ಉಡುಪಿ: ಕುಕ್ಕೆಹಳ್ಳಿಯ ಯುವಕನೋರ್ವ ಆತ್ಮಹತ್ಯೆಗೈದ ರೀತಿಯಲ್ಲಿ ಪತ್ತೆಯಾದ ಶವ ಇದೀಗ ತನಿಖೆಯಿಂದ ಕೊಲೆ ಎಂದು ಸಾಬೀತಾಗಿದ್ದು ಆರೋಪಿಯನ್ನು ಬಂಧಿಸಲಾಗಿದೆ.

ಸೆ.14 ರಂದು ಜಿಲ್ಲೆಯ ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ-ಬಜೆ ಎಂಬಲ್ಲಿನ ಹಾಡಿಯಲ್ಲಿ ನೇಣು ಬಿಗಿದು ಸ್ಥಿತಿಯಲ್ಲಿ 22 ವರ್ಷ ಪ್ರಾಯದ ಕೇರಿಕ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಮೃತ ದೇಹ ಕಂಡು ಬಂದಿತ್ತು. ಈ ಬಗ್ಗೆ ಮೃತನ ಅತ್ತೆ ಶೈಲಜಾ ಕರ್ಕೇರಾ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಈ ಬಗ್ಗೆ ತನಿಖೆಯನ್ನು ಕೈಗೊಳ್ಳಲಾಗಿತ್ತು.
ಮೃತ ಕೃತಿಕ ಜೆ.ಸಾಲಿಯಾನ್ನ ಸಂಬಂಧಿಕರು ಕೃತಿಕನ ಸಾವು ಹಾಗೂ ಆತನ ಬ್ಯಾಂಕ್ನಲ್ಲಿದ್ದ ಲಕ್ಷಾಂತರ ಹಣ ಸಂಪೂರ್ಣ ಡ್ರಾ ಆಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಈ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಮಚೀಂದ್ರ ಹಾಕೆ, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತ ಪದ್ಮನಾಭ, ಹಿರಿಯಡ್ಕ ಪಿ.ಎಸ್.ಐ ಅನಿಲ್ ಬಿ ಎಮ್ ಹಾಗೂ ಅವರ ತಂಡದವರಿಗೆ ಕೂಲಂಕುಷವಾಗಿ ಮಾಹಿತಿಯನ್ನು ಕಲೆ ಹಾಕುವಂತೆ ನಿರ್ದೇಶನ ನೀಡಿದ್ದರು.
ಅದರಂತೆ ಮೃತನ ಬ್ಯಾಂಕ ಖಾತೆಯ ಮಾಹಿತಿ, ಬ್ಯಾಂಕಿನ ಸಿ.ಸಿ.ಟಿ.ವಿ, ಸ್ಥಳೀಯ ಮಾಹಿತಿ, ತಾಂತ್ರಿಕ ಮಾಹಿತಿ ಹಾಗೂ ಮೊಬೈಲ್ ಪೋನ್ ಮಾಹಿತಿಗಳನ್ನು ಸಂಗ್ರಹಿಸಿ ಆತನ ಗೆಳೆಯರ ಬಗ್ಗೆ ಮಾಹಿತಿ ಪಡೆದ ಪೊಲೀಸರು ಆತನ ಸಂಬಂಧಿ ದಿನೇಶ ಸಫಲಗನ ಬಗ್ಗೆ ಪೊಲೀಸರು ಕಳೆದ 15 ದಿನಗಳಿಂದ ಹಗಲು-ರಾತ್ರಿ ಆತನ ಚಲನವಲನಗಳ ಬಗ್ಗೆ, ಮೃತನು ದಿನೇಶ ಸಫಲಿಗನೊಂದಿಗೆ ಒಡನಾಟ ಹೊಂದಿದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ್ದು ಅಲ್ಲದೇ ಅವರೊಳಗೆ ಹಣದ ವ್ಯವಹಾರ ನಡೆದಿರುವುದನ್ನು ತನಿಖೆಯಲ್ಲಿ ಪತ್ತೆ ಹಚ್ಚಿದ್ದಾರೆ.
