್ಷಣೆಗೆ ಕಾರಣವಾಗುತ್ತಿದೆ. ಇದಕ್ಕೆ ಮೊದಲು ಕಡಿವಾಣ ಹಾಕಬೇಕು. ಜಿಲ್ಲಾಡಳಿತಕ್ಕೆ, ಪೊಲೀಸ್ ಅಧಿಕಾರಿಗಳಿಗೆ ಸರಕಾರ ಮಟ್ಟದಲ್ಲಿ ಒತ್ತಡ ಇದೆ. ಇದು ಅವರ ವರ್ತನೆಯಲ್ಲಿ, ಆಡಳಿತ ಶೈಲಿಯಲ್ಲಿ ಕಾಣುತ್ತಿದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಯೋಗೀಶ್ ಭಟ್ ಮಾತನಾಡಿ, ಮೂಲದಲ್ಲಿ ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಪತ್ತೆ ಮಾಡಿ ಬಂಧಿಸಿದರೆ ಪ್ರಕರಣವನ್ನು ಆರಂಭದಲ್ಲಿ ನಿಯಂತ್ರಣಕ್ಕೆ ತರಬಹುದು. ಉಳಾಯಿಬೆಟ್ಟಿನಲ್ಲಿ ಡ್ರಗ್ ಮಾಫಿಯಾ ಬೆಳೆಯುತ್ತಿದ್ದು, ಇದು ಕೂಡಾ ಘಟನೆಗೆ ಕಾರಣ ಆಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದರು.
ಹಿಂದೂ ಜಾಗರಣ ವೇದಿಕೆ ರಾಜ್ಯ ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್ ಮಾತನಾಡಿ, ಉಳಾಯಿಬೆಟ್ಟಿನಲ್ಲಿ ನಡೆದ ಘಟನೆಗೆ ಪೊಲೀಸ್ ವೈಫಲ್ಯವೇ ನೇರ ಕಾರಣ. ಹಲ್ಲೆ ನಡೆಯುತ್ತಿದ್ದ ಬಗ್ಗೆ ಪೊಲೀಸರಲ್ಲಿ ಮಹಿಳೆಯರು ಕಾಲು ಹಿಡಿದು ಬೇಡಿಕೊಂಡಿದ್ದರೂ ಅವರು ಏನೂ ಕ್ರಮ ಕೈಗೊಳ್ಳಲಿಲ್ಲ. ಕಳೆದ ಒಂದೂವರೆ ವರ್ಷದಿಂದ ಒಂದು ಕೋಮಿನ ಮಂದಿಗೆ ನಾವು ಏನು ಮಾಡಿದರೂ ಸರಿ ಎನ್ನುವ ಭಾವನೆ ಉಂಟಾಗಿದೆ. ಸರಕಾರದ ಮೇಲೆ ಜನರಿಗೆ ನಂಬಿಕೆ ಹೋದದಕ್ಕೆ ಸಮಾಜ ರಸ್ತೆಗೆ ಬಂದಿದೆ ಎಂದು ಹೇಳಿದರು.
ಡಿವೈಎಫ್ಐ ಮುಖಂಡ ಬಿ.ಕೆ.ಇಮ್ತಿಯಾಜ್ ಮಾತನಾಡಿ, ಪ್ರತಿ ಘಟನೆಯ ಹಿಂದೆ ವ್ಯವಸ್ಥಿತ ಷಡ್ಯಂತ್ರ ಇರುತ್ತದೆ. ಪೊಲೀಸ್ ಇಲಾಖೆ ಆರಂಭದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡರೆ ಮುಂದೆ ನಡೆಯುವ ಅಪಾಯವನ್ನು ತಡೆಗಟ್ಟಬಹುದು. ಅಲ್ಲದೆ ಗಲಭೆಗಳು ನಡೆದಾಗ ಪ್ರಚೋದನೆ ನೀಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಎಚ್ಪಿ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ವಿಎಚ್ಪಿ ಜಿಲ್ಲಾ ಕಾರ್ಯಾಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಸಿಪಿಐಎಂ ಮುಖಂಡ ಯಾದವ ಶೆಟ್ಟಿ, ಜಾಗತಿಕ ಬಂಟರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ಮಾಲಾಡಿ, ಸಾಮಾಜಿಕ ಕಾರ್ಯಕರ್ತ ಹನೀಫ್ ಪಾಜಪಳ್ಳ, ಬಿಷತ್ ಪ್ರತಿನಿಧಿ ಮಾಸ್ತಲ್ ಮೊಂತೇರೋ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಾನವ ಹಕ್ಕುಗಳ ಸಂಘಟನೆ ಮುಖಂಡ ಬಾಲಕೃಷ್ಣ ರೈ ಮುಂತಾದವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕ ಅಮ್ರಿತ್ ಪಾಲ್, ದಕ್ಷಿಣ ಕನ್ನಡ ಪೊಲೀಸ್ ಅಧೀಕ್ಷಕ ಡಾ.ಎಸ್.ಡಿ.ಶರಣಪ್ಪ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತುಳಸಿ ಮದ್ದಿನೇನಿ, ಉಪ ಮೇಯರ್ ಕವಿತಾ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಎಂಎಲ್ಸಿ ಬಾಲಕೃಷ್ಣ ಭಟ್, ಧರ್ಮದರ್ಶಿ ಹರಿಕೃಷ್ಣ ಪುನರೂರು, ಆರೆಸ್ಸೆಸ್ ಮುಖಂಡ ಪ್ರಕಾಶ್, ಮೀನುಗಾರ ಮುಖಂಡ ನಿತಿನ್ ಕುಮಾರ್ ಉಪಸ್ಥಿತರಿದ್ದರು.
ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ ನಡೆಯುತ್ತಿಲ್ಲ : ಕಾಮಾತ್ ಆರೋಪ
ಹಿತಕರ ಘಟನೆ ನಡೆಯಲೀ, ನಡೆಯದಿರಲಿ, ಪ್ರತಿ ಮೂರು ತಿಂಗಳಿಗೊಮ್ಮೆ ಆಯಾ ಠಾಣೆ ವ್ಯಾಪ್ತಿಯಲ್ಲಿ ಶಾಂತಿ ಸಭೆ ನಡೆಸುವುದು ಪೊಲೀಸ್ ಅಧಿಕಾರಿಗಳ ಕರ್ತವ್ಯ. ಆದರೆ ಯಾವುದೇ ಪೊಲೀಸ್ ಠಾಣೆಗಳಲ್ಲಿ ಶಾಂತಿ ಸಭೆ ನಡೆಯುತ್ತಿಲ್ಲ. ಗಲಭೆಗಳು ನಡೆದಾಗ ಮಾತ್ರ ಮಾತ್ರ ಶಾಂತಿ ಸಭೆ ನೆನಪಾಗುವುದು. ಇದು ಆಗಬಾರದು. ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳಿಗೆ ಸ್ವತಂತ್ರವಾಗಿ ಕರ್ತವ್ಯ ನಿರ್ವಹಿಸಲು ಅಧಿಕಾರ ನೀಡಿ. ಆಗ ತನ್ನಿಂತಾನೆ ಇಂತಹಾ ಘಟನೆಗಳು ಮರುಕಳಿಸುವುದು ತಪ್ಪುತ್ತದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹನುಮಂತ್ ಕಾಮತ್ ತಿಳಿಸಿದರು.
ಮುಸ್ಲಿಂ ಸಂಘಟನೆಯಿಂದ ಸಭೆ ಬಹಿಷ್ಕಾರ
ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಪ್ರಮುಖ ಮುಖಂಡರು ಈ ಸಭೆಯಲ್ಲಿ ಭಾಗವಹಿಸಬೇಕಿತ್ತು. ಅಲ್ಲದೆ ಘಟನೆ ನಡೆದ ಪ್ರದೇಶದ ಶಾಸಕ ಮೊಯ್ದಿನ್ ಭಾವ ಅವರಿಗೆ ಈ ಸಭೆಯ ಮಾಹಿತಿಯೇ ಹೋಗಿಲ್ಲ. ಅಲ್ಲದೆ ಗಲಭೆಗೆ ಕುಮ್ಮಕ್ಕು ನೀಡುವವರನ್ನು ಸಭೆಗೆ ಆಹ್ವಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಾವು ಸಭೆಯನ್ನು ಬಹಿಷ್ಕರಿಸುತ್ತೇವೆ ಎಂದು ಪಿಎಫ್ಐ ಮುಖಂಡ ಎ.ಎಂ.ಅತಾವುಲ್ಲ ತಿಳಿಸಿ ಸಭೆಯಿಂದ ಹೊರ ನಡೆದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮ ಸೇನೆ ಮುಖಂಡ ಕುಮಾರ್ ಮಾಲೆಮಾರ್, ಸಭೆ ಬಹಿಷ್ಕರಿಸಿ ಹೊರಗೆ ಹೋಗಿ ಉದ್ದಟತನ ಪ್ರದರ್ಶಿಸುತ್ತಿರುವುದು ಜಿಲ್ಲಾಡಳಿತ, ಅಧಿಕಾರಿಗಳಿಗೆ ಮಾಡಿದ ಅವಮಾನ. ಸಭೆ ಬಹಿಷ್ಕರಿಸುವುದಾದರೆ ಸಭೆಗೆ ಬಂದದ್ದಾದರೂ ಯಾಕೆ ಎಂದು ಪ್ರಶ್ನಿಸಿದರು. ಇದೇ ವೇಳೆ ಶಾಂತಿ ಸಭೆಯನ್ನು ಬಹಿಷ್ಕರಿಸುವುದಾಗಿ ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ಸಂಯುಕ್ತ ಮುಸ್ಲಿಮ್ ಜಮಾತ್ ಕಮಿಷನರ್ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.