ಕರಾವಳಿ

‘ವಲ್ಡ್ ಹೆಲ್ತ್ ಆರ್ಗನೈಝೇಷನ್’ ಫಲಕವಿರುವ ಪಂಜಾಬ್ ನೋಂದಣಿ ಹೊಂದಿದ್ದ ಕಾರಿನಲ್ಲಿ ಸುತ್ತಾಡುತ್ತಿದ್ದ ವಂಚಕರಿಬ್ಬರ ಬಂಧನ

Pinterest LinkedIn Tumblr

ಮಂಗಳೂರು, ಆಗಸ್ಟ್.24: ನಗರದ ಪಿವಿಎಸ್ ಸರ್ಕಲ್ ಬಳಿ ಪಂಜಾಬ್ ರಾಜ್ಯದ ನೋಂದಣಿ ಹೊಂದಿದ್ದ ಕಾರಿನಲ್ಲಿ ಅನುಮಾನಾಸ್ಪದ ವಾಗಿ ತಿರುಗುತ್ತಿದ್ದ ಇಬ್ಬರನ್ನು ಬಂಧಿಸಿರುವ ಮಂಗಳೂರು ಪೊಲೀಸರು ಕಾರು ಸಮೇತಾ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮಂಗಳೂರು ಪೊಲೀಸ್ ಅಯುಕ್ತ ಡಾ.ಹರ್ಷ. ಪಿ.ಎಸ್ ಅವರು ತಿಳಿಸಿದ್ದಾರೆ.

ಪಂಜಾಬಿನ ಬಲ್ಜೀಂದರ್ ಸಿಂಗ್ (48) ಹಾಗೂ ಬಸೀತ್ ಷಾ ಬಂಧಿತ ಆರೋಪಿಗಳು. ಬಂಧಿತರ ಕಾರಿನಲ್ಲಿ ‘ವಲ್ಡ್ ಹೆಲ್ತ್ ಆರ್ಗನೈಝೇಷನ್’ ಎಂದು ಬರೆದಿದ್ದು, ಐ ಡಿ ಕಾರ್ಡ್ ಮತ್ತು ಇನ್ನಿತರ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದು, ನಕಲಿ ದಾಖಲಾತಿಗಳನ್ನು ಇಟ್ಟುಕೊಂಡು ವಂಚಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ಕಾರು ಚಾಲಕ ಬಲ್ಜೀಂದರ್ ಸಿಂಗ್ ನನ್ನು ವಿಚಾರಿಸಿದಾಗ ‘ತಾನು ಬಸೀತ್ ಷಾ ಜೊತೆಯಲ್ಲಿ ಸುಮಾರು 2 ವರ್ಷಗಳಿಂದ ಇದ್ದುಕೊಂಡು ತನ್ನ ಹೆಸರಿನಲ್ಲಿದ್ದ ಕಾರನ್ನು ಷಾ ಗೆ ದೇಶಾದ್ಯಂತ ಸುತ್ತಾಡಲು ನೀಡಿ, ನನಗೆ ತಿಂಗಳಿಗೆ 20,000 ರೂ. ಸಂಬಳ ನೀಡುತ್ತಿದ್ದು, ಕಾರಿನ ಖರ್ಚು ವೆಚ್ಚಗಳನ್ನು ಆತನೇ ನೋಡಿಕೊಳ್ಳುತ್ತಿದ್ದಾನೆ ಎಂದು ಆರೋಪಿಬಲ್ಜೀಂದರ್ ಸಿಂಗ್ ತಿಳಿಸಿದ್ದಾನೆ ಎಂದು ಕಮಿಷನರ್ ಶನಿವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ಹೆಚ್ಚಿನ ವಿವರ :