ಉಡುಪಿ ಕುಕ್ಕೆಹಳ್ಳಿ ನಿವಾಸಿ ದಿನೇಶ ಸಫಲಗ (42) ಪ್ರಕರಣದಲ್ಲಿ ಬಂಧಿತ ಆರೋಪಿ. ಈತ ಈ ಹಿಂದೆ 10 ವರ್ಷ ಮುಂಬಯಿಯ ಮುಲಂಡನಲ್ಲಿ ಅಪೂರ್ವ ಹೋಟೆಲ್ನಲ್ಲಿ ಉದ್ಯೋಗಿಯಾಗಿದ್ದ. ಹಣದ ಸಮಸ್ಯೆಯಿಂದ ಊರಿಗೆ ಬಂದಿದ್ದು ಸಂಬಂಧಿಕ ಕೃತಿಕನ ಗೆಳೆತನ ಆತ್ಮೀಯತೆ ಬೆಳೆಸಿಕೊಂಡು ಕೃತಿಕ್ನಿಂದ ಸುಮಾರು 9 ಲಕ್ಷಕ್ಕೂ ಅಧಿಕ ಹಣವನ್ನು ಸಾಲವಾಗಿ ಪಡೆದುಕೊಂಡಿದ್ದು ಈ ಹಣವನ್ನು ಹಿಂದಿರುಗಿಸದೇ ವಂಚಿಸುವ ಉದ್ದೇಶ ಹೊಂದಿದ್ದ. ಕೃತಿಕನು ಪದೇ ಪದೇ ಹಣವನ್ನು ಹಿಂತಿರುಗಿಸುವಂತೆ ಕೇಳುತ್ತಿದ್ದು, ಈತನಿಂದ ಹಣ ಕೊಡದೇ ಪಾರಾಗಲು ಪೂರ್ವಯೋಜನೆಯನ್ನು ಮಾಡಿದ್ದ ದಿನೇಶ ಸಫಲಗನು ಕೃತಿಕನ ಮನೋದೌರ್ಬಲ್ಯವನ್ನು ಉಪಯೋಗಿಸಿಕೊಂಡು “ಕೃತಿಕನ ಪರಿಚಯವಿರುವ ಮಹಿಳೆಯ ಹೆಸರಿನಲ್ಲಿ ಒಂದು ಡೆತ್ನೋಟ್ ಬರೆಯಿಸಿದ ಆರೋಪಿಯು ಆ ಮಹಿಳೆಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆಯಿಸಿ ಆತ್ಮಹತ್ಯೆಯ ಅಣಕು ವಿಡಿಯೋವನ್ನು ಮಾಡಿ ಆ ಮಹಿಳೆಗೆ ಕಳುಹಿಸಿದರೆ ಆಕೆಯು ನಿನ್ನನ್ನು ಖಂಡಿತ ಒಪ್ಪಿಕೊಳ್ಳುತ್ತಾಳೆ” ಎಂದು ನಂಬಿಸಿ, ದಿನಾಂಕ ಸೆ.14 ರಂದು ಮುಂಜಾನೆಯ ಸುಮಾರು 4:00 ಗಂಟೆ ಸಮಯಕ್ಕೆ ಮನೆಯ ಹತ್ತಿರದ ಹಾಡಿಗೆ ಬರ ಮಾಡಿಕೊಂಡು ದಿನೇಶ ಸಫಲಿಗನೇ ಕುಣಿಕೆ ಹಗ್ಗವನ್ನು ದೂಪದ ಮರದ ಕೊಂಬೆಗೆ ಕಟ್ಟಿ ಕುಣಿಕೆಯನ್ನು ಕೃತಿಕನ ಕುತ್ತಿಗೆಗೆ ಹಾಕಿಕೊಳ್ಳುವಂತೆ ತಿಳಿಸಿ ಶಿಲೆಕಲ್ಲನ್ನು ಇಟ್ಟು ಅದರ ಮೇಲೆ ಹತ್ತಿಸಿ, ಕೃತಿಕನನ್ನು ಎತ್ತಿ ಕುತ್ತಿಗೆಗೆ ಕುಣಿಕೆಯನ್ನು ಹಾಕಿಕೊಳ್ಳುವಂತೆ ಮಾಡಿ ಕೃತಿಕನನ್ನು ಎತ್ತಿದ ಕೈಯನ್ನು ತಾನು ಒಮ್ಮೆಲೆ ಬಿಟ್ಟಿದ್ದಾನೆ. ಅಲ್ಲದೇ ಕಾಲಿನ ಕೆಳಗೆ ಇದ್ದ ಕಲ್ಲನ್ನು ಜಾರಿಯಿಸಿದ ಪರಿಣಾಮವಾಗಿ ಕುತ್ತಿಗೆಗೆ ಕುಣಿಕೆಯ ಹಗ್ಗ ಬಿಗಿದು ಕೃತಿಕ್ ಮೃತಪಟ್ಟಿದ್ದಾನೆ. ನಂತರ ಆರೋಪಿ ದಿನೇಶ ಸಫಲಿಗನು ಕೃತಿಕನ ಮೊಬೈಲ್ ಪೋನನ್ನು ಕೊಂಡು ಹೋಗಿದ್ದ.
