ಕರ್ನಾಟಕ

ಹಿಂದೂ ತುಷ್ಠೀಕರಣಕ್ಕಾಗಿ ಟಿಪ್ಪು ಪಠ್ಯ ರದ್ದು: ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ

Pinterest LinkedIn Tumblr


ಚಿತ್ರದುರ್ಗ: ಆರ್ ಎಸ್ ಎಸ್, ಬಿಜೆಪಿ ಹಿಡನ್ ಅಜೆಂಡಾ ಹಾಗೂ ಹಿಂದೂ ತುಷ್ಠೀಕರಣಕ್ಕಾಗಿ ಟಿಪ್ಪು ಹೆಸರು ಇಲ್ಲವಾಗಿಸುವ ಯತ್ನ ನಡೆಯುತ್ತಿದೆ ಎಂದು ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಹೇಳಿದರು.

ಚಿತ್ರದುರ್ಗದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಟಿಪ್ಪು ಇತಿಹಾಸವನ್ನು ಪಠ್ಯದಿಂದ ತೆಗೆಯುವ ಮೂಲಕ ಮುಸ್ಲಿಂ ಸಮುದಾಯವನ್ನು ದಮನ ಮಾಡುವ ಕಾರ್ಯ ನಡೆಯುತ್ತಿದೆ. ಹಿಂದೂ ಮುಸ್ಲಿಂ ಸಮುದಾಯಗಳನ್ನು ವಿಭಜಿಸಲಾಗುತ್ತಿದೆ. ಆರ್ ಎಸ್ ಎಸ್ ಕೋಮುವಾದಿ ಮನಸ್ಥಿತಿ ಕೆಲಸ ಮಾಡುತ್ತಿದೆ. ವೈವಿಧ್ಯತೆಯಲ್ಲೂ ಏಕತೆಯಿಂದಿರುವುದೇ ದೇಶದ ಸೌಂದರ್ಯ. ಏಕತೆಯನ್ನು ನಾವು ಪಾಲಿಸಬೇಕಿದೆ ಎಂದರು.

ದೇಶದಲ್ಲಿ ಆರ್ಥಿಕ ಮುಗ್ಗಟ್ಟು, ನಿರುದ್ಯೋಗ ತಾಂಡವಾಡುತ್ತಿದೆ. ಈ ಬಗ್ಗೆ ಪ್ರಧಾನಿ ಮೋದಿ ಬಳಿ ಯಾವುದೇ ಉತ್ತರವಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಇಂಥ ತಂತ್ರ ಹೂಡುತ್ತಿದ್ದಾರೆ. ನರೇಗಾ ಯೋಜನೆ, ಆರೋಗ್ಯ ಯೋಜನೆಗಳು ಮುಗ್ಗರಿಸಿವೆ. ಸಾವರ್ಕರ್ 13 ಸಲ ಆಂಗ್ಲರಿಗೆ ಕ್ಷಮೆ ಕೇಳಿ ಪತ್ರ ಬರೆದಿದ್ದಾರೆ. ಜನರಿಗೆ ಈಗ ಬಿಜೆಪಿ ಸರ್ಕಾರದ ಧೋರಣೆ ಅರಿವಾಗುತ್ತಿದೆ. ಎಲ್ಲಾ ಪಕ್ಷದ ನಾಯಕರು ವಾಸ್ತವ ಪರಿಸ್ಥಿತಿಯನ್ನು ಜನರ ಮುಂದಿಡಬೇಕಿದೆ ಎಂದರು.

ಪ್ರಧಾನಿ ಮೋದಿ ಚಹಾ ಮಾರಿದ ಮಾತು ಚೈಲ್ಡಿಶ್, ಜೋಕ್ ಆಫ್ ದಿ ಸೆಂಚೂರಿ. ಚಹಾ ಮರಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಈಗ ದೇಶ ಮಾರುತ್ತಿದ್ದಾರೆ. ಆರ್ ಎಸ್ ಎಸ್ ,ಬಿಜೆಪಿಗೆ ದಲಿತರು,‌ ಮುಸ್ಲಿಂರು 2ನೇ ದರ್ಜೆ ನಾಗರೀಕರು. ಕೆಲಸಕ್ಕೆ ಮಾತ್ರ ಬಳಸಿಕೊಳ್ಳುವುದು ಅವರ ಅಜೆಂಡಾ ಎಂದು ವಾಗ್ದಾಳಿ ನಡೆಸಿದರು.

ವಿಚಾರಣೆಗೆ ಆಗಮಿಸಿರುವ ಮೇವಾನಿ:

ಚಿತ್ರದುರ್ಗದಲ್ಲಿ ಜಿಗ್ನೇಶ್ ಮೆವಾನಿ ವಿರುದ್ಧ ಕಳೆದ ವರ್ಷ ಪ್ರಕರಣ ದಾಖಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆ ವೇಳೆ ‘ಮೋದಿ ಕಾರ್ಯಕ್ರಮದಲಿ ಕುರ್ಚಿ ತೂರಿ’ ಎಂಬ ಹೇಳಿಕೆ ಹಿನ್ನೆಲೆ 2018 ಏಪ್ರಿಲ್ 6 ರಂದು ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇಂದು ಚಿತ್ರದುರ್ಗ ನ್ಯಾಯಾಲಯಕ್ಕೆ ಹಾಜರಾಗಲು ಬಂದಿದ್ದ ವೇಳೆ ಸುದ್ದಿಗಾರರ ಜತೆ ಮಾತನಾಡುತ್ತಾ, ನನ್ನ ವಿರುದ್ಧ ಪ್ರಕರಣ ದಾಖಲಾಗಿದೆ ಆದರೆ ನಾನು ಆ ರೀತಿ ಹೇಳಿಲ್ಲ. ಅಸಲಿಗೆ ನನಗೆ ಮೋದಿ ಯಾರು ಎಂದೇ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

Comments are closed.