ಕುಂದಾಪುರ: ಸಾಲಿಗ್ರಾಮ, ಕಾರ್ಕಡ ಸಮೀಪದ ನೆಲ್ಲಿಬೆಟ್ಟುವಿನಲ್ಲಿ ಜಾರ್ಖಂಡ್ ಮೂಲದ ಯುವತಿಯೋರ್ವಳು ಅನುಮಾನಸ್ಪದವಾಗಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದ್ದು ತನಿಖೆಯ ಬಳಿಕ ಆಕೆ ಜಾರ್ಖಂಡ್ ನಿಂದ ಸಾಲಿಗ್ರಾಮಕ್ಕೆ ಬಂದವಳೆಂದು ತಿಳಿದುಬಂದಿದೆ.
ಜಾರ್ಖಂಡ್ ಮೂಲದ ಹುಲ್ಮನಿ ಮಾರಾಂಡಿ (23) ಆತ್ಮಹತ್ಯೆಗೆ ಶರಣಾದವಳು.
ಮನೆಗೆಲಸದ ಯುವತಿ : ಸಾಲಿಗ್ರಾಮ ಸಮೀಪದ ಯಡಬೆಟ್ಟು ಗೋಪಾಲಕೃಷ್ಣ ದೇವಸ್ಥಾನ ರಸ್ತೆಯ ಮನೆಗೆ ಕಳೆದ ನಾಲ್ಕೈದು ದಿನಗಳ ಹಿಂದೆ ಈ ಯುವತಿಯನ್ನು ಮನೆಕೆಲಸಕ್ಕಾಗಿ ಕರೆತಂದಿದ್ದರು. ಮೊದಲಿದ್ದ ಕೆಲಸದವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಈ ಯುವತಿ ಇಲ್ಲಿಗಾಗಿ ಕೆಲಸಕ್ಕಾಗಿ ಬಂದಿದ್ದಳೆನ್ನಲಾಗಿದೆ. ಕೆಲಸಕಕಗಿ ಬಂದ ಈ ಯುವತಿ ಶನಿವಾರದಿಂದ ನಾಪತ್ತೆಯಾದ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆತ್ಮಹತ್ಯಗೆ ಶರಣಾದ ಯುವತಿ ಆಕೆಯೇ ಇರಬಹುದು ಎಂಬ ನಿಟ್ಟಿನಲ್ಲಿ ತನಿಖೆ ಸಾಗಿದಾಗ ಆಕೆ ಅದೇ ನಾಪತ್ತೆಯಾದ ಯುವತಿಯೆಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ.
ತೀರ ಬಡಕುಟುಂಬದವಳಾಗಿದ್ದ ಹುಲ್ಮನಿ ಮಾರಂಡಿ ವಿವಾಹಿತೆಯಾಗಿದ್ದು, ಗಂಡನನ್ನು ಕಳೆದುಕೊಂಡಿದ್ದಳೆಂಬ ಮಾಹಿತಿಯೂ ಇದೆ. ಕಷ್ಟದ ಸಲುವಾಗಿ ಈಕೆ ಸಾಲಿಗ್ರಾಮದ ಈ ಮನೆಗೆ ಕೆಲಸಕ್ಕಾಗಿ ಬಂದಿದ್ದಳೆನ್ನಲಾಗಿದೆ.
ಹಲವು ಅನುಮಾನ, ಕುತೂಹಲ: ಕೆಲಸ ಮಾಡುವ ಮನೆಯಿಂದ ಅಣತಿ ದೂರದಲ್ಲಿರುವ ನೆಲ್ಲಿಬೆಟ್ಟುವಿನಲ್ಲಿ ಖಾಸಗಿ ಕಂಪನಿಯೊಂದು ಖರೀದಿಸಿರುವ ಖಾಲಿ ಸ್ಥಳದಲ್ಲಿ ಭಾನುವಾರ ಯುವತಿ ಆತ್ಮಹತ್ಯಗೆ ಶರಣಾಗಿದ್ದು, ಸ್ಥಳೀಯರು ಸಂಜೆ ವೇಳೆ ಶವವನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಯುವತಿ ಅನುಮಾನಸ್ಪದ ರೀತಿಯಲ್ಲಿ ಅಕೇಷಿಯಾ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆ ಮಾಡಿಕೊಂಡ ಪಕ್ಕದಲ್ಲೆ ಶಾಲು, ಹೊದೆಯುವ ವಸ್ತ್ರ ಹಾಗೂ ಶಿಲುಬೆಯಿರುವ ಸರವೊಂದು ಪತ್ತೆಯಾಗಿದೆ ಹಾಗೂ ಸ್ಥಳೀಯರನ್ನು ಹೊರತುಪಡಿಸಿ ಅನ್ಯರಿಗೆ ಈ ಸ್ಥಳ ಅಪರಿಚಿತವಾಗಿದ್ದು ಪ್ರಕರಣದ ಕುರಿತು ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಘಟನಾ ಸ್ಥಳಕ್ಕೆ ಬ್ರಹ್ಮಾವರ ವ್ರತ್ತನಿರೀಕ್ಷಕ ಅರುಣ ನಾಯ್ಕ್ ಹಾಗೂ ಕೋಟ ಠಾಣಾಧಿಕಾರಿ ಕೆ.ಆರ್ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಾರ್ಖಂಡಿನಿಂದ ಯುವತಿಯ ಕುಟುಂಬಿಕರು ಇಲ್ಲಿಗೆ ಆಗಮಿಸುತ್ತಿದ್ದು ಸದ್ಯ ಶವವನ್ನು ಕುಂದಾಪುರ ಶವಗಾರದಲ್ಲಿ ಇಡಲಾಗಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.