
ಮುಂಬೈ : ಪಶ್ಚಿಮ ಬಂಗಾಳದಲ್ಲಿ ಅಂಫಾನ್ ಚಂಡಮಾರುತ ಭಾರೀ ಅನಾಹುತ ಸೃಷ್ಟಿಸಿತ್ತು. ಈ ಚಂಡಮಾರುತ ತಣ್ಣಗಾದ ಬೆನ್ನಲ್ಲೇ ಈಗ ಮಹಾರಾಷ್ಟ್ರಕ್ಕೆ ನಿಸರ್ಗ ಚಂಡಮಾರುತ ಬಂದಪ್ಪಳಿಸಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ಬುಧವಾರ ಮಹಾರಾಷ್ಟ್ರ ಕರಾವಳಿ ಭಾಗಕ್ಕೆ ನಿಸರ್ಗ ಚಂಡಮಾರುತ ಬಂದಪ್ಪಳಿಸುವ ಸಾಧ್ಯತೆ ಇದೆ. ಗಂಟೆಗೆ 100 ಕಿ.ಮೀ ವೇಗದಲ್ಲಿ ಬೀಸುವ ಈ ಮಾರುತ ಮುಂಬೈ ಹಾಗೂ ಸುತ್ತಮುತ್ತ ಭಾಗದಲ್ಲಿ ಭಾರೀ ಹಾನಿ ಸೃಷ್ಟಿಸಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮುಂಜಾಗೃತೆ ಕೈಗೊಳ್ಳಲಾಗಿದೆ.
ರಾಜ್ಯದಲ್ಲಿ ನಿಸರ್ಗ ಚಂಡಮಾರುತ ಎದುರಿಸಲು ತೆಗೆದುಕೊಂಡ ಕ್ರಮದ ಬಗ್ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ್ದಾರೆ. ಅಲ್ಲದೆ, ಅಗತ್ಯ ಸಹಾಯ ನೀಡುವ ಭರವಸೆ ನೀಡಿದ್ದಾರೆ.
ಈಗಾಗಲೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್ಡಿಆರ್ಎಫ್) ಕಾರ್ಯಪ್ರವೃತ್ತವಾಗಿದೆ. ಮುಂಬೈ ಸೇರಿ ಅನೇಕ ಭಾಗಗಳಲ್ಲಿ ಎನ್ಡಿಆರ್ಎಫ್ ತಂಡ ನಿಯೋಜನೆ ಮಾಡಲಾಗಿದೆ. ಈಗಾಗಲೇ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ . ಕರಾವಳಿ ಅಂಚಿನಲ್ಲಿರುವ ಕೆಲವರನ್ನು ಸ್ಥಳಾಂತರ ಮಾಡುವ ಬಗ್ಗೆಯೂ ಎನ್ಡಿಆರ್ಎಫ್ ಚಿಂತನೆ ನಡೆಸಿದೆ.
ಮಹಾರಾಷ್ಟ್ರದಲ್ಲಿ 70 ಸಾವಿರ ಕೊರೋನಾ ವೈರಸ್ ಪ್ರಕರಣ ದಾಖಲಾಗಿದ್ದು, ಮುಂಬೈ ಒಂದರಲ್ಲೇ 40 ಸಾವಿರ ಕೊರೋನಾ ಸೋಂಕಿತರಿದ್ದಾರೆ. ಈಗ ಚಂಡಮಾರುತ ಕೂಡ ಅಪ್ಪಳಿಸುತ್ತಿರುವುದು ಮಹಾರಾಷ್ಟ್ರ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಕರ್ನಾಟಕಕ್ಕೂ ಎಫೆಕ್ಟ್:ಮಹಾರಾಷ್ಟ್ರಕ್ಕೆ ಅಪ್ಪಳಿಸುವ ಚಂಡಮಾರುತದ ಎಫೆಕ್ಟ್ ಕರ್ನಾಟಕದಮೇಲೂ ಉಂಟಾಗಲಿದೆ. ಕಾರವಾರ, ಕುಮಟಾ, ಉಡಪಿ, ಮಂಗಳೂರು ಭಾಗದಲ್ಲಿ ನಿಸರ್ಗ ಚಂಡಮಾರುತದ ಎಫೆಕ್ಟ್ ಕೊಂಚ ಪ್ರಮಾಣದಲ್ಲಿ ಇರಲಿದೆ. ಇನ್ನು, ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಇದೆ.
Comments are closed.