ಕುಂದಾಪುರ: ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ ಪೊಲೀಸರು ಶುಕ್ರವಾರ ರಾತ್ರಿ ಇಬ್ಬರನ್ನು ಬಂಧಿಸಿದ್ದಾರೆ.
ತೆಕ್ಕಟ್ಟೆ ಆಭರಣ ಶೋರೂಮ್ ಎದುರು ವಾಹನ ತಪಾಸಣೆ ನಡೆಸುತ್ತಿರುವ ವೇಳೆ ಬಿಳಿ ಬಣ್ಣದ ಪೋರ್ಸ್ ಟ್ರಾವೆಲ್ಲರ್ ಗೂಡ್ಸ್ ವಾಹನ ನಿಲ್ಲಿಸಲು ಸೂಚನೆ ನೀಡಿದಾಗ ವಾಹನ ನಿಲ್ಲಿಸದೆ ಪರಾರಿಯಾಗಿದ್ದು ಬೆನ್ನಟ್ಟಿದ ಪೊಲೀಸರು ಕನ್ನುಕೆರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಡ್ಡಗಟ್ಟಿ ವಶಕ್ಕೆ ತೆಗೆದುಕೊಂಡಿದ್ದು ವಾಹನದಲ್ಲಿ 5 ಜಾನುವಾರುಗಳನ್ನು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಪತ್ತೆಯಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಕಾಮತ್(54) ಹಾಗೂ ನಂದ್ಕುಮಾರ್(45) ಅವರನ್ನು ಬಂಧಿಸಲಾಗಿದೆ. ಜಾನುವಾರುಗಳನ್ನು ವಧಿಸಲು ಸಾಗಿಸುತ್ತಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. 5 ಜಾನುವಾರುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 20,000 ಆಗಿರುತ್ತದೆ. ಕರ್ನಾಟಕ ಗೋಹತ್ಯೆ ತಡೆ ಕಾಯಿದೆಯಡಿ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.