ಬಂಟ್ವಾಳ(ವಿಟ್ಲ- ರವಿವರ್ಮ ಕೃಷ್ಣರಾಜ ಅರಸ ವೇದಿಕೆ), ಡಿ.7: ಭಾರತದ ಹಿರಿಮೆಯ ದ್ಯೋತಕವಾದ ರಾಷ್ಟ್ರೀಯ ಭಾವೈಕ್ಯತೆ, ಅಖಂಡತೆ ಹಾಗೂ ಸಾಮಾಜಿಕ ಸಾಮರಸ್ಯವನ್ನು ಉಳಿಸುವ ಹೊಣೆಗಾರಿಕೆ ಯುವ ಜನಾಂಗದ ಮೇಲಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ.
ದ.ಕ.ಜಿಲ್ಲಾಡಳಿತ, ದ.ಕ. ಜಿಪಂ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಬಂಟ್ವಾಳ ತಾಪಂ, ತಾಲೂಕು ಯುವಜನ ಒಕ್ಕೂಟ ಬಂಟ್ವಾಳ ಹಾಗೂ ಪ್ರಶಸ್ತಿ ವಿಜೇತ ಯುವಕ ಮಂಡಲ ವಿಟ್ಲ ಇವುಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಸಂಜೆ ವಿಟ್ಲದ ಮಾದರಿ ಶಾಲಾ ಆವರಣದಲ್ಲಿ ಆರಂಭಗೊಂಡ ಮೂರು ದಿನಗಳ ರಾಜ್ಯ ಮಟ್ಟದ ಯುವಜನ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯುವಜನರು ಪ್ರಯುತ್ನಶೀಲ ರಾದಾಗ ಸಮಾಜ ಬಲಗೊಳ್ಳುತ್ತದೆ. ಸುಂದರ ಸಮಾಜವನ್ನು ಕಟ್ಟುವ ನಿಟ್ಟಿ ನಲ್ಲಿ ಯುವಮನಸ್ಸುಗಳು ಒಗ್ಗೂಡಬೇ ಕಾಗಿದೆ ಎಂದು ಕರೆ ನೀಡಿದ ಸಚಿವ ರೈ, ವಿದ್ಯಾರ್ಥಿ ಹಾಗೂ ಯುವಕರ ಚಳವಳಿಗಳಿಂದ ಪರಿಣಾಮಕಾರಿ ಬದ ಲಾವಣೆಗಳು ನಡೆದಿವೆ ಎಂದರು.
‘ಸಂಭ್ರಮ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ವಿಟ್ಲದ ಮೇಲೆ ವಿಶ್ವಾಸವಿಟ್ಟು ಇಲಾಖೆಯಿಂದ ನೀಡಿದ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟು ಹಾಗೂ ವೈಭವದಿಂದ ಆಯೋಜಿಸಲಾಗಿದೆ ಎಂದು ಶ್ಲಾಘಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳಧ ಧರ್ಮಾ ಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ರಾಜ್ಯದೆಲ್ಲೆಡೆಯ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ವಿಟ್ಲದಲ್ಲಿ ಅಭಿನಂದನೀಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದ ಅವರು, ಇದಕ್ಕಾಗಿ ಅವಕಾಶ ಒದಗಿಸಿದ ಸಚಿವ ರಮಾನಾಥ ರೈ ಹಾಗೂ ಅಭಯಚಂದ್ರ ರನ್ನು ಅಭಿನಂದಿಸಿದರು.
