ಕರ್ನಾಟಕ

ಮದುವೆ ಮುರಿದ ಮಾಜಿ ಪ್ರಿಯತಮೆ ಮೇಲೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆ ಯತ್ನ

Pinterest LinkedIn Tumblr


ಬೆಂಗಳೂರು: ತನ್ನ ಮದುವೆ ನಿಂತು ಹೋಗಲು ಕಾರಣಳಾಗಿದ್ದಾಳೆಂಬ ದ್ವೇಷದಿಂದ ಮಾರತ್ತಹಳ್ಳಿಯ ಮುನ್ನೇನಕೊಳಲು ಪ್ರದೇಶದಲ್ಲಿ ಶುಭಶ್ರೀ ಪ್ರಿಯದರ್ಶಿನಿ (25) ಮೇಲೆ ಗುಂಡು ಹಾರಿಸಿ ಕೊಲೆಗೆ ಯತ್ನಿಸಿದ ಒಡಿಶಾ ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಹೈದರಾಬಾದ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮರೇಂದ್ರ ಪಟ್ಟನಾಯಕ್‌ನನ್ನು (33) ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಚಿಂತಾಜನಕವಾಗಿದೆ. ಹೊಟ್ಟೆ ಭಾಗಕ್ಕೆ ಗುಂಡೇಟು ಬಿದ್ದು ಗಾಯಗೊಂಡಿರುವ ಶುಭಶ್ರೀ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ (ಫೆ.25)ಸಂಜೆ 6ರ ಸುಮಾರಿಗೆ ಪ್ರಿಯದರ್ಶಿನಿ ವಾಸಿಸುತ್ತಿದ್ದ ಪೇಯಿಂಗ್‌ ಗೆಸ್ಟ್‌ ಎದುರು ನಾಡ ಪಿಸ್ತೂಲ್‌ನಿಂದ ಗುಂಡು ಹಾರಿಸಿದ್ದ ಅಮರೇಂದ್ರ, ಬೈಕ್‌ನಲ್ಲಿ ಪರಾರಿಯಾಗಿದ್ದ. ಬಳಿಕ, ತಡರಾತ್ರಿ ವೇಳೆ ಮಾರತ್ತಹಳ್ಳಿ ರಿಂಗ್‌ ರಸ್ತೆ ಸೇತುವೆ ಬಳಿ ಚಾಕುವಿನಿಂದ ಕತ್ತು, ಹೊಟ್ಟೆ ಸೇರಿದಂತೆ ದೇಹದ ವಿವಿಧೆಡೆ ಇರಿದುಕೊಂಡು ರಸ್ತೆ ಮೇಲೆ ಬಿದ್ದಿದ್ದ. ತಡರಾತ್ರಿ 2.30ರ ಸುಮಾರಿಗೆ ರಕ್ತಸಿಕ್ತವಾಗಿ ಬಿದ್ದಿದ್ದ ವ್ಯಕ್ತಿಯ ಕುರಿತು ಮಾಹಿತಿ ಬಂದಿತ್ತು. ಸ್ಥಳಕ್ಕೆ ತೆರಳಿದಾಗ ಶುಭಶ್ರೀ ಮೇಲೆ ಗುಂಡು ಹಾರಿಸಿದ ವ್ಯಕ್ತಿ ಎಂದು ಗೊತ್ತಾಗಿದೆ. ಕೂಡಲೇ ಶುಭಶ್ರೀ ದಾಖಲಾಗಿದ್ದ ಆಸ್ಪತ್ರೆಗೇ ಅಮರೇಂದ್ರನನ್ನೂ ದಾಖಲಿಸಲಾಗಿತ್ತು ಎಂದು ಪೊಲೀಸರು ತಿಳಿಸಿದರು.

17 ಪುಟಗಳ ಬರಹ

‘ತೀವ್ರವಾಗಿ ಗಾಯಗೊಂಡಿರುವ ಅಮರೇಂದ್ರನ ನೋಟ್‌ ಪುಸ್ತಕದಲ್ಲಿ 17 ಪುಟಗಳ ಬರಹ ಇದೆ. ಅದರಲ್ಲಿ ಶುಭಶ್ರೀ ಹಾಗೂ ತನ್ನ ನಡುವಣ ಸ್ನೇಹ, ಪ್ರೀತಿ, ಒಡನಾಟ ಇನ್ನಿತರ ವಿಚಾರಗಳ ಬಗ್ಗೆ ಬರೆದುಕೊಂಡಿದ್ದಾನೆ. ಘಟನೆಗೆ ಕಾರಣವಾಗಿದೆ ಎನ್ನಲಾದ ಅಂಶಗಳನ್ನೂ ವಿವರಿಸಿದ್ದಾನೆ. ಆದರೆ, ಈ ಬಗ್ಗೆ ಪರಿಶೀಲನೆ ನಡೆಸಬೇಕಾಗಿದೆ. ಇಬ್ಬರೂ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ವಿಚಾರಣೆ ನಂತರವೇ ಗುಂಡು ಹಾರಿಸಲು ಕಾರಣ ಏನು ಎಂಬ ನಿಖರ ಮಾಹಿತಿ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆ ಬ್ರೇಕ್‌ ಮಾಡಿದ್ದೇ ಕಾರಣ..?

ಇಬ್ಬರು ಒಂದೇ ರಾಜ್ಯದವರಾಗಿದ್ದ ಕಾರಣ ಕೆಲ ವರ್ಷಗಳಿಂದ ಒಡನಾಟ ಹೊಂದಿದ್ದರು. ಅಮರೇಂದ್ರ ಹೈದರಾಬಾದ್‌ನಲ್ಲಿ, ಶುಭಶ್ರೀ ನಿಮ್ಹಾನ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು. ಹಲವು ವರ್ಷಗಳ ಒಡನಾಟದ ಬಳಿಕ ಶುಭಶ್ರೀಯನ್ನು ತೊರೆದಿದ್ದ ಅಮರೇಂದ್ರ, ಬೇರೊಬ್ಬ ಯುವತಿಯ ಜೊತೆ ಮದುವೆಯಾಗಲು ಮುಂದಾಗಿದ್ದ. ಮದುವೆ ಕೂಡ ನಿಶ್ಚಯವಾಗಿತ್ತು. ಈ ವಿಚಾರ ಶುಭಶ್ರೀಗೆ ಗೊತ್ತಾಗಿತ್ತು ಎನ್ನಲಾಗಿದೆ.

ಅಮರೇಂದ್ರ ವಿವಾಹವಾಗಲಿದ್ದ ಯುವತಿಯ ಫೋನ್‌ ನಂಬರ್‌ ಸಂಗ್ರಹಿಸಿದ್ದ ಶುಭಶ್ರೀ, ಅಮರೇಂದ್ರನೊಂದಿಗಿನ ಒಡನಾಟದ ಫೋಟೋಗಳನ್ನು ಕಳುಹಿಸಿದ್ದಳು ಎನ್ನಲಾಗಿದೆ. ಫೋಟೋ ನೋಡಿ ಬೇಸರಗೊಂಡ ಆ ಯುವತಿ, ಮದುವೆ ತಿರಸ್ಕರಿಸಿದ್ದಳು. ಇದರಿಂದ ಕುಪಿತಗೊಂಡ ಅಮರೇಂದ್ರ, ಶುಭಶ್ರೀ ಮೇಲೆ ದ್ವೇಷ ಸಾಧಿಸಲು ಕಾಯುತ್ತಿದ್ದ. ಸಂಚು ರೂಪಿಸಿ ಫೆ.26ರ ಸಂಜೆ ಶುಭಶ್ರೀ ಉಳಿದುಕೊಂಡಿದ್ದ ಪಿ.ಜಿ. ಬಳಿ ತೆರಳಿ ಆಕೆಗಾಗಿ ಕಾದಿದ್ದ. ಶುಭಶ್ರೀ ಬರುತ್ತಿದ್ದಂತೆಯೇ ಆಕೆ ಮೇಲೆ ಒಂದು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದ. ನಂತರ ಆತನಿಗೆ ಏನಾಯಿತೋ ಗೊತ್ತಿಲ್ಲ. ತಡರಾತ್ರಿ ಚಾಕುವಿನಿಂದ ದೇಹದ ವಿವಿಧೆಡೆ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

‘ಅಮರೇಂದ್ರ ಬಳಸಿದ್ದ ಪಿಸ್ತೂಲ್‌ನಲ್ಲಿ ನಾಲ್ಕು ಗುಂಡುಗಳು ಪತ್ತೆಯಾಗಿವೆ. ಆತ ಚೇತರಿಸಿಕೊಂಡ ಬಳಿಕವೇ ಪಿಸ್ತೂಲ್‌ನ ಮೂಲ ಹಾಗೂ ಇನ್ನಿತರ ಕಾರಣಗಳು ಗೊತ್ತಾಗಲಿವೆ. ಅವರ ಸ್ನೇಹಿತರಿಂದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕುಟುಂಬ ಸದಸ್ಯರು ಒಡಿಶಾದಿಂದ ಬಂದ ಬಳಿಕ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಸಂಗ್ರಹಿಸಲಾಗುತ್ತದೆ’ ಎಂದು ವೈಟ್‌ಫೀಲ್ಡ್‌ ಡಿಸಿಪಿ ಅನುಚೇತ್‌ ತಿಳಿಸಿದ್ದಾರೆ.

Comments are closed.