ಕರ್ನಾಟಕ

ಯಡಿಯೂರಪ್ಪ-ನಳಿನ್‌ ಕುಮಾರ್‌ ಕಟೀಲ್‌ ತಿಕ್ಕಾಟ; ಸಂಧಾನಕ್ಕೆ ಬಿಜೆಪಿ ಹರಸಾಹಸ

Pinterest LinkedIn Tumblr


ಬೆಂಗಳೂರು: ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನಡುವಿನ ಭಿನ್ನಾಭಿಪ್ರಾಯ ಇತ್ಯರ್ಥಕ್ಕೆ ಸಂಧಾನ ನಡೆಸಲು ಪಕ್ಷದ ಮುಖಂಡರು ಮುಂದಾಗಿದ್ದಾರೆ. ಇಬ್ಬರು ಮುಖಂಡರ ನಡುವೆ ಮನಸ್ತಾಪ ತೀವ್ರ ಸ್ವರೂಪ ಪಡೆದುಕೊಂಡಿದ್ದು ಪಕ್ಷಕ್ಕೆ ಮುಜುಗರ ಉಂಟಾಗಿದೆ.

ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಪಕ್ಷ ಮತ್ತು ಸರಕಾರದ ನಡುವೆ ಉತ್ತಮ ಸಮನ್ವಯವಿತ್ತು. ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರಕಾರದ ಅವಧಿಯಲ್ಲೂ ಬಿಜೆಪಿ ಕಾರ್ಯಕರ್ತರು ಮತ್ತು ಕೆಳಹಂತದ ಮುಖಂಡರ ಆತ್ಮಸ್ಥೈರ್ಯ ಕುಗ್ಗಿಸುವ ಬೆಳವಣಿಗೆ ನಡೆದಿರಲಿಲ್ಲ. ಈಗಿನ ಪರಿಸ್ಥಿತಿ ಭಿನ್ನವಾಗಿದೆ. ಇದು ಪಕ್ಷದ ಸಂಘಟನೆ ಮೇಲೂ ಪರಿಣಾಮ ಬೀರುತ್ತಿದೆ. ಹಾಗಾಗಿ ರಾಜೀಸೂತ್ರಕ್ಕೆ ವೇದಿಕೆ ಸಜ್ಜುಗೊಳಿಸಲಾಗುತ್ತಿದೆ.

ಅನಂತಕುಮಾರ್‌ ಇದ್ದಿದ್ದರೆ ಈಗಿನ ಬಿಕ್ಕಟ್ಟನ್ನು ಅವರೇ ಮುಂದಾಗಿ ಬಗೆಹರಿಸುತ್ತಿದ್ದರು. ಬಿಎಸ್‌ವೈ ಅವರೂ ಅನಂತಕುಮಾರ್‌ ಸಲಹೆಯನ್ನು ಮಾನ್ಯ ಮಾಡುತ್ತಿದ್ದರು. ಸದ್ಯಕ್ಕೆ ಪಕ್ಷದ ಹಿರಿಯರ ಪೈಕಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಈ ಪಾತ್ರ ನಿರ್ವಹಿಸಬಲ್ಲರು. 2008ರ ಚುನಾವಣೆಯಲ್ಲಿಪಕ್ಷದ ಅಧ್ಯಕ್ಷರಾಗಿದ್ದ ಅವರು ಸಮಚಿತ್ತದಿಂದ ಈ ಹೊಣೆ ನಿಭಾಯಿಸಿದ್ದರು.

ಇನ್ನು ಬಿಎಸ್‌ವೈ ಸಂಪುಟದ ಸದಸ್ಯರಾದ ಆರ್‌.ಅಶೋಕ್‌, ಎಸ್‌.ಸುರೇಶ್‌ ಕುಮಾರ್‌, ಬಸವರಾಜ ಬೊಮ್ಮಾಯಿ ಅವರೂ ಸಂಧಾನಕಾರರಾಗಿ ಕೆಲಸ ಮಾಡಲು ಸಮರ್ಥರಾಗಿದ್ದಾರೆ. ಹಾಗಾಗಿ ಈ ನಾಯಕರನ್ನು ಸಂಧಾನಕ್ಕೆ ನಿಯೋಜಿಸಬೇಕು ಎಂಬ ಮಾತುಕತೆ ಪಕ್ಷದ ವಲಯದಲ್ಲಿ ನಡೆದಿದೆ ಎಂದು ಗೊತ್ತಾಗಿದೆ.

ಕಟೀಲ್‌ ಅಧ್ಯಕ್ಷರಾದ ಬಳಿಕ ಒಮ್ಮೆಯಷ್ಟೇ ಕೋರ್‌ ಕಮಿಟಿ ಸಭೆ ನಡೆದಿದೆ. ವರ್ಗಾವಣೆ, ನಿಗಮ ಮಂಡಳಿ ನೇಮಕ ವಿಚಾರದಲ್ಲಿಕಟೀಲ್‌ ಆಕ್ಷೇಪಿಸಿದ್ದರಿಂದ ಬಿಎಸ್‌ವೈ ಮುನಿಸಿಕೊಂಡಿದ್ದರು. ನಂತರ ಸಿಎಂ ಅವರನ್ನೊಮ್ಮೆ ಕಟೀಲ್‌ ಭೇಟಿಯಾಗಿದ್ದರು. ಈ ನಡುವೆಯೂ ಬೆಂಗಳೂರು ಮೇಯರ್‌ ಆಯ್ಕೆ ವೇಳೆ ಬಿಎಸ್‌ವೈ ಮಾತಿಗೆ ಮನ್ನಣೆ ನೀಡಿರಲಿಲ್ಲ.

ಇದರಿಂದ ಬಿಎಸ್‌ವೈ, ಕಟೀಲ್‌ ನಡುವಿನ ವೈಮನಸ್ಯ ಮುಂದುವರಿದಿದೆ. ಬಿಎಸ್‌ವೈ ಅವಧಿಯಲ್ಲಿ
ನೇಮಕವಾಗಿದ್ದ ಕಚೇರಿ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿರುವುದೂ ವಿವಾದಕ್ಕೆ ಗುರಿಯಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಹಾಗಾಗಿ ಜರೂರಾಗಿ ಸಂಧಾನ ನಡೆಸಲು ಉದ್ದೇಶಿಸಲಾಗಿದೆ ಎಂದು ಪಕ್ಷದ ಮುಖಂಡರೊಬ್ಬರು ತಿಳಿಸಿದ್ದಾರೆ.

Comments are closed.