ವಸ್ತು ಪ್ರದರ್ಶನದ ಮಳಿಗೆಗಳನ್ನು ಉದ್ಘಾಟಿಸಿದ ದ.ಕ ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಮಾತನಾಡಿ, ಯುವಜನ ಮೇಳಗಳಲ್ಲಿ ಭಾಗವಹಿ ಸುವ ಗ್ರಾಮೀಣ ಕಲಾ ತಂಡಗಳಿಗೆ ಪರಿಕರ ಖರೀದಿಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಆರ್ಥಿಕ ನೆರವು ನೀಡಬೇಕು ಎಂದು ವಿನಂತಿಸಿದರು. ಸನ್ಮಾನ: ಇತ್ತೀಚೆಗಷ್ಟೇ ನಿವೃತ್ತರಾದ ತಹಶೀಲ್ದಾರ್ ಬಿ.ಎಸ್.ಮಲ್ಲೇಸ್ವಾಮಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ರಮೇಶ್ ನಾಯಕ್ ರಾಯಿಯವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಶಾಸಕಿ ಶಕುಂತಳಾ ಶೆಟ್ಟಿ, ದ.ಕ. ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸಿ.ಕೆ.ಚಂದ್ರಕಲಾ, ಜಿಪಂ ಸದಸ್ಯರಾದ ಶೈಲಜಾ ಕೆ.ಟಿ.ಭಟ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ವಿಟ್ಲ ಗ್ರಾಪಂ ಅಧ್ಯಕ್ಷೆ ಭವಾನಿ ರೈ ಕೊಲ್ಯ, ರಿಸರ್ವ್ ಬ್ಯಾಂಕ್ ನಿರ್ದೇಶಕ ನವೀನ್ ಭಂಡಾರಿ, ಮಂಗಳೂರು ಸಹಾಯಕ ಆಯುಕ್ತ ಅಶೋಕ್, ಜಿ.ಪಂ. ಸಿಇಒ ತುಳಸಿ ಮದ್ದಿನೇನಿ, ಬಂಟ್ವಾಳ ಪ್ರಭಾರ ತಹಶೀಲ್ದಾರ್ ಮುಹಮ್ಮದ್ ಇಸ್ಹಾಕ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಿಫ್ರಿಯನ್ ಮಿರಾಂದ, ಸಂಯೋಜನೆ ಸಮಿತಿಯ ಅಧ್ಯಕ್ಷ ಮಾಧವ ಎಸ್.ಮಾವೆ, ಪ್ರಧಾನ ಸಂಚಾಲಕ ವಿ.ಎನ್.ಸುದರ್ಶನ ಪಡಿಯಾರ್, ತಾಲೂಕು ಕ್ರೀಡಾಧಿಕಾರಿ ನವೀನ್ ಪಿ.ಎಸ್., ಯುವಕ ಮಂಡಲದ ಅಧ್ಯಕ್ಷ ವಿ.ಎಸ್.ಲೋಕರಾಜ್, ಯುವಜನ ಒಕ್ಕೂಟದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಸ್ಮರಣ ಸಂಚಿಕೆಯ ಸಂಪಾದಕ ಅನಂತಕೃಷ್ಣ ಹೆಬ್ಬಾರ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಾಜ್ಯ ಯುವಜನ ಮೇಳ ಸಮಿತಿಯ ಕಾರ್ಯಾಧ್ಯಕ್ಷ ಎಂ.ಎಸ್.ಮುಹಮ್ಮದ್ ಪ್ರಸ್ತಾವನೆಗೈದರು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಸ್ವಾಗತಿಸಿದರು. ಜಿಪಂ ಉಪ ಕಾರ್ಯದರ್ಶಿ ಎನ್.ಆರ್.ಉಮೇಶ್ ವಂದಿಸಿದರು. ರಾಮಚಂದ್ರ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಯುವಜನತೆಗೆ ಅಂಕುಶ ಅನಿವಾರ್ಯ: ಡಾ.ಹೆಗ್ಗಡೆ
ಸಿನಿಮಾ ಹಾಗೂ ಆಧುನಿಕ ಪ್ರಪಂಚದ ಆಕರ್ಷಣೆಗಳಿಗೆ ಯುವಕರು ಬಲಿಯಾ ಗುತ್ತಿದ್ದು, ಅಂತಹ ಯುವ ಮನಸ್ಸುಗಳಿಗೆ ಸಂಸ್ಕೃತಿ -ಸಂಸ್ಕಾರದ ಕಡಿವಾಣದ ಜೊತೆಗೆ ಆಕರ್ಷಣೆಗಳನ್ನು ಮೀರಿ ನಿಲ್ಲುವ ಅಂಕುಶ ತೊಡಿಸ ಬೇಕಾದ ಅನಿವಾರ್ಯತೆ ಇದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅಭಿಪ್ರಾಯಿಸಿದರು.
ಮೇಳದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಿನಿಮಾಗಳು ತೋರುವ ಪ್ರಪಂಚವನ್ನೇ ನಿಜವೆಂದು ಭ್ರಮಿಸುವ ಯುಜನಾಂಗಕ್ಕೆ ಅದು ನಿಜವಲ್ಲ ಎಂದು ಅರಿವು ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಆಟೋಟ, ಸಾಫ್ಟ್ಟ್ವೇರ್ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ನಮ್ಮವರು ಸಾಧನೆ ಮಾಡುತ್ತಿದ್ದು, ಸಾಧಕರಿಗೆ ಅವಕಾಶಗಳಿಲ್ಲ ಎಂಬುದು ಸುಳ್ಳು ಎಂದ ಡಾ.ಹೆಗ್ಗಡೆ, ಯುವಕ-ಯುವತಿಯರ ಸಾಂಸ್ಕೃತಿಕ ಪ್ರೇರಣೆ ನೀಡುವ ಯುವಜನ ಮೇಳದ ಎಲ್ಲಾ ಸದಾಶಯಗಳು ನೇರವೇರಲಿ ಎಂದು ಹಾರೈಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಸಚಿವರು, ಸಂಸದರು, ಶಾಸಕರು, ಜಿಪಂ ಅಧ್ಯಕ್ಷರು, ಸದಸ್ಯರು ರಾಜಕೀಯವನ್ನೆಲ್ಲಾ ಮರೆತು ಹಸನ್ಮುಖಿಗಳಾಗಿದ್ದುದು ಸಭೆಯ ಗಮನ ಸೆಳೆಯಿತು. ಪ್ರತಿಯೊಬ್ಬರ ಭಾಷಣ ದಲ್ಲೂ ಪಕ್ಷಭೇದ ಮರೆತು ಪರಸ್ಪರ ಶುಭಾಶಯ-ಅಭಿನಂದನೆಗಳನ್ನು ಸಲ್ಲಿಸಿದ್ದು ಸಭಿಕರಿಗೆ ಖುಷಿ ಕೊಟ್ಟಿತು. ಈ ಸನ್ನಿವೇಶವನ್ನು ತಮ್ಮ ಅಧ್ಯಕ್ಷೀಯ ಮಾತಿನಲ್ಲಿ ಪ್ರಸ್ತಾಪಿ ಸಿದ ಡಾ.ವೀರೇಂದ್ರ ಹೆಗ್ಗಡೆ, ‘‘ವೇದಿಕೆಯ ಎಲ್ಲಾ ಗಣ್ಯರು ಯುವ ಜನ ಮೇಳದಲ್ಲಿ ಯುವಕ ರಾದರು, ಎಲ್ಲರ ಜೀವನೋತ್ಸಾಹ ಸಂತಸ ತಂದಿದೆ’’ ಎಂದರು.
ಮೆರುಗು ಹೆಚ್ಚಿಸಿದ ಮೆರವಣಿಗೆ…
ಕಾರ್ಯಕ್ರಮ ಆರಂಭಕ್ಕಿಂತ ಮುಂಚೆ ನಡೆದ ವೈಭವದ ಮೆರವಣಿಗೆ ಮೇಳದ ಮೆರುಗನ್ನು ಇಮ್ಮಡಿಗೊಳಿಸಿದೆ. ಮೇಗಿನಪೇಟೆಯ ಶಾಲೆಯ ಬಳಿಯಿಂದ ಆರಂಭಗೊಂಡ ಮೆರವಣಿಗೆಗೆ ಶಾಸಕಿ ಶಕುಂತಳಾ ಶೆಟ್ಟಿ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಕೊಂಬು, ಬಣ್ಣದ ಕೊಡೆ, ಚೆಂಡೆ, ಕಲಶ, ಅತಿಥಿಗಳು, ಅಳಿಕೆ ಸತ್ಯ ಸಾಯಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳ ಬ್ಯಾಂಡ್, ಭಾರತ್ ಸ್ಕೌಟ್ಸ್ ಗೈಡ್ಸ್ ತಂಡ, ನವಿಲು ನೃತ್ಯ, ಪೊಲೀಸ್ ಬ್ಯಾಂಡ್, ಹುಲಿವೇಷ, ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಹಾಗೂ ರೆಂಜರ್ಸ್ ತಂಡ, ಕರಗ ಕೋಲಾಟ, ಕಲ್ಲಡ್ಕ ಶಿಲ್ಪಾ ಬಳಗದ ಕಲಾ ತಂಡದ ಗೊಂಬೆ, ಕೀಲುಕುದುರೆ, ಕರಗ ನೃತ್ಯ, ಪುತ್ತೂರು ವಿವೇಕಾನಂದ ಕಾಲೇಜಿನ ಸ್ಕೌಟ್ ಮತ್ತು ಗೈಡ್ಸ್, ರೋವರ್ಸ್, ಎನ್ಸಿಸಿ ತಂಡ, ಬೆರಿಪದವು ಮೂಕಾಂಬಿಕಾ ಕೃಪಾ ಮುಖ್ಯಪ್ರಾಣ ವ್ಯಾಯಾಮ ಶಾಲೆಯ ತಾಲೀಮು, ಕೀಲು ಕುದುರೆ, ವಿಟ್ಲ ಶಾಲಾ ಎನ್ನೆಸ್ಸೆಸ್ ತಂಡ, ಶಾರ್ದೂಲ, ಯುವಜನ ಮೇಳದ ಕಲಾ ತಂಡ, ಚಿಕ್ಕಮಗಳೂರು ಡೊಳ್ಳು ಕುಣಿತ, ಬಂಟ್ವಾಳ ಶಾರದಾ ಆರ್ಟ್ಸ್ ಬಣ್ಣದ ಕೊಡೆ, ವಿಟ್ಲ ಹಾಗೂ ಬೋಳಾರದ ನಾಸಿಕ್ ಬ್ಯಾಂಡ್ ತಂಡಗಳು ಭಾಗವಹಿಸಿದ್ದವು.
ವಿಟ್ಲ ಪೇಟೆಯ ಇಕ್ಕೆಲಗಳಲ್ಲಿ ನೆರೆದಿದ್ದ ಸಾವಿರಾರು ಜನಸಮೂಹ ಯುವ ಜನ ಮೇಳದ ಸಂಭ್ರಮದ ಮೆರವಣಿಗೆಗೆ ಸಾಕ್ಷಿಯಾದರು.
ಮಳಿಗೆಗಳಲ್ಲಿ ಜನಮೇಳ: ಮೇಳದ ಪ್ರಯುಕ್ತ ವ್ಯವಸ್ಥೆಗೊಳಿಸಲಾದ ಬಹು ತೇಕ ಮಳಿಗೆಗಳಲ್ಲಿ ಜನರು ಕಿಕ್ಕಿರಿದು ಸೇರಿದ್ದರು. ಸ್ವ-ಸಹಾಯ ಗುಂಪುಗಳ ಉತ್ಪನ್ನಗಳ ಮಾರಾಟ ಮತ್ತು ಪ್ರದರ್ಶನ, ಕೃಷಿ ಉತ್ಪನ್ನ ಪ್ರದರ್ಶನ, ತೋಟ ಗಾರಿಕೆ ವಸ್ತು ಪ್ರದರ್ಶನ, ಆಧ್ಯಾತ್ಮಿಕ ಚಿತ್ರಗಳ ಪ್ರದರ್ಶನ, ಕೃಷಿ ಪರಿಕರಗಳು, ಸರ್ವಶಿಕ್ಷಾ ಅಭಿಯಾನ ಪ್ರದರ್ಶನಗಳು ವಿಶೇಷ ಗಮನ ಸೆಳೆಯುತ್ತಿವೆ.