ಕುಂದಾಪುರ: ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೋಮುಭಾವನೆ ಬಿತ್ತುತ್ತಿರುವ ಬಿಜೆಪಿ ನಾಯಕರಿಗೆ ಹಿಂದೂ ಸಂಘಟನೆಗಳು ಚೀಮಾರಿ ಹಾಕಿದ ಘಟನೆ ಗಂಗೊಳ್ಳಿಯಲ್ಲಿ ನಡೆದಿದೆ. ಕೇವಲ ಕೋಮು ಪ್ರಚೊದನೆ ನೀಡುವ ಭಾಷಣಗಳನ್ನೇ ಮಾಡಿಕೊಂಡು ಎರಡು ಸಮುದಾಯಗಳ ನಡುವೆ ವಿಷಬೀಜ ಬಿತ್ತಿ ವೋಟ್ ಬ್ಯಾಂಕ್ ರಾಜಕೀಯ ಮಾಡ ಬಂದವರಿಗೆ ಹಿಂದೂ ಸಂಘಟನೆ ಒಂದರ್ಥದಲ್ಲಿ ತಕ್ಕ ಪಾಠ ಕಲಿಸಿದೆ. ಆ ಮೂಲಕ ತಮ್ಮ ಸಮಸ್ಯೆಗಳಿಗೆ ಶಾಶ್ವತವಲ್ಲದಿದ್ದರೂ ತಾತ್ಕಾಲಿಕಪರಿಹಾರವನ್ನಾದರೂ ನೀಡಿಯಾರು ಎಂದು ಕರೆಯಿಸಿಕೊಂಡ ಲೋಕಸಭಾ ಸದಸ್ಯ ಬಿ.ಎಸ್. ಯಡಿಯೂರಪ್ಪ ಹಾಗೂ ಬಿಜೆಪಿ ನಾಯಕರಿಗೆ ಸಭೆ ಮುಗಿದ ತಕ್ಷಣವೇ ಧಿಕ್ಕಾರ ಕೂಗುವುದರ ಜೊತೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ?: ಕಳೆದ ವಾರದಲ್ಲಿ ಗಂಗೊಳ್ಳಿಯಲ್ಲಿ ನಡೆದ ಘರ್ಷಣೆಯೊಂದು ಬೆಳೆಯುತ್ತಾ ಹೋಗಿ ಪ್ರತಿಭಟನೆ, ಮರು ಪ್ರತಿಭಟನೆ, ಅಮಾಯಕರ ಮೇಲೆ ಪ್ರಕರಣ ದಾಖಲು, ಬಂಧನ, ನ್ಯಾಯಾಂಗ ಬಂಧನ ಹೀಗೆ ಪ್ರಕರಣ ಮುಂದುವರೆದು ಹಿಂದೆಂದೂ ಕಂಡರಿಯದ ಪ್ರತಿಭಟನೆ, ಹೆದ್ದಾರಿ ಬಂದ್, ಕಲ್ಲು ತೂರಾಟ.. ಕೊನೆಗೆ ಪೊಲೀಸರಿಂದ ಬಂಧಿತರ ಬಿಡುಗಡೆ ಪ್ರಹಸನ ನಡೆದಿತ್ತು.
ಇದೇ ಪ್ರತಿಭಟನೆ ಲಾಭ ಪಡೆಯಲು ಹುನ್ನಾರ ನಡೆಸಿದ್ದ ಬಿಜೆಪಿ ಶನಿವಾರ ಸಂಜೆ ನಾಲ್ಕು ಗಂಟೆಗೆ ಗಂಗೊಳ್ಳಿಯ ವೀರೇಶ್ವರ ಮತ್ತು ಉಮಾನಾಥೇಶ್ವರ ದೇವಸ್ಥಾನದಲ್ಲಿ ಸಭೆಯೊಂದನ್ನು ಹಮ್ಮಿಕೊಂಡಿತ್ತು. ಗಂಗೊಳ್ಳಿ ಪ್ರಕರಣಕ್ಕೆ ಸಂಬಂಧಿಸಿಯೇ ಸಂಸದ ಬಿ.ಎಸ್.ಯಡಿಯೂರಪ್ಪ ಭಾಷಣ ಮಾಡುತ್ತಾರೆ ಎಂದು ನಿರೀಕ್ಷೆ ಇಟ್ಟುಕೊಂಡೇ ಬಂದಿದ್ದ ಬಿಜೆಪಿಗರೂ ಸೇರಿದಂತೆ ಯಡಿಯೂರಪ್ಪ ಕೂಡಾ ಬಿಜೆಪಿ ಸಾಧನೆಯನ್ನು ಹಾಗೂ ನರೇಂದ್ರ ಮೋದಿಯನ್ನು ಹೊಗಳಿದ್ದು ಬಿಟ್ಟರೆ ಗಂಗೊಳ್ಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಂದಿಕೊಂಡು, ತಾಳ್ಮೆಯಿಂದ ಬದುಕಬೇಕು ಎಂದು ಹೇಳಿದ ಹಿತನುಡಿಯನ್ನು ಧಿಕ್ಕರಿಸಿದ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಧಿಕ್ಕಾರ ಕೂಗತೊಡಗಿದರು. ಇದೇ ಸಂದರ್ಭ ಪ್ರತಿಭಟನೆಗೆ ಮುನ್ನ ನಿರಪರಾಧಿಗಳನ್ನು ಬಂಧಿಸಿದ್ದ ಗಂಗೊಳ್ಳಿ ಠಾಣಾಧಿಕಾರಿ ಹಾಗೂ ಪ್ರಭಾರ ಎಸಿಪಿ ಅಣ್ಣಮಲೈಗೂ ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಸ್ಪೋಟಗೊಂಡ ಅಸಮಾಧಾನ: ಸಭೆಯಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ವೇದಿಕೆಯಿಂದ ನಿರ್ಗಮಿಸುತ್ತಿದ್ದಂತೆ ಕಾರ್ಯಕರ್ತರ ಮನದಲ್ಲಿ ಹೆಪ್ಪು ಗಟ್ಟಿದ್ದ ಆಕ್ರೋಶ ಉಗ್ರ ರೂಪದಲ್ಲಿ ಸ್ಪೋಟಗೊಂಡಿತು.
