ಕುಂದಾಪುರ: ತಾಲೂಕಿನ ಗುಲ್ವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶ್ರೀ ವೀರಾಂಜನೇಯ ದೇವಸ್ಥಾನದ ಅನತಿ ದೂರದಲ್ಲಿ ವಾಮನ ಮುದ್ರಿಕೆಯ ಕಲ್ಲು ಪತ್ತೆಯಾಗಿದೆ.

ಶೈವರು,ವೈಷ್ಣವರು,ಜೈನರು ಆರಾಧನೆಗೆ ಸಂಬಂಧಿಸಿದ ಹಾಗೂ ಅವರ ಆರಾಧನೆಗೆ ಗಡಿಗಳನ್ನು ಗುರುತಿಸುವುದು ಸಹಜ. ಶೈವರ ಗಡಿಗಳಿಗೆ ಲಿಂಗ ಮುದ್ರಿಕೆ ಕಲ್ಲು ಅಥವಾ ಶೈವ ಮುದ್ರಿಕೆ ಕಲ್ಲು,ವೈಷ್ಣವರ ಗಡಿಗಳಿಗೆ ವಾಮನ ಮುದ್ರಿಕೆ ಕಲ್ಲು,ಜೈನರ ಗಡಿಗಳಿಗೆ ಮುಕ್ಕೋಡೆ ಕಲ್ಲುಗಳನ್ನು ಹಾಕುತ್ತಿದ್ದರು.ಈ ಮೂಲಕ ಬಹಳ ಸ್ಪಷ್ಟವಾಗಿ ಅವರವರ ಗಡಿಗಳನ್ನು ಗುರುತಿಸಲು ಸಾಧ್ಯವಾಗುತ್ತಿತ್ತು.
ವಾಮನ ಮುದ್ರಿಕೆಯ ಕಲ್ಲುಗಳಲ್ಲಿ ಸೂರ್ಯ, ಚಂದ್ರ ಇರುವ ತನಕ ಅಜರಾಮರವಾಗಿರಲಿ ಎಂದು ಸಂದೇಶ ಸಾರುವಂತಹ ಸೂರ್ಯ ಹಾಗೂ ಚಂದ್ರ ಶಿಲ್ಪ ಕಲೆಯೊಂದಿಗೆ ವ್ಯಕ್ತಿ ಅಂದರೆ ವಾಮನ ಅವರ ಒಂದು ಕೈಯಲ್ಲಿ ಕೊಡೆ ಇನ್ನೊಂದು ಕೈಯಲ್ಲಿ ಕಮಂಡಲವಿದೆ. ಇದು ವಾಮನ ಶಿಲ್ಪ ಕಲೆಯಲ್ಲಿ ಸಹಜವಾಗಿ ಕಂಡು ಬರುತ್ತದೆ. ಅಂತೆಯೇ ವಾಮನ ಮುದ್ರಿಕೆಯ ಕಲ್ಲಿನ ಅನತಿ ದೂರದಲ್ಲಿ ಶ್ರೀ ವೀರಾಂಜನೇಯ ದೇಗುಲವಿದ್ದು ಇಲ್ಲಿನ ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಿದೆ.
ಈ ಹಿಂದೆ ನೇರಳಕಟ್ಟೆಯ ಬಾವಿ ಕಟ್ಟೆ ಬಳಿ,ಕಂದಾವರದ ಶ್ರೀ ವೀರಾಂಜನೇಯ ದೇವಾಲಯದ ಬಳಿ,ನಂದ್ರೋಳ್ಳಿ ಶ್ರೀ ಲಕ್ಷ್ಮೀನಾರಾಯಣ ದೇವಾಲಯದ ಬಳಿ ವಾಮನ ಮುದ್ರಿಕೆ ಕಲ್ಲು ಕಂಡು ಬಂದಿದೆ.
ಈ ವಾಮನ ಮುದ್ರಿಕೆ ಕಲ್ಲುಗಳನ್ನು ಭಾರತೀಯ ಇತಿಹಾಸ ಸಂಕಲನ ಸಮಿತಿ ಕರ್ನಾಟಕ ಉಡುಪಿ ಜಿಲ್ಲೆಯ ಜಿಲ್ಲಾ ಸಂಚಾಲಕ ಪ್ರದೀಪ ಕುಮಾರ್ ಬಸ್ರೂರು ಇವರು ಪತ್ತೆ ಹಚ್ಚಿದ್ದಾರೆ. ಸುರೇಂದ್ರ ಶೆಟ್ಟಿ ಗುಲ್ವಾಡಿ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶ್ರೀ ಕ್ಷೇತ್ರ ಸೌಕೂರು ಇಲ್ಲಿಯ ಆಡಳಿತ ಮಂಡಳಿಯ ಸದಸ್ಯ ಕುಪ್ಪ ಸೌಕೂರು, ಭಾರ್ಗವ ಜೋಗಿ, ಮಧುಸೂಧನ್ ಭಟ್, ಅಭಿಷೇಕ್ ಮೊಗವೀರ ಬಾಳೆಹಿತ್ಲು ಮೊದಲಾದವರು ಸಹಕರಿಸಿದ್ದರು.
Comments are closed.