
ಬೆಂಗಳೂರು: ಸಂಪುಟ ವಿಸ್ತರಣೆ ಕುರಿತು ಇಂದು (ಮಂಗಳವಾರ) ಮುಖ್ಯಮಂತ್ರಿ ಯಡಿಯೂರಪ್ಪ ಕಾವೇರಿ ನಿವಾಸಕ್ಕೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ , ಬಿವೈ ವಿಜಯೇಂದ್ರ ಭೇಟಿ ನೀಡಿ ಚರ್ಚೆ ನಡೆಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಇವರ ಬೆನ್ನೆಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕೂಡ ಸಿಎಂ ಜೊತೆ ಸುಮಾರು 35 ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಪಕ್ಷದ ಮುಖಂಡರ ಈ ಭೇಟಿ ಸಚಿವರ ಆಯ್ಕೆ ಕುರಿತಾದ ಮಾತುಕತೆ ಎಂಬ ಮಾತು ಕೇಳಿಬಂದಿದೆ. ಸಂಪುಟ ವಿಸ್ತರಣೆ ಚರ್ಚೆ ಕುರಿತು ಕಳೆದೆರಡು ದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿ ಬಂದ ಸಿಎಂ ಬಿಎಸ್ವೈ ಈ ಕುರಿತು ಮೌನವಹಿಸಿದ್ದಾರೆ. ಈ ಕುರಿತು ಯಾವುದೇ ಹೇಳಿಕೆಯನ್ನು ಹೈ ಕಮಾಂಡ್ ಆಗಲಿ ನೀಡಿಲ್ಲ. ಈಗ ಬಿಎಲ್ ಸಂತೋಷ್ ಮೂಲಕ ಹೈ ಕಮಾಂಡ್ ಸುದ್ದಿ ಮುಟ್ಟಿಸಿದ್ದಾರೆ. ಇದೇ ಕಾರಣಕ್ಕೆ ಈ ಭೇಟಿಗಳು ನಡೆಯುತ್ತಿವೆ ಎನ್ನಲಾಗಿದೆ.
ಉಪಚುನಾವಣಾ ಫಲಿತಾಂಶದ ಬಳಿಕ ಸಚಿವ ಸಂಪುಟ ಪುನರಚನೆ ಅಥವಾ ವಿಸ್ತರಣೆ ಕುರಿತು ಸಿಎಂ ಸಾಕಷ್ಟು ಉತ್ಸಕತೆ ತೋರಿದ್ದರು. ಖಾಲಿ ಇರುವ ಏಳು ಸ್ಥಾನಗಳಲ್ಲಿ ಐದು ಸ್ಥಾನಗಳನ್ನು ವಲಸಿರಿಗೆ ನೀಡುವಂತೆ ಅವರು ಹೈ ಕಮಾಂಡ್ ಮುಂದೆ ಮನವಿಯನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದರೆ, ಹೈ ಕಮಾಂಡ್ ಮಾತ್ರ ಪ್ರತಿಬಾರಿಯಂತೆ ಈ ಕಾರ್ಯವನ್ನು ಮುಂದೂಡಿತು. ಇದೇ ಹಿನ್ನಲೆ ದೆಹಲಿ ಭೇಟಿ ಬಳಿಕ ಸಿಎಂ ಈ ಕುರಿತು ಬಹಿರಂಗ ಹೇಳಿಕೆ ನೀಡುತ್ತಿಲ್ಲ ಎನ್ನಲಾಗಿದೆ.
ಆದರೆ, ಸಿಎಂ ಬಿಎಸ್ ಯಡಿಯೂರಪ್ಪ ಮನೆಗೆ ಸಚಿವಾಕಾಂಕ್ಷಿಗಳ ದಂಡು ಮಾತ್ರ ದಾಂಗುಡಿ ಇಡುತ್ತಿದೆ. ಎಂಎಲ್ಸಿ ವಿಶ್ವನಾಥ್ ಅವರಿಂದ ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿವರೆಗೆ ಅನೇಕಸ ಸಚಿವರು ಸಿಎಂ ಭೇಟಿ ಮಾಡುತ್ತಿದ್ದು, ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮನವಿ ಸಲ್ಲಿಸುತ್ತಿದ್ದಾರೆ. ಈಗ ಸಂತೋಷ್ ಮೂಲಕ ಇದಕ್ಕೆ ಚಾಲನೆ ಸಿಕ್ಕಿರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಅವರು ದಿಢೀರ್ ಭೇಟಿ ನಡೆಸಿದ್ದಾರೆ ಎನ್ನಲಾಗಿದೆ.
ಭೇಟಿ ವೇಳೆ ಸಂತೋಷ್ ರಮೇಶ್ ಜಾರಕಿಹೊಳಿ ಬೆಂಬಲಿಗರಿಕೆ ಸೂಕ್ತ ಸ್ಥಾನಮಾನ ನೀಡುವ ಕುರಿತು ಚರ್ಚೆ ನಡೆಸಿರುವ ಸಾಧ್ಯತೆ ಇದೆ. ಇತ್ತ ನಳೀನ್ ಕುಮಾರ್ ಕಟೀಲ್ ಮೂಲ ನಿವಾಸಿಗಳಿಗೆ ಸ್ಥಾನಕೊಡಿಸಲು ಯತ್ನಿಸುತ್ತಿರುವ ಹಿನ್ನಲೆ ಈ ಇಬ್ಬರ ನಾಯಕರೊಂದಿಗೆ ಸಿಎಂ ಕೂಲಂಕುಷ ಚರ್ಚೆ ನಡೆಸಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂಪುಟ ಪುನಾರಚನೆಗೆ ಹೈ ಕಮಾಂಡ್ ಹಸಿರು ನಿಶಾನೆ ತೋರಿದ್ದಾರೆ. ಈ ಕುರಿತು ಪಕ್ಷದ ನಾಯಕರೊಂದಿಗೆ ಚರ್ಚಿಸಲು ಬಿಎಲ್ ಸಂತೋಷ್ ಸಿಎಂ ಭೇಟಿ ಮಾಡಿದ್ದಾರೆ. ಇದೇ ಸಂಬಂಧ ಕಟೀಲ್ ಕೂಡ ಯಾರಿಗೆ ಸ್ಥಾನ ನೀಡಬೇಕು ಎಂದು ಚರ್ಚೆ ನಡೆಸಿದ್ದಾರೆ. ನಾಯಕರ ಈ ಚರ್ಚೆ ಬಳಿಕ ಈ ಕುರಿತು ಅಧಿಕೃತವಾಗಿ ಬಹಿರಂಗಪಡಿಸಲಾಗುವುದು. ನಾಯಕರಲ್ಲಿ ಒಮ್ಮತ ಮೂಡಿದರೆ, ಗುರುವಾರವೇ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿಬಂದಿದೆ.
Comments are closed.