ಕಳೆದ ಕೆಲವು ದಿನಗಳಿಂದ ಗಂಗೊಳ್ಳಿಯಲ್ಲಿ ನಡೆದ ಘಟನಾವಳಿಗಳ ಕುರಿತು ಕಾರ್ಯಕರ್ತರ ಭಾವನೆಗಳಿಗೆ ಸ್ಪಂದಿಸಿ, ಬಿಎಸ್ವೈ ಮಾತನಾಡಲಿಲ್ಲ ಎನ್ನುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಯಿತು.
ಈ ಸಂದರ್ಭ ಮಾತನಾಡಿದ ಹಿಂದೂ ಜಾಗರಣಾ ವೇದಿಕೆಯ ರಾಜ್ಯ ಸಹ ಸಂಚಾಲಕ ಸತ್ಯಜಿತ್ ಸುರತ್ಕಲ್ ಅವರು, ರಾಜಕೀಯ ಪಕ್ಷ ಹಾಗೂ ಮುಖಂಡರುಗಳ ಕೃಪೆಯಿಂದಾಗಿ ಸಂಘಟನೆಗಳು ಬೆಳೆದು ಬಂದಿಲ್ಲ. ರಾಜಕೀಯ ಭಾಷಣವನ್ನು ಕೇಳಲೆಂದು ಜನ ಇಲ್ಲಿ ಒಟ್ಟಾಗಿಲ್ಲ ಎನ್ನುವುದನ್ನು ಮುಖಂಡರುಗಳು ಅರ್ಥ ಮಾಡಿಕೊಳ್ಳಬೇಕು. ಧ್ವನಿ ಸರಿಯಿಲ್ಲ ಎನ್ನುವ ನೆಪದಲ್ಲಿ ಕಾರ್ಯಕರ್ತರಿಗೆ ಸ್ಪಂದಿಸದೆ ಇರುವುದು ನಾಯಕರೆನಿಸಿಕೊಂಡವರಿಗೆ ಶೋಭೆಯಲ್ಲ. ಗಂಗೊಳ್ಳಿಯಲ್ಲಿ ನಡೆಯುತ್ತಿರುವ ಆಕ್ರಮ ಗೋ ಮಾಂಸ ಆಕ್ರಮ ಮಸೀದಿ ನಿರ್ಮಾಣ ಹಾಗೂ ಸಮಾಜ ವಿರೋಧಿ ಕೃತ್ಯಗಳ ವಿರುದ್ದ ಹಿಂದೂ ಸಮಾಜ ಮುಂದೆಯೂ ಸಂಘಟಿತ ಹೋರಾಟ ನಡೆಸಲಿದೆ ಎಂದು ಗುಡುಗಿದ ಅವರು ಪೊಲೀಸ್ ಇಲಾಖೆಯಲ್ಲಿ ಬೆರಳೆಣಿಕೆಯ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ದ ಮಾತ್ರ ನಮ್ಮ ಅಸಮಧಾನವಿದೆ. ಇಲಾಖೆಯಲ್ಲಿ ಕರ್ತವ್ಯ ದಕ್ಷ ಅಧಿಕಾರಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ, ಅವರುಗಳಿಗೆ ಗೌರವವನ್ನು ನೀಡಬೇಕಾದುದು ನಮ್ಮ ಹೊಣೆ ಎಂದು ಹೇಳಿದರು.
ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಚಾಲಕ ಧನಂಜಯ ಕುಂದಾಪುರ, ಅರವಿಂದ ಕೋಟೇಶ್ವg, ಮಹೇಶ್ ಪೂಜಾರಿ ಕೋಡಿ ಮುಂತಾದವರಿದ್ದರು.