
ಕೊಪ್ಪಳ: ಅಂಜನಾದ್ರಿ ಪರ್ವತ ಧಾರ್ಮಿಕ ಹಿನ್ನೆಲೆ ಹೊಂದಿರುವ ಕ್ಷೇತ್ರವಾಗಿರುವುದರಿಂದ ಇದರ ಅಭಿವೃದ್ಧಿಗೆ ಸರ್ಕಾರ ತೀರ್ಮಾನಿಸಿದೆ ಎಂದು ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರದ ಸಚಿವರಾದ ಸಿ.ಪಿ.ಯೋಗೇಶ್ವರ್ ಹೇಳಿದರು.
ಅವರು ಬುಧವಾರದಂದು ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಪರ್ವತಕ್ಕೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಹನುಮನ ದರ್ಶನ ಪಡೆದು ಅಲ್ಲಿಯ ಸ್ಥಳ ಪರಿವೀಕ್ಷಣೆಯ ನಂತರ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.



ಇತ್ತೀಚಿನ ದಿನಗಳಲ್ಲಿ ಅಂಜನಾದ್ರಿ ಬೆಟ್ಟಕ್ಕೆ ದೇಶದ ವಿವಿಧ ಭಾಗಗಳಿಂದ, ವಿದೇಶಗಳಿಂದ ಹನುಮನ ಭಕ್ತರು ಬರುತ್ತಿದ್ದು, ಇದರ ಅಭಿವೃದ್ಧಿಗೆ ಈ ಭಾಗದ ಸಂಸದರು, ಶಾಸಕರು ನಮಗೆ ಮನವಿ ಮಾಡುತ್ತಿದ್ದಾರೆ. ಅದಕ್ಕಾಗಿ ಈ ಹಿಂದೆ ಕೆ.ಎಸ್.ಈಶ್ವರಪ್ಪ ಅವರ ನೇತೃತ್ವದಲ್ಲಿ 4 ರಿಂದ 5 ಮಂತ್ರಿಗಳು ಇಲ್ಲಿ ಸೇರುವ ಕಾರ್ಯಕ್ರಮವಿತ್ತು ಆದರೆ ಕೋವಿಡ್ ಕಾರಣದಿಂದ ಅದು ಆಗಲಿಲ್ಲ ಎಂದರು.
ನಾನು ಈ ಭಾಗದಲ್ಲಿ ಪ್ರವಾಸ ಮಾಡುತ್ತಿರುವುದರಿಂದ ಇಲ್ಲಿಗೆ ಅಧಿಕಾರಿಗಳೊಂದಿಗೆ ಭೇಟಿ ಕೊಟ್ಟಿದ್ದೇನೆ. ಪ್ರವಾಸೋದ್ಯಮವನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಬೇಕು ಎನ್ನುವುದು ನಮ್ಮ ಗುರಿಯಾಗಿದೆ. ಹನುಮ ಜನಿಸಿದ ನಾಡು ಇದೇ ಎನ್ನುವುದಕ್ಕೆ ಹಲವಾರು ದಾಖಲೆ ಮತ್ತು ಪೌರಾಣಿಕ ಹಿನ್ನೆಲೆ ನೋಡಿದರೆ ಇದುವೇ ಹನುಮನ ಮೂಲವಾಗಿದೆ ಎಂದು ತಿಳಿದು ಬರುತ್ತದೆ ಎಂದು ಹೇಳಿದರು.
ಇದನ್ನು ಅಭಿವೃದ್ಧಿ ಮಾಡಬೇಕಾದರೆ ಸಾವಿರಾರು ಕೋಟಿ ಹಣದ ಮಾಸ್ಟರ್ ಪ್ಲಾನ್ ಬೇಕಾಗುತ್ತದೆ. ಇದರ ಬಗ್ಗೆ ಅಧಿಕಾರಿಗಳು ಮತ್ತು ಈ ಭಾಗದ ಜನಪ್ರತಿನಿಧಿಗಳೊಂದಿಗೆ ಸೇರಿ ಚರ್ಚೆ ಮಾಡುತ್ತೇವೆ. ಪ್ರವಾಸೋದ್ಯಮ ಇಲಾಖೆ ಮಾತ್ರವಲ್ಲದೆ ಇತರೆ ಎಲ್ಲ ಇಲಾಖೆಗಳು ಸೇರಿ ಈ ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ (ಕೆ.ಎಸ್.ಟಿ.ಡಿ.ಸಿ.) ಅಧ್ಯಕ್ಷರಾದ ಶೃತಿ, ಗಂಗಾವತಿ ಶಾಸಕರಾದ ಪರಣ್ಣ ಮುನವಳ್ಳಿ, ಪ್ರವಾಸೋದ್ಯಮ ಇಲಾಖೆಯ ಆಯುಕ್ತರಾದ ಪಂಕಜ್ ಕುಮಾರ ಪಾಂಡೆ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಾದ ಸಿಂಧು ರೂಪೇಶ್, ಜಂಗಲ್ ಲಾಡ್ಜ್ & ರೆಸಾರ್ಟ್ ವ್ಯವಸ್ಥಾಪಕ ಕುಮಾರ ಪುಷ್ಕರ್, ಕೆ.ಎಸ್.ಟಿ.ಡಿ.ಸಿ. ಎಂಡಿ ವಿಜಯ ಶರ್ಮಾ, ಹೊಸಪೇಟೆ ಉಪ ವಿಭಾಗಾಧಿಕಾರಿ ಸಿದ್ದರಾಮೇಶ್ವರ, ಕೊಪ್ಪಳ ಉಪ ವಿಭಾಗಾಧಿಕಾರಿ ನಾರಾಯಣ ರೆಡ್ಡಿ ಕನಕರೆಡ್ಡಿ, ಕೊಪ್ಪಳ ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕರಾದ ಪ್ರಶಾಂತ ಬಾರಿಗಿಡದ ಹಾಗೂ ಇತರರು ಉಪಸ್ಥಿತರಿದ್ದರು.
Comments are closed.