ದಿನಾಂಕ: 17-08-2019 ರಂದು ಮಂಗಳೂರು ನಗರ ನಿಸ್ತಂತು ಕೊಠಡಿಯಿಂದ ನಿಸ್ತಂತು ಸಂದೇಶದ ಮೂಲಕ ನವಭಾರತ್ ಸರ್ಕಲ್, ಪಿವಿಎಸ್ ಸರ್ಕಲ್, ಮತ್ತು ಬಂಟ್ಸ್ ಹಾಸ್ಟೆಲ್ ರಸ್ತೆಯ ಕಡೆಗಳಲ್ಲಿ WORLD HEALTH ORGANIZATION DIRECTOR ಎಂಬ ನಾಮ ಫಲಕವನ್ನು ಅಳವಡಿಸಿದ ಪಂಜಾಬ್ ರಾಜ್ಯದ ಪಿಬಿ 65 ಎಎಸ್ 6786 ನೊಂದಣಿ ಸಂಖ್ಯೆ ಹೊಂದಿದ ಚಾಕ್ ಲೆಟ್ ಬಣ್ಣದ ಕಾರಿಗೆ Government of India ಎಂದು ಸ್ಟಿಕ್ಕರ್ ಅಂಟಿಸಿಕೊಂಡು ಅನುಮಾನಾಸ್ಪದವಾಗಿ ಓಡಾಡುತ್ತಿದೆ ಸದರಿ ಕಾರನ್ನು ಸಂಬಂಧಪಟ್ಟ ಸಂಚಾರ ನಿಯಂತ್ರಣ ಕರ್ತವ್ಯವನ್ನು ಜಂಕ್ಷನ್ ಗಳಲ್ಲಿ ನಿರ್ವಹಿಸುತ್ತಿರುವ ಸಿಬ್ಬಂದಿಗಳು ಹಾಗೂ ನಗರದ ಎಲ್ಲಾ ಠಾಣಾಧಿಕಾರಿಗಳು ತಮ್ಮ ತಮ್ಮ ಠಾಣಾ ಸರಹದ್ದಿನಲ್ಲಿ ವಾಹನ ತಪಾಸಣೆ ನಡೆಸಿ ಸದ್ರಿ ಕಾರು ಕಂಡು ಬಂದಲ್ಲಿ ಕೂಡಲೇ ತಡೆದು ನಿಲ್ಲಿಸಬೇಕು ಎಂದು ಆದೇಶವಾಗಿರುತ್ರದೆ.

ಸದ್ರಿ ಆದೇಶದಂತೆ ಸಂಚಾರ ಪಶ್ಚಿಮ ಠಾಣೆಯ ಸಿಬ್ಬಂದಿಯಾದ ಹೆಚ್ ಸಿ 692 ಯೋಗರಾಜ್ ರವರು ಸಂಜೆ 4.52 ಗಂಟೆಗೆ ಸ್ವೀಕರಿಸಿ ಕರ್ತವ್ಯದಲ್ಲಿರುತ್ತಾ ಸಂಜೆ 5.00 ಗಂಟೆ ಸಮಯಕ್ಕೆ ಪಿವಿಎಸ್ ಜಂಕ್ಷನ್ ಕಡೆಯಿಂದ ಬಳ್ಳಾಲ್ ಭಾಗ್ ಕಡೆಗೆ ಬರುತ್ತಿದ್ದ ನಿಸ್ತಂತು ಕೊಠಡಿಯಿಂದ ತಿಳಿಸಿದ ವಿವರಗಳುಳ್ಳ ಕಾರನ್ನು ತಡೆದು ನಿಲ್ಲಿಸಿ ಕಾರು ಚಾಲಕನಲ್ಲಿ ಆತನ ಹೆಸರು ವಿಳಾಸ ಕೇಳಲಾಗಿ ಆತನ ಹೆಸರು ಬಲ್ಜೀಂದರ್ ಸಿಂಗ್ (48) ತಂದೆ: ಜಾಗಿರ್ ಸಿಂಗ್ ,ವಾಸ A.K.S. ಕಾಲೋನಿ, ಬಾಬತ್ ರೋಡ್, ಜರತ್ ಪುರ, ಎಸ್.ಎ.ಎಸ್. ನಗರ, ಮೊಹಾಲಿ, ಪಂಜಾಬ್. ಚಾಲಕನ ಎಡ ಭಾಗದಲ್ಲಿ ಕುಳಿತ್ತಿದ್ದವನ ಹೆಸರು ಕೇಳಲಾಗಿ ಡಾ ಬಸೀತ್ ಷಾ ತಂದೆ: ಮೆಹರಾಜ್-ಯು-ದ್ದೀನ್ ಷಾ, ವಾಸ: ಮನೆ ನಂ 84 ಲೇನ್ ಅಂದೇರಿ ಈಸ್ಟ್ ಮುಂಬಯಿ ಎಂಬುದಾಗಿ 2 ಜನರು ತಿಳಿಸಿದ್ದು, ಕರ್ತವ್ಯದಲ್ಲಿದ್ದ ಯೋಗರಾಜ್ ರವರು ಸದ್ರಿ ಕಾರನ್ನು ಬರ್ಕೆ ಪೊಲೀಸು ಠಾಣೆಯ ಠಾಣಾಧಿಕಾರಿಯವರ ಮುಂದೆ ಹಾಜರು ಪಡಿಸಿರುತ್ತಾರೆ.

ಬರ್ಕೆ ಪೊಲೀಸು ಠಾಣಾ ಠಾಣಾಧಿಕಾರಿಯವರು ಸದ್ರಿ ಕಾರನ್ನು 2 ಜನ ವ್ಯಕ್ತಿಗಳನ್ನು ಶೋಧನೆ ಮಾಡಿದಾಗ ಕಾರಿನಲ್ಲಿದ್ದ ವ್ಯಕ್ತಿಯಾದ ಡಾ ಬಸೀತ್ ಷಾ ನ ವಶದಲ್ಲಿ WORLD HEALTH ORGANIZATION, Dr. Basit Sha, MBBS/MS/MCH – Gold Medalist, Director Reg. No. MCI/2013/3184 ಎಂಬುದಾಗಿ ಇಗ್ಲೀಷಿನಲ್ಲಿ ಮುದ್ರಿಸಲ್ಪಟ್ಟ ಐ ಡಿ ಕಾರ್ಡ್ ಮತ್ತು ಇನ್ನಿತರ ದಾಖಲೆ ಪತ್ರಗಳು ದೊರೆತಿದ್ದು, ಆತನನ್ನು ಕೂಲಂಕುಶವಾಗಿ ವಿಚಾರಿಸಿದಾಗ ಡಾ ಬಸೀತ್ ಷಾ ನು ತಾನು ಪಿಯುಸಿ ತನಕ ವಿದ್ಯಾಭ್ಯಾಸ ಮಾಡಿರುವುದಾಗಿ ತಿಳಿಸಿದ್ದು, ನಕಲಿ ದಾಖಲಾತಿಗಳನ್ನು ಇಟ್ಟುಕೊಂಡು ತಾನೊಬ್ಬ ಡಾಕ್ಟರ್ ಹಾಗೂ WORLD HEALTH ORGANIZATION ನ ಡೈರೆಕ್ಟರ್ ಎಂಬುದಾಗಿ ದಾಖಲಾತಿಗಳನ್ನು ತನ್ನ ವಶದಲ್ಲಿಟ್ಟುಕೊಂಡಿದ್ದಾಗಿದೆ.

ಅಲ್ಲದೇ ಸದ್ರಿ ವ್ಯಕ್ತಿಯನ್ನು ಇನ್ನೂ ಕೂಲಂಕುಷವಾಗಿ ವಿಚಾರಿಸಿದಾಗ ತನ್ನ ಹೆಸರು ಸೌಖತ್ ಅಹಮ್ಮದ್ ಲೋನೆ. ತಂದೆ: ಮಹಮ್ಮದ್ ರಂಜಾನ್ ಲೋನೆ, ವಾಸ: ಗಂಜೀಪುರ ಗ್ರಾಮ, ಬಟಿವಿನ ತಾಲೂಕು, ವಕುರಾ ಜಿಲ್ಲೆ, ಕಾಶ್ಮೀರ ಎಂಬುದಾಗಿ ವಿಚಾರಣೆ ಸಮಯ ತಿಳಿಸಿರುತ್ತಾನೆ.

ಕಾರು ಚಾಲಕ ಬಲ್ಜೀಂದರ್ ಸಿಂಗ್ ನ್ನು ವಿಚಾರಿಸಿ ಕೊಂಡಾಗ ಆತನು ತಾನು ಡಾ ಬಸೀತ್ ಷಾ ನ ಜೊತೆಯಲ್ಲಿ ಸುಮಾರು 2 ವರ್ಷಗಳಿಂದ ಇದ್ದುಕೊಂಡು ತನ್ನ ಹೆಸರಿನಲ್ಲಿದ್ದ ಕಾರನ್ನು ಡಾ ಬಸೀತ್ ಷಾ ಗೆ ದೇಶಾದ್ಯಂತ ಸುತ್ತಾಡಲು ನೀಡಿ ನನಗೆ ತಿಂಗಳಿಗೆ 20,000/- ವನ್ನು ಸಂಬಳವನ್ನು ನೀಡುತ್ತಿದ್ದು, ಕಾರಿನ ಖರ್ಚು ವೆಚ್ಚಗಳನ್ನು ಡಾ ಬಸೀತ್ ಷಾ ನೇ ನೋಡಿಕೊಳ್ಳುತ್ತಿದ್ದು, ಡಾ ಬಸೀತ್ ಷಾ ನ ಆದೇಶವನ್ನು ಪಾಲಿಸುವುದಾಗಿದೆ ಎಂಬುದಾಗಿ ತಿಳಿಸಿರುತ್ತಾನೆ.

ಆರೋಪಿತನ ವಿರುದ್ದ ಈಗಾಗಲೇ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಅ.ಕ್ರ.8/2017 ಕಲಂ 420, 406, 419 ಐಪಿಸಿ ಯಂತೆ ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣದಿಂದ ತಲೆ ಮರೆಸಿಕೊಂಡು ಬಂದು ಭಾರತ ದೇಶಾದ್ಯಂತ ಸುತ್ತಾಡಿಕೊಂಡು ವಂಚನೆ ನಡೆಸುತ್ತಿರುವುದು ವಿಚಾರಣೆ ಸಮಯ ತಿಳಿದು ಬಂದಿರುತ್ತದೆ.

ಡಾ ಬಸೀತ್ ಷಾ ಎಂಬ ಹೆಸರಿನಲ್ಲಿ ಮ್ಯಾಟ್ರಿಮೋನಿಯಲ್ ನಲ್ಲಿ ತನ್ನ ಹೆಸರು ನೊಂದಾಯಿಸಿ ಮದುವೆ ಆಗುವುದಾಗಿ ನಂಬಿಸಿ ಹಲವಾರು ಮಹಿಳೆಯರನ್ನು ಗೋವಾ, ಬೆಳಗಾಂ, ಮುಂಬಯಿ, ಜಾರ್ಖಂಡ್, ಜೈಪುರ, ಕೊಲ್ಕಾತ್ತಾ, ಛತ್ತೀಸ್ ಗಡ್, ಅಮೃತ್ ಸರ್, ಹೈದರಬಾದ್ ಮುಂತಾದ ಕಡೆಗಳಲ್ಲಿ ವಂಚಿಸಿದ್ದಾನೆಂದು ವಿಚಾರಣೆಯ ಸಮಯ ತಿಳಿದು ಬಂದಿದ್ದು, ಅದರಂತೆ ಮ್ಯಾಟ್ರಿಮೋನಿಯಲ್ ಮೂಲಕ ಮಂಗಳೂರಿನಲ್ಲಿ ಹೆಸರು ನೊಂದಾಯಿಸಿದ್ದ ಮಹಿಳೆಯೊಂದಿಗೆ ಸಂಪರ್ಕಿಸಲು ಬಂದಿದ್ದ ಸಮಯ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡಿ ದ್ದಾಗಿದೆ. ಆರೋಪಿತನು ಯಾವುದೇ ವೆಬ್ ಸೈಟ್ ನ್ನು ತನ್ನ ಹೆಸರಿನಲ್ಲಿ ತೆರೆದು ತಾನೊಬ್ಬ ಡಾಕ್ಟರ್ ಎಂಬುದಾಗಿ ಬಿಂಬಿಸಿ ಮೋಸ ಮಾಡುತ್ತಿರುವ ವ್ಯಕ್ತಿ ಎಂಬುದಾಗಿ ವಿಚಾರಣೆಯಿಂದ ತಿಳಿದು ಬಂದಿರುತ್ತದೆ.

ಎರಡು ಜನ ವ್ಯಕ್ತಿಗಳಲ್ಲಿ ಡಾ ಬಸೀತ್ ಷಾ ನಕಲಿ ದಾಖಲಾತಿಗಳನ್ನು ತನ್ನ ವಶದಲ್ಲಿಟ್ಟುಕೊಂಡು ತಾನೊಬ್ಬ ಡಾಕ್ಟರ್ ಎಂಬುದಾಗಿ ಬಿಂಬಿಸಿಕೊಂಡು ವಂಚನೆ