
ಭೋಪಾಲ್: ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೊರೋನಾ ಸೋಂಕು ತಗುಲಿದೆ.
ತಮಗೆ ಸೋಂಕು ತಗುಲಿರುವುದು ದೃಢಪಟ್ಟ ಬಳಿಕ ಚೌಹಾಣ್ ಅವರು, ಯಾರೆಲ್ಲ ತಮ್ಮೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೋ ಅವರೆಲ್ಲರೂ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮತ್ತು ಕ್ವಾರಂಟೈನ್ ಆಗುವಂತೆ ಮನವಿ ಮಾಡಿದ್ದಾರೆ. ಪ್ರಸ್ತುತ ಮುಖ್ಯಮಂತ್ರಿ ಚೌಹಾಣ್ ಅವರು ಚಿರಾಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಧಿವಶರಾದ ಗೌವರ್ನರ್ ಲಾಲ್ಜಿ ಟಂಡನ್ ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿಲು ಚೌಹಾಣ್ ಅವರು ಇತ್ತೀಚೆಗೆ ಸಂಪುಟ ಸಹೋದ್ಯೋಗಿ ಅರವಿಂದ್ ಭಾದೌರಿಯಾ ಅವರೊಂದಿಗೆ ಲಕ್ನೋಗೆ ಪ್ರಯಾಣ ಬೆಳೆಸಿದ್ದರು. ಆ ಬಳಿಕ ಅವರಿಗೆ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿತ್ತು.
ಸೋಂಕು ನಿಯಂತ್ರಣಕ್ಕೆ ನಾನು ಶಕ್ತಿ ಮೀರಿ ಪ್ರಯತ್ನಿಸಿದೆ. ಆದರೆ, ಹಲವು ಕಾರ್ಯನಿಮಿತ್ತ ಜನರು ಬಂದು ನನ್ನನ್ನು ಭೇಟಿಯಾಗುತ್ತಿದ್ದರು. ಈ ಸಂದರ್ಭದಲ್ಲಿ ತಮಗೆ ಸೋಂಕು ತಗುಲಿರಬಹುದು ಎಂದು ಚೌಹಾಣ್ ಅವರು ತಮಗೆ ಕೊರೋನಾ ಸೋಂಕು ಹರಡಿದ್ದರ ಕಾರಣವನ್ನು ತಿಳಿಸಿದ್ದಾರೆ. ಅಲ್ಲದೇ ಸಾರ್ವಜನಿಕರು ಮಾರಣಾಂತಿಕ ರೋಗದ ವಿರುದ್ಧ ತೀವ್ರ ಮುನ್ನೆಚ್ಚರಿಕೆಯಿಂದ ಇರಬೇಕು. ಕಾಯಿಲೆ ಬಂದರೂ ಭಯ ಪಡುವ ಅಗತ್ಯವಿಲ್ಲ. ಸರಿಯಾದ ಚಿಕಿತ್ಸೆ ಪಡೆದರೆ ಕೊರೋನಾದಿಂದ ಗುಣಮುಖರಾಗಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಮಧ್ಯಪ್ರದೇಶ ಕಾಂಗ್ರೆಸ್ ಹಾಗೂ ಬಿಜೆಪಿಯ ಹಲವು ಶಾಸಕರಿಗೂ ಕೊರೋನಾ ಸೋಂಕು ತಗುಲಿದೆ. ವೈರಸ್ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುನ್ನಚ್ಚರಿಕೆ ಕ್ರಮವಾಗಿ ಮಧ್ಯಪ್ರದೇಶ ವಿಧಾನಸಭೆ ಅಧಿವೇಶನವನ್ನು ಮುಂದೂಡಲಾಗಿದೆ. ಸಿಎಂ ಚೌಹಾಣ್ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದವರನ್ನು ಹಾಗೂ ಅವರ ಮನೆಯವನ್ನು ವೈದ್ಯಕೀಯ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ.
Comments are closed.