ಆರೋಪಿಯು ತಾನು ಪಡೆದ ಸಾಲವನ್ನು ತೀರಿಸಬಾರದೆಂದು ಎಂಬ ಕಾರಣಕ್ಕಾಗಿ ಕೃತಿಕನನ್ನು ಅತ್ಯಂತ ಉಪಾಯದಿಂದ ಪೂರ್ವಯೋಜನೆ ಮಾಡಿ ಕೊಲೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಉಡುಪಿ ಎಸ್ಪಿ ಅಕ್ಷಯ್ ಮಚೀಂದ್ರ ಹಾಕೆ, ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಮಾರ್ಗದರ್ಶನದಲ್ಲಿ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಸುಧಾಕರ ನಾಯ್ಕ್, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭರವರ ನೇತೃತ್ವದಲ್ಲಿ ಹಿರಿಯಡ್ಕ ಪೊಲೀಸ್ ಠಾಣಾ ಪಿಎಸ್ಐ ಅನಿಲ್ ಬಿ.ಎಮ್, ಕೋಟ ಠಾಣಾ ಪ್ರೊಬೆಷನರಿ ಪಿಎಸ್ಐ ನೂತನ್, ಬ್ರಹ್ಮಾವರ ವೃತ್ತ ಕಛೇರಿಯ ಸಿಬ್ಬಂದಿಯವರಾದ ಎ.ಎಸ್.ಐ ಕೃಷ್ಣಪ್ಪ, ಹೆಡ್ಕಾನ್ಸ್ಟೇಬಲ್ಗಳಾದ ವಾಸುದೇವ ಪಿ, ಪ್ರದೀಪ ನಾಯಕ, ಕಾನ್ಸ್ಟೇಬಲ್ಗಳಾದ ರವೀಂದ್ರ ಹೆಚ್, ಕೃಷ್ಣ ಶೇರೆಗಾರ, ಶೇಖರ್, ಹಿರಿಯಡ್ಕ ಠಾಣಾ ಎ.ಎಸ್.ಐ ರವರಾದ ಸುಂದರ, ಜಯಂತ್, ಪರಮೇಶ್ವರ ಹೆಡ್ಕಾನ್ಸ್ಟೇಬಲ್ಗಳಾದ ರಾಜೇಶ್ ಡಿ ಗಾರ್, ಉದಯ ಕುಮಾರ್, ರಘು ಮೊಗವೀರ, ರಾಘವೇಂದ್ರ.ಕೆ, ದಯಾನಂದ ಪ್ರಭು, ಜ್ಯೋತಿ, ಸುರೇಖಾ, ಕಾನ್ಸ್ಟೇಬಲ್ಗಳಾದ ಆದರ್ಶ ನಾಯ್ಕ, ಭೀಮಪ್ಪ ಹಡಪದ, ಬಸವರಾಜ್ ಬಶೆಟ್ಟಿ, ನಿತಿನ್, ನಬಿ ರಸೂಲ್ ಕಡಣಿ, ಕಾರ್ತಿಕ್, ಸಂತೋಷ್, ಶಿವರಾಜ್, ಮಾರುತಿ, ಉಮೇಶ, ದರ್ಶನ್, ಅಶೋಕ್, ಸುಮಲತಾ, ಜಯಲಕ್ಷ್ಮಿ, ರಾಜೇಶ್ವರಿ, ರಾಜೇಶ್ ಮೇಸ್ತರವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.
Comments are closed.