ಕರ್ನಾಟಕ

ಯಡಿಯೂರಪ್ಪಗೆ ಮೂಗುದಾರ ಹಾಕಲು ಹೈಕಮಾಂಡ್ ಮಾಸ್ಟರ್​ಪ್ಲಾನ್

Pinterest LinkedIn Tumblr

ಬೆಂಗಳೂರು(ಆ. 30): ಸಂಪುಟ ರಚನೆ, ಖಾತೆ ಹಂಚಿಕೆ, ಪಕ್ಷಾಡಳಿತ ಇತ್ಯಾದಿ ವಿಚಾರಗಳಲ್ಲಿ ಬಿಎಸ್ ಯಡಿಯೂರಪ್ಪ ಅವರಿಗೆ ಮೂಗುದಾರ ಹಾಕಿದ್ದ ಬಿಜೆಪಿ ಹೈಕಮಾಂಡ್ ಇದೀಗ ಸರ್ಕಾರದ ಆಡಳಿತದಲ್ಲೂ ಹಿಡಿತ ಸಾಧಿಸಲು ಮುಂದಾಗಿದೆ. ಬಿಎಸ್​ವೈ ಅವರಿಂದ ಭ್ರಷ್ಟಚಾರ ರಹಿತ ಸ್ವಚ್ಛ ಆಡಳಿತ ಬರುವಂತೆ ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದೆ ಎಂಬ ಸುದ್ದಿ ಇದೆ.

ಭಾರತೀಯ ಜನತಾ ಪಕ್ಷಕ್ಕೆ ಈ ರಾಜ್ಯದಲ್ಲಿ ಎರಡನೇ ಬಾರಿಗೆ ಆಡಳಿತದ ಅವಕಾಶ ಪಡೆದಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಜನರಿಗೆ ತಪ್ಪು ಅಭಿಪ್ರಾಯ ಹೋಗಬಾರದು. ಜನರು ಮೆಚ್ಚುವಂಥ ಆಡಳಿತವನ್ನು ಸರಕಾರ ನೀಡಬೇಕು. ಜನರೇ ಮೊತ್ತೊಮ್ಮೆ ವೋಟ್ ಕೊಟ್ಟು ಗೆಲ್ಲಿಸುವಂಥ ಆಡಳಿತ ಕೊಡಬೇಕು ಎಂಬುದು ಬಿಜೆಪಿ ಹೈಕಮಾಂಡ್​ನ ಲೆಕ್ಕಾಚಾರವಂತೆ.

ಬಿಎಸ್​ವೈಗೆ ಅಂಕೆ ಹಾಕಲು ಬಿಜೆಪಿ ಹೈಕಮಾಂಡ್​ಗೆ ಪ್ರಬಲ ಕಾರಣಗಳೂ ಇವೆ ಎನ್ನಲಾಗಿದೆ. ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ವರ್ಗಾಔಣೆ ದಂಧೆಗೆ ಇಳಿದಿದ್ದಾರೆ. ಆಯಕಟ್ಟಿನ ಜಾಗಗಳಿಗೆ ಕೋಟಿಗಳಿಗೆ ಲೆಕ್ಕವೇ ಇಲ್ಲ ಎಂಬಿತ್ಯಾದಿ ಮಾಹಿತಿಗಳು ಹೈಕಮಾಂಡ್​ನವರಿಗೆ ಮುಟ್ಟಿದೆಯಂತೆ. ಈ ಹಿನ್ನೆಲೆಯಲ್ಲಿ ವರಿಷ್ಠರು ಬಹಳ ಗಂಭೀರವಾಗಿದ್ದು, ರಾಜ್ಯ ಬಿಜೆಪಿ ಸರ್ಕಾರದಿಂದ ಯಾವುದೇ ಭ್ರಷ್ಟಾಚಾರ ನಡೆಯದಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ಕೊಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರೀ ವಿರೋಧಿ. ತಾನು ತಿನ್ನಲ್ಲ, ಬೇರೆಯವರನ್ನೂ ತಿನ್ನೋಕೆ ಬಿಡಲ್ಲ. ರಾಜ್ಯದಲ್ಲೂ ಇದನ್ನೇ ನಿರೀಕ್ಷಿಸುತ್ತೇವೆ. ಸಿಎಂ ಬಿಎಸ್​ವೈ ಅವರು ತಾವೂ ತಿನ್ನಬಾರದು, ಕುಟುಂಬದವರಿಗೂ ತಿನ್ನೋಕೆ ಬಿಡಬಾರದು. ಸಂಪುಟದಲ್ಲಿರುವ ಯಾರೂ ತಿನ್ನದಂತೆ ನೋಡಿಕೊಳ್ಳಬೇಕು. ಭ್ರಷ್ಟಾಚಾರ ರಹಿತ, ಜನಪರ, ಸ್ವಚ್ಛ ಆಡಳಿತ ನೀಡಬೇಕು. ಮುಂದೆ ಚುನಾವಣೆಗೆ ಹೋದರೆ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಸಿಗಬೇಕು ಎಂಬುದು ಹೈಕಮಾಂಡ್ ಉದ್ದೇಶವೆನ್ನಲಾಗಿದೆ.

ಈ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದೆ. ಮೈತ್ರಿ ಸರ್ಕಾರದ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದಂತಹ ಸಮನ್ವಯ ಸಮಿತಿಯನ್ನು ಬಿಎಸ್​ವೈ ಸರ್ಕಾರದಲ್ಲೂ ರಚಿಸಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ. ಆ ನಿಟ್ಟಿನಲ್ಲಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕೋರ್ ಕಮಿಟಿ ರಚನೆ ಆಗುವ ಸಾಧ್ಯತೆ ಇದೆ. ಈ ಸಮಿತಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರ ಜೊತೆಗೆ ಮುಖ್ಯಮಂತ್ರಿ, ಹಿರಿಯ ಸಚಿವರು, ಬಿಜೆಪಿಯ ಹಿರಿಯ ನಾಯಕರು ಇರಲಿದ್ಧಾರೆ.

ಸರಕಾರ ಯಾವ ರೀತಿ ನಡೆಯಬೇಕು ಎಂಬ ಸಲಹೆಗಳನ್ನು ನೀಡುವುದು. ಹೈಕಮಾಂಡ್ ನಿರ್ದೇಶನಗಳನ್ನು ಮುಖ್ಯಮಂತ್ರಿಗೆ ತಲುಪಿಸುವುದು ಈ ಸಮಿತಿಯ ಪ್ರಮುಖ ಉದ್ದೇಶವಾಗಿದೆ ಎನ್ನಲಾಗಿದೆ.

Comments are closed.