ಕರ್ನಾಟಕ

ಅನವಶ್ಯಕವಾಗಿ ಬೈಕ್ ಮೇಲೆ ತಿರುಗುವವರನ್ನು ಬಂಧಿಸಿ, ಸಂಜೆಯವರೆಗೂ ಅನ್ನ ಕೊಡದಿರಿ: ದಾವಣಗೆರೆ ಜಿಲ್ಲಾಧಿಕಾರಿ

Pinterest LinkedIn Tumblr


ದಾವಣಗೆರೆ: ಅನವಶ್ಯಕವಾಗಿ ಬೈಕ್ ಮೇಲೆ ತಿರುಗಾಡುತ್ತಿದ್ದ ವಾಹನ ಸವಾರರನ್ನು ಬಂಧಿಸಿದ್ದೇವೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಯಾರೂ ಮನೆಯಿಂದ ಹೊರಬರಬಾರದು. ನಿಮಗಾಗಿ ನಾವು ಬೀದಿಯಲ್ಲಿದ್ದೇವೆ. ದಯಮಾಡಿ ನೀವು ಮನೆಯಲ್ಲಿಯೇ ಇರಿ ಎಂದು ಧ್ವನಿವರ್ಧಕಗಳ ಮೂಲಕ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಾರ್ವಜನಿಕರಿಗೆ ವಿನಂತಿ ಮಾಡಿದರು.

ಜಿಲ್ಲಾಡಳಿತ ಮತ್ತು ಜಿಲ್ಲಾ ಪೋಲಿಸ್ ವತಿಯಿಂದ ಲಾಕ್‍ಡೌನ್ ಹಿನ್ನೆಲೆಯಲ್ಲಿ ನಗರದ ಎಂ.ಸಿ.ಸಿ ಬಿ ಬ್ಲಾಕ್, ಬಾಷಾ ನಗರ, ಹಳೇ ದಾವಣಗೆರೆ ಸೇರಿದಂತೆ ಹಲವೆಡೆ ಸಂಚರಿಸಿ ಪರಿಶೀಲನೆ ನಡೆಸಿದ ಅವರು, ಲಾಕ್‍ಡೌನ್ ಉಲ್ಲಂಘಿಸಿ ಅನವಶ್ಯಕವಾಗಿ ತಿರುಗಾಡುವವರಿಗೆ ಸಂಜೆಯ ತನಕ ಬಂಧಿಸಿ ಕೇವಲ ನೀರು ಮಾತ್ರ ನೀಡಿ ಎಂದು ಸೂಚಿಸಿದರು.

ಅನವಶ್ಯಕವಾಗಿ ಸುತ್ತಾಡುವವರನ್ನು ಸ್ವತಃ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ತಡೆ ಹಿಡಿದು ಬಂಧಿಸಿ ಜೀಪ್‍ನಲ್ಲಿ ಠಾಣೆಗೆ ಕಳುಹಿಸಿದರು. ಎರಡನೇ ಹಂತದ ಲಾಕ್‍ಡೌನ್ ಇನ್ನಷ್ಟು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ದೇಶದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚುತ್ತಲಿದೆ. ಈ ಹಿನ್ನೆಲೆಯಲ್ಲಿ ಅಜಾಗರೂಕತೆ ಸರಿಯಲ್ಲ. ಸಾರ್ವಜನಿಕರು ಅನಾವಶ್ಯಕವಾಗಿ ಬೀದಿಗಿಳಿಯದೆ ಮನೆಯಲ್ಲೇ ಇದ್ದು ಸಹಕರಿಸಬೇಕು. ಮನೆಯಲ್ಲಿ ಇದ್ದರೆ ಮನೆತನ. ಹೊರಗಡೆ ಬಂದರೆ ಡೆಡ್ಲಿ ಕೊರೊನಾ.. ಎಂಬ ಘೋಷವಾಕ್ಯ ಸಹ ಹೇಳಿದ ಅವರು, ಪೊಲೀಸ್ ಇಲಾಖೆಯ ಅಧಿಕಾರಿಗಳು ಇನ್ನಷ್ಟು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದೆ. ಕಾನೂನನ್ನು ಗೌರವಿಸುವವರನ್ನು ನಾವು ಗೌರವಿಸುತ್ತೇವೆ. ದೇಶವೇ ಲಾಕ್‍ಡೌನ್ ಆಗಿರುವ ಸಮಯದಲ್ಲಿ ಅನಾವಶ್ಯಕವಾಗಿ ತಿರುಗಾಡುವ ವಾಹನಗಳನ್ನು ವಶಕ್ಕೆ ಪಡೆಯಲಾಗುತ್ತದೆ. ಕಾರಣವಿಲ್ಲದೆ ಹೊರಗೆ ಬಂದರೆ ಕೇಸ್ ಕಡ್ಡಾಯವಾಗಿದ್ದು, ಒದೆ ಬೋನಸ್ ಆಗಿರುತ್ತದೆ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ ಅವರು, ಒಟ್ಟು 130 ಜನರು ಹಾಗೂ 45 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ಮತ್ತು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳ ಗಸ್ತು ರಿಂಗ್ ರಸ್ತೆಯಲ್ಲಿರುವ ಜಿಲ್ಲಾಧಿಕಾರಿಗಳ ಗೃಹ ಕಚೇರಿಯಿಂದ ಬಕ್ಕೇಶ್ವರ ಶಾಲೆ, ವಿನೋಬನಗರ, ಪಿ.ಬಿ.ರಸ್ತೆ, ದುಗ್ಗಮ್ಮ ದೇವಸ್ಥಾನ, ಬಸವರಾಜ ಪೇಟೆ, ಟಿಪ್ಪುನಗರ, ಆಜಾದ್‍ನಗರಕ್ಕೆ ತೆರಳಿ ಸಾರ್ವಜನಿಕರು ಮನೆಯಲ್ಲೇ ಇರುವಂತೆ ಎಚ್ಚರಿಕೆ ನೀಡುವುದರ ಮೂಲಕ ಜಾಗೃತಿ ಮೂಡಿಸಲಾಯಿತು. ಈ ವೇಳೆಯಲ್ಲಿ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಗ್ರಾಮಾಂತರ ಡಿವೈಎಸ್‍ಪಿ ಮಂಜುನಾಥ್ ಗಂಗಲ್, ತಹಶೀಲ್ದಾರ್ ಗಿರೀಶ್, ದುರ್ಗಾ ಪಡೆ, ಕೆಎಸ್‍ಆರ್​ಪಿ ತುಕಡಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Comments are closed.