ಮಂಗಳೂರು.ನ.24 : ದಿವಂಗತ ಪೋಪ್ ಜಾನ್ ಪಾಲ್- ದ್ವಿತೀಯ ಅವರನ್ನು ಸಂತ ಪದವಿಗೇರಿಸಿದ ಗೌರವಾರ್ಥ ಹಾಗೂ 1986ರ ಫೆ.6ರಲ್ಲಿ ಅವರು ಮಂಗಳೂರಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಬಜಪೆಯಲ್ಲಿ ನಿರ್ಮಿಸಲಾದ ಪುಣ್ಯಕ್ಷೇತ್ರದಲ್ಲಿ ಸ್ಥಾಪಿಸಲಾಗುವ ಅವರ ಕಂಚಿನ ಪ್ರತಿಮೆಯನ್ನು ವಾಹನ ಜಾಥಾ ಮೂಲಕ ಮಂಗಳೂರಿನಿಂದ ಬಜಪೆಗೆ ಭಾನುವಾರ ಕೊಂಡೊಯ್ಯಲಾಯಿತು.
ಬಿಷಪ್ ಹೌಸ್ ಆವರಣದಲ್ಲಿ ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಅವರು ‘ವಾಹನ ಜಾಥಾ’ಕ್ಕೆ ಚಾಲನೆ ನೀಡಿ, ಆಶೀರ್ವಚನ ನೀಡಿದರು. ವಿಕಾರ್ ಜನರಲ್ ಡೆನ್ನಿಸ್ ಮೋರಸ್ ಪ್ರಭು, ಬಜಪೆ ಪ್ಯಾರಿಶ್ ಪ್ರೀಸ್ಟ್ ರೆ.ಫಾ.ಲಿಯೋ ಲೋಬೋ , ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
ಆರು ಅಡಿ ಎತ್ತರ ಹಾಗೂ ಸುಮಾರು ಒಂಬತ್ತು ಟನ್ ಭಾರದ ಕಂಚಿನ ಪ್ರತಿಮೆಯನ್ನು ಇಂಡೋನೇಶಿಯಾದಲ್ಲಿ ತಯಾರಿಸಲಾಗಿದ್ದು, ನ.27ರಂದು ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ. ಪ್ರತಿಮೆಯನ್ನು ಭಾರತದ ವ್ಯಾಟಿಕನ್ ರಾಯಭಾರಿ ಆರ್ಚ್ ಬಿಷಪ್ ಸಾಲ್ವತೋರ್ ಪೆನಾಕ್ಕಿಯೊ ಅವರು ಕೊಡುಗೆಯಾಗಿ ನೀಡಿದ್ದಾರೆ.