ಮಂಗಳೂರು, ಡಿ.2: ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಶರಣಪ್ಪ ಎಸ್.ಡಿ. ಮತ್ತು ಬೆಳ್ತಂಗಡಿ ಠಾಣಾಧಿಕಾರಿ ಬಾಬು ಗೌಡ ಹಾಗೂ ಸಿಪಿಐ ಲಿಂಗಪ್ಪ ಪೂಜಾರಿಯವರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿ ಅಮಾನತುಗೊಳಿಸುವಂತೆ ಆದೇಶಿಸಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಎಸ್ಪಿ ಡಾ.ಶರಣಪ್ಪ ಎಸ್.ಡಿ., ಹೈಕೋರ್ಟ್ ಅಮಾನತು ಆದೇಶವನ್ನು ವಜಾಗೊಳಿಸಿ ಸರ್ವೋಚ್ಚ ನ್ಯಾಯಾಲಯ ನೀಡಿರುವ ಲಿಖಿತ ಆದೇಶ ತಮ್ಮ ಕೈ ಸೇರಿರುವುದಾಗಿ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಎಸ್ಪಿಯವರ ಕ್ರಮಗಳ ಬಗ್ಗೆ ಸರ್ವೋಚ್ಚ ನ್ಯಾಯಾಲಯದ ಮೆಚ್ಚುಗೆ ಸೂಚಿಸಿದೆ. ಮಾತ್ರವಲ್ಲದೆ ಹೈಕೋರ್ಟ್ ಹೊರಡಿಸಿರುವ ಆದೇಶ ಸಿಆರ್ಪಿಸಿ 482ರನ್ವಯ ಇಲ್ಲವಾಗಿದೆ. ಯಾರಿಗೂ ವಿಚಾರಣೆ ಮಾಡದೆ ಇಂತಹ ಆದೇಶಗಳನ್ನು ಹೊರಡಿಸಲು ಕಾನೂನಿನಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿರುವುದಾಗಿ ಎಸ್ಪಿ ವಿವರಿಸಿದರು.
ಉಜಿರೆ ತಿಮರೋಡಿ ಕುಂಜರ್ಪ ಕ್ಷೇತ್ರದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಸಂಬಂಧಿಸಿ ಶಶಿಕಲಾ ಜೆ. ಶೆಟ್ಟಿ ಎಂಬವರು ಜಿಲ್ಲಾ ಎಸ್ಪಿ ಹಾಗೂ ಬೆಳ್ತಂಗಡಿ ಪೊಲೀಸ್ ವೃತ್ತ ನಿರೀಕ್ಷಕರ ವಿರುದ್ಧ ಹೈಕೋರ್ಟ್ನಲ್ಲಿ ದಾವೆ ಹೂಡಿದ್ದರು. ಈ ಕುರಿತಾದ ತೀರ್ಪಿನಲ್ಲಿ ಜುಲೈ 30ರಂದು ಹೈಕೋರ್ಟ್ ಎಸ್ಪಿ ಮತ್ತು ಸಿಪಿಐ ಅವರನ್ನು ಅಮಾನತುಗೊಳಿಸುವಂತೆ ಆದೇಶಿಸಿತ್ತು. ಈ ಆದೇಶದ ವಿರುದ್ಧ ಸರಕಾರದ ಸಹಕಾರದೊಂದಿಗೆ ಎಸ್ಪಿ ಡಾ.ಶರಣಪ್ಪ ಎಸ್.ಡಿ. ಹಾಗೂ ಬೆಳ್ತಂಗಡಿ ಸಿಪಿಐ ಸುಪ್ರೀಂಕೋರ್ಟ್ಗೆ ಸೆ.26ರಂದು ಪ್ರತ್ಯೇಕ ಮೇಲ್ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.