ಮಂಗಳೂರು : ದೃಶ್ಯ ಮೂವೀಸ್ ಬ್ಯಾನರಿನಲ್ಲಿ ದಯಾನಂದ ಎಸ್. ರೈ ಬೆಟ್ಟಂಪಾಡಿ ನಿರ್ಮಾಣದಲ್ಲಿ ರಝಾಕ್ ಪುತ್ತೂರು ನಿರ್ದೇಶನ ದಲ್ಲಿ ತಯಾರಾದ `ಪೆನ್ಸಿಲ್ ಬಾಕ್ಸ್’ ಕನ್ನಡ ಚಲನ ಚಿತ್ರದ ಬಿಡುಗಡೆ ಸಮಾರಂಭವು ಶುಕ್ರವಾರ ಬೆಳಗ್ಗೆ ಭಾರತ್ ಮಾಲ್ನ ಬಿಗ್ ಸಿನಿಮಾಸ್ನಲ್ಲಿ ನಡೆಯಿತು.
ಸಮಾರಂಭವನ್ನು ಖ್ಯಾತ ಸಿನಿಮಾ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್ ಬೈಲ್ ದೀಪ ಬೆಳಗಿಸಿ ಉದ್ಘಾಟಿಸಿದರು. ತುಳುವರು ನಿರ್ಮಿಸಿದ ಕನ್ನಡ ಸಿನಿಮಾ `ಪೆನ್ಸಿಲ್ ಬಾಕ್ಸ್ ಕೌಟುಂಬಿಕ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರ ಮನಗೆಲ್ಲುವ ಮೂಲಕ ಯಶಸ್ವಿಯಾಗಲಿ ಎಂದು ಚಿತ್ರಕ್ಕೆ ಶುಭ ಹಾರೈಸಿದರು.
ಸಮಾರಂಭದಲ್ಲಿ ಸಿನಿಮಾ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್, ಪ್ರೊಫೆಸರ್ ಭಾಸ್ಕರ ರೈ ಕುಕ್ಕುವಳ್ಳಿ, ಪತ್ರಕರ್ತ ಜಗನ್ನಾಥ ಶೆಟ್ಟಿ ಬಾಳ, ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿ, ಭೋಜರಾಜ ವಾಮಂಜೂರು, ನವೀನ್ ಮಾರ್ಲ, ರಾಜೇಶ್ ಕಣ್ಣೂರು, ರಾಜೇಶ್ ರೈ ಕುಕ್ಕುವಳ್ಳಿ, ಸಂದೀಪ್ ಮಲಾನಿ, ಭಾಗೀರಥಿ ಶೆಟ್ಟಿ, ಫಿನ್ಸ್ ಮೌನೇಶ್ , ಶಶಿಕಲಾ ದಯಾನಂದ ರೈ, ನಿರ್ದೇಶಕ ರಝಾಕ್ ಪುತ್ತೂರು, ಸಮೃದ್ಧ್ ಮೊದಲಾದವರು ಉಪಸ್ಥಿತರಿದ್ದರು.
`ಪೆನ್ಸಿಲ್ ಬಾಕ್ಸ್’ ಸಿನಿಮಾವು ಮಂಗಳೂರಿನಲ್ಲಿ ರಾಮಕಾಂತಿ, ಭಾರತ್ ಸಿನಿಮಾಸ್, ಸಿನಿಪೊಲೀಸ್ ಉಡುಪಿಯಲ್ಲಿ ಆಶೀರ್ವಾದ್, ಮಣಿಪಾಲದಲ್ಲಿ ಭಾರತ್ ಸಿನಿಮಾಸ್, ಪುತ್ತೂರಿನಲ್ಲಿ ಅರುಣಾ, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್, ಕಾರ್ಕಳದಲ್ಲಿ ರಾಧಿಕಾ, ಸುರತ್ಕಲ್ನಲ್ಲಿ ನಟರಾಜ್, ಮೂಡುಬಿದ್ರೆಯಲ್ಲಿ ಅಮರಶ್ರೀ, ಕಾರ್ಕಳದಲ್ಲಿ ಪ್ಲಾನೆಟ್, ಕಾಸರಗೋಡಿನಲ್ಲಿ ಶ್ರೀ ಕೃಷ್ಣ ಚಿತ್ರ ಮಂದಿರದಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ.
ಖ್ಯಾತ ನಟರಾದ ಅರವಿಂದ ಬೋಳಾರ್, ಭೋಜರಾಜ, ವಾಮಂಜೂರು, ರಮೇಶ್ ರೈ ಕುಕ್ಕುವಳ್ಳಿ, ನಿರೀಕ್ಷಾ ಶೆಟ್ಟಿ, ಆರ್ಯನ್, ದಯಾನಂದ ರೈ ಬೆಟ್ಟಂಪಾಡಿ ಮೊದಲಾದವರಿದ್ದಾರೆ.
ಸರಕಾರಿ ಶಾಲೆ ಮತ್ತು ಖಾಸಗಿ ಶಾಲೆಯ ವಸ್ತು ಸ್ಥಿತಿ, ತಮ್ಮ ಮಕ್ಕಳನ್ನು ಪ್ರತಿಸ್ಥ್ಟಿತ ಶಾಲೆಗೆ ಸೇರಿಸಬೇಕೆಂಬ ಹೆತ್ತವರ ಬಯಕೆ, ಅದಕ್ಕಾಗಿ ಅವರು ಪಡುವ ಪಾಡು, ಪರದಾಟ, ಇದಾವುದರ ಪರಿವೇ ಇಲ್ಲದ ಮುದ್ದು ಮಕ್ಕಳ ಮುಗ್ಧ ಪ್ರಪಂಚ, ನಗು ತರಿಸುವ ಹಾಸ್ಯ ಸನ್ನಿವೇಶಗಳೊಂದಿಗೆ ಸಾಗುವ ಗಂಭೀರ ಕಥೆ. ಅಲ್ಲಲ್ಲಿ ಮನುಕುಲವ ಸೆಂಟಿಮೆಂಟ್ಸ್. ಇದೆಲ್ಲದರ ಹದವಾದ ಮಿಶ್ರಣದಿಂದ ತಯಾರಾದ ಮನ ರಂಜನೆಯ ಪಾಠವೇ ಈ `ಪೆನ್ಸಿಲ್ ಬಾಕ್ಸ್’ ಚಿತ್ರ. ಚಿತ್ರವನ್ನು ಸಂಪೂರ್ಣವಾಗಿ ಕರಾವಳಿ ಭಾಗದಲ್ಲಿ ಚಿತ್ರೀಕರಿಸಲಾಗಿದೆ.
ಉತ್ತಮ ಸಂದೇಶ ಸಾರುವ ಈ ಚಿತ್ರಕ್ಕೆ ಕಮರ್ಷಿಯಲ್ ಟಚ್ ಕೊಡಲಾಗಿದೆ. ಡ್ಯಾನ್ಸ್ ಡ್ಯಾನ್ಸ್ ಜೂನಿಯರ್, ಭರ್ಜರಿ ಕಾಮಿಡಿ ಮುಂತಾದ ರಿಯಾಲಿಟಿ ಶೋ ಮೂಲಕ ಕರ್ನಾಟಕದಲ್ಲಿ ಮನೆ ಮಾತಾದ ದೀಕ್ಷಾ ಡಿ. ರೈ ಈ ಚಿತ್ರದ ನಾಯಕಿ. ಹಾಡು, ಅಭಿನಯ, ನೃತ್ಯ ಎಲ್ಲದರಲ್ಲೂ ಸೈ ಎನಿಸಿಕೊಂಡಿರುವ ಈಕೆ ಬಹುಮುಖ ಬಾಲ ಪ್ರತಿಭೆ. ಅತ್ಯಂತ ಮನೋಜ್ಞಾನವಾಗಿ ಅಭಿನಯಿಸಿದ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾಳೆ.








Comments are closed.