ಆರೋಗ್ಯ

ಕೊರಗ ಸಮುದಾಯಕ್ಕೆ ಆಶಾಕಿರಣವಾಗಲಿದೆ ‘ಆರೋಗ್ಯ ಸೇತು’ | ಪಿಎಂ- ಜನ್‌ಮನ್‌ ಅಡಿ ಉಡುಪಿ ಜಿಲ್ಲೆಗೆ 4 ಸಂಚಾರಿ ಆರೋಗ್ಯ ಘಟಕ ಮಂಜೂರು

Pinterest LinkedIn Tumblr

ಕೊರಗ ಸಮುದಾಯಗಳಿರುವ 250ಕ್ಕೂ ಅಧಿಕ ಹಾಡಿಗಳ ಜನರಿಗೆ ಅಗತ್ಯ ಚಿಕಿತ್ಸೆಗೆ ಕ್ರಮ

(ವಿಶೇಷ ವರದಿ- ಯೋಗೀಶ್ ಕುಂಭಾಶಿ)

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಹಾಡಿಗಳಲ್ಲಿ ಬದುಕುತ್ತಿರುವ ಬುಡಕಟ್ಟು ಸಮುದಾಯವಾದ ಕೊರಗ ಸಮುದಾಯದ ಜನರ ಮನೆ ಬಾಗಿಲಿಗೆ ತೆರಳಿ ಪ್ರಾಥಮಿಕ ಆರೋಗ್ಯ ಸೇವೆ ನೀಡುವ ಸಂಚಾರಿ ಆರೋಗ್ಯ ಘಟಕಗಳ ಸೇವೆ ‘ಆರೋಗ್ಯ ಸೇತು’ ಚಾಲನೆಗೊಂಡಿದೆ. ಜಿಲ್ಲೆಗೆ 4 ಸಂಚಾರಿ ಆರೋಗ್ಯ ಘಟಕ ಮಂಜೂರಾಗಿದ್ದು ಕಾರ್ಯನಿರ್ವಹಿಸುತ್ತಿದೆ.

ಪಿಎಂ- ಜನ್ ಮನ್ ಯೋಜನೆಯಡಿ ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಬೈಂದೂರು ಹಾಗೂ ಕಾರ್ಕಳ ತಾಲೂಕಿಗೆ ಒಂದರಂತೆ ಸಂಚಾರಿ ಆರೋಗ್ಯ ಘಟಕ ಕಾರ್ಯಾಚರಿಸುತ್ತಿದೆ. ಈ ತಾಲೂಕುಗಳ ವ್ಯಾಪ್ತಿಯ ದುರ್ಗಮ ಮತ್ತು ಆರೋಗ್ಯ ಸೇವೆಗಳಿಂದ ವಂಚಿತರಾಗಿರುವ ಆದಿವಾಸಿ ಜನರು ಇರುವ ಪ್ರದೇಶಗಳಲ್ಲಿ ಗುರುತಿಸಿ, ಅಲ್ಲಿಗೆ ಈ ವಾಹನದ ಮೂಲಕ ತೆರಳಿ ತಪಾಸಣೆ, ಅಗತ್ಯವಿರುವ ಆರೋಗ್ಯ ಸೇವೆ ಹಾಗೂ ಆರೋಗ್ಯ ಶಿಕ್ಷಣ ನೀಡುವುದಾಗಿದೆ. ಜಿಲ್ಲೆಯಲ್ಲಿನ ಕೊರಗ ಸಮುದಾಯದವರಲ್ಲಿ ಅಗತ್ಯವುಳ್ಳ ಜನರಿಗೆ ಚಿಕಿತ್ಸೆ ನೀಡುವ ಯೋಜನೆ ಇದಾಗಿದೆ.

ಹೀಗಿದೆ ಕಾರ್ಯನಿರ್ವಹಣೆ: ಪ್ರಧಾನ ಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂಜನ್‌ಮನ್) ಯೋಜನೆಯಡಿ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಬುಡಕಟ್ಟು ಜನಾಂಗ ಜಾಸ್ಥಿಯಾಗಿರುವ 6 ಪ್ರಮುಖ ಜಿಲ್ಲೆಗಳಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಮೈಸೂರು, ಚಾಮರಾಜನಗರ, ಮಡಿಕೇರಿ, ದಕ್ಷಿಣ ಕನ್ನಡ, ಉಡುಪಿ,  ಚಿಕ್ಕಮಗಳೂರು ಜಿಲ್ಲೆಯಲ್ಲಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲಾಗಿದೆ. ಉಡುಪಿ ಜಿಲ್ಲೆಯ ಮಟ್ಟಿಗೆ ಕೊರಗ ಸಮುದಾಯವನ್ನು ಕೇಂದ್ರೀಕರಿಸಿಕೊಂಡು ಯೋಜನೆ ಸಾಗುತ್ತಿದೆ. ಜಿಲ್ಲೆಯಲ್ಲಿ ನವೆಂಬರ್ ತಿಂಗಳಿನಿಂದಲೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಳತ್ವದಲ್ಲಿ ಐಟಿಡಿಪಿ ಇಲಾಖೆಯ ಸಹಕಾರದೊಂದಿಗೆ ಮೊದಲ ಹಂತವಾಗಿ ಈ ಘಟಕಗಳು ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರ ಮತ್ತು ರಾಜ್ಯದ ಸಹಭಾಗಿತ್ವ ಈ ಯೋಜನೆ ರೂಪುಗೊಂಡಿದ್ದು ಕರ್ನಾಟಕ ರಾಜ್ಯದಲ್ಲಿ ಆರೋಗ್ಯ ಸೇತು ಎಂಬ ಹೆಸರಿನಲ್ಲಿ ಯೋಜನೆಗೆ ಡಿ.19 ರಂದು ಸಿಎಂ ಅಧೀಕೃತ ಚಾಲನೆ ನೀಡಿದ್ದಾರೆ.

ಘಟಕದಿಂದ ಪ್ರಯೋಜನವೇನು?: ಕೊರಗ ಸಮುದಾಯದವರಲ್ಲಿ ಬಹುತೇಕರಿಗೆ ಅಪೌಷ್ಟಿಕತೆ, ಹಾಗೂ ಬೇರೆಬೇರೆ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುವುದು ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರುವ ಗಂಭೀರ ವಿಚಾರ. ಅವರ ಆರೋಗ್ಯ ಸುಧಾರಣೆಗೆ ಘಟಕ ಸಹಕಾರಿಯಾಗಲಿದೆ. ಜತೆಗೆ ಮದ್ಯ, ಇನ್ನಿತರ ಚಟಗಳಿಂದ ದೂರವಾಗಲು ಆರೋಗ್ಯ ಶಿಕ್ಷಣವನ್ನು ಸಹ ನೀಡಲಾಗುತ್ತದೆ. ಒಟ್ಟಾರೆ ಆದಿವಾಸಿಗಳ ಆರೋಗ್ಯ ಸುಧಾರಣೆಯೇ ಗುರಿಯಾಗಿದೆ.

ಯಾವೆಲ್ಲ ಪ್ರದೇಶಗಳಿಗೆ ಭೇಟಿ?: ಉಡುಪಿ ಜಿಲ್ಲೆಯಲ್ಲಿ ಒಟ್ಟಾರೆಯಾಗಿ ಕೊರಗ ಸಮುದಾಯಗಳಿರುವ 280 ಹಾಡಿಗಳನ್ನು ಗುರುತಿಸಲಾಗಿದೆ. ಅವುಗಳ ಪೈಕಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಕನಿಷ್ಠ 5 ಕಿ.ಮೀ. ದೂರವಿರುವ ಹಾಡಿಗಳನ್ನು ಈ ಘಟಕದ ವ್ಯಾಪ್ತಿಗೆ ಆಯ್ಕೆ ಮಾಡಲಾಗಿದೆ. ಕುಂದಾಪುರ ತಾಲೂಕಿನ ರಟ್ಟಾಡಿ, ನಡಂಬೂರು, ಅಮಾಸೆಬೈಲು, ಜಡ್ಡಿನಗದ್ದೆ, ಕೆಳಸುಂಕ, ತೊಂಬಟ್ಟು, ಹಂಚಿಕಟ್ಟೆ, ಅರಸಮ್ಮಕಾನು, ಶೇಡಿಮನೆ, ಮಾಂಡಿ ಮೂರುಕೈ, ಹೆಂಗವಳ್ಳಿ. ಉಡುಪಿ (ಬ್ರಹ್ಮಾವರ, ಕಾಪು ಸಹಿತ): ಮಟಪಾಡಿ, ಎಂಜಿ ಕಾಲೋನಿ, ಅಚ್ಲಾಡಿ, ರಂಗನಕೆರೆ ಎಸ್ಟಿ ಕಾಲೋನಿ, ಹಳೆಕೋಟೆ ಜೆಡ್ಡು, ಕೆಳಾರ್ಕಳಬೆಟ್ಟು, ನೇಜಾರು ನೀಡಂಬಳ್ಳಿ, ಉಚ್ಚಿಲ ಮುಳ್ಳುಗುಡ್ಡೆ, ಅದಮಾರು, ಮೂಡಾಬೆಟ್ಟು, ಕುಂಜಿಲ್ ಗುಡ್ಡೆ, ಬಂಡ್ಸಾಲೆ, ಕುತ್ಯಾರು ಎಸ್ಟಿ ಕಾಲೋನಿ, ಎಸ್ಟಿ ಕಾಲೋನಿ ಪಣಿಯೂರು, ದೇವೇಗೌಡ ಬಡಾವಣೆ, ಪಾದೂರು, ಎಸ್ಟಿ ಕಾಲೋನಿ 92 ಹೇರೂರು. ಕಾರ್ಕಳ (ಹೆಬ್ರಿ ಸಹಿತ): ಸೋಮೇಶ್ವರ, ಸೀತಾನದಿ, ಮಂಡೆಗದ್ದೆ, ಕಬ್ಬಿನಾಲೆ, ಪಡುಕುಡೂರು, ಮುಟ್ಲುಪಾಡಿ, ಮುಂಡ್ಲಿ, ಶಿರ್ಲಾಲು, ನೂರಾಲುಬೆಟ್ಟು, ಗುಮ್ಮೆಟ್ಟು, ಬಾರಾಡಿ. ಬೈಂದೂರು: ಕೆರಾಡಿ, ಹಯ್ಯಂಗಾರು, ಬೆಳ್ಳಾಲ, ಮೋರ್ಟು, ಉದಯನಗರ, ಮುದೂರು, ಕುಂಜ್ಞಾಡಿ, ಕಾಲ್ತೋಡು, ಉಳ್ಳೂರು, ತೂದಳ್ಳಿ,ಮುಳ್ಳಿಬೇರು.

ಸಂಚಾರಿ ಘಟಕದ ಸೇವೆಗಳು: ಆರೋಗ್ಯ ಸೇವೆಗಳಾದ ತಾಯಿ ಮಕ್ಕಳ ಆರೋಗ್ಯ, ಅಪೌಷ್ಟಿಕತೆ ತಪಾಸಣೆ, ಸಾಂಕ್ರಾಮಿಕ ರೋಗಗಳಾದ ಕ್ಷಯ, ಮಲೇರಿಯಾ, ಡೆಂಗೆ, ಕುಷ್ಟ ರೋಗ, ಎಚ್‌ಐವಿ, ಹಾಗೂ ಅಸಾಂಕ್ರಾಮಿಕ ರೋಗಗಳಾದ ರಕ್ತ ಒತ್ತಡ, ಮಧುಮೇಹ, ಕ್ಯಾನ್ಸರ್, ಮತ್ತು ಮಾನಸಿಕ ರೋಗಗಳು, ಮದ್ಯಪಾನ, ಇತರೆ ವ್ಯಸನಗಳ ಬಗ್ಗೆ, ಸಿಕಲ್ ಸೆಲ್ ರೋಗ, ಪಿಎಂ-ಜೆಎವೈ (ಆಯುಷ್ಮಾನ್) ನೋಂದಣಿ ಸೇವೆಗಳು ಇದರಲ್ಲಿ ಲಭ್ಯವಿದೆ. ಸದ್ಯ ಈ ಘಟಕಗಳಿಗೆ ವಾಹನದ ವ್ಯವಸ್ಥೆಯೂ ಆಗಿದ್ದು ಅದರ ಮೂಲಕ ಕೊರಗ ಸಮುದಾಯದ ಹಾಡಿಗಳಿಗೆ ತೆರಳಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಚಾರಿ ಘಟಕದಲ್ಲಿ ತಲಾ ಒಬ್ಬರು ವೈದ್ಯರು, ಶುಶ್ರೂಷಕಿ ಹಾಗೂ ಪ್ರಯೋಗಶಾಲಾ ತಂತ್ರಜ್ಞರು ಇರುತ್ತಾರೆ. ವಾರದಲ್ಲಿ ಐದು ದಿನ ಈ ಘಟಕ ಕಾರ್ಯಾಚರಿಸಲಿದ್ದು, ವಾರಕ್ಕೊಮ್ಮೆ ಹಾಡಿಯ ಮನೆಗೆ ಭೇಟಿ ನೀಡಿ, ಚಿಕಿತ್ಸೆ ನೀಡಲಿದ್ದಾರೆ. ಔಷಧಿಯನ್ನು ಸಮೀಪದ ಸರಕಾರಿ ಆಸ್ಪತ್ರೆಗಳಿಂದ ಪಡೆದುಕೊಳ್ಳಲಾಗುತ್ತದೆ. ಗಂಭೀರ ಸಮಸ್ಯೆಗಳಿದ್ದರೆ ಹೆಚ್ಚಿನ ಚಿಕಿತ್ಸೆಗೂ ಅವಕಾಶ ಮಾಡಿಕೊಡಲಾಗುತ್ತದೆ‌.

ಜಿಲ್ಲೆಯಲ್ಲಿ ಕೊರಗ ಸಮುದಾಯದವರು ವಾಸವಿರುವ ಹಾಡಿಗಳಿಗೆ ಭೇಟಿ ನೀಡಿ, ಆರೋಗ್ಯ ಸೇವೆ ನೀಡಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 4 ಸಂಚಾರಿ ಆರೋಗ್ಯ ಘಟಕ ಕಾರ್ಯಚರಿಸುತ್ತಿದೆ. ಈ ಮೂಲಕ ತಳ ಸಮುದಾಯಕ್ಕೆ ಸುವ್ಯಸ್ಥಿತ ಆರೋಗ್ಯ ಸೇವೆ ನೀಡಲಾಗುತ್ತಿದೆ‌. – ಡಾ| ಚಿದಾನಂದ ಸಂಜು, ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿ

Comments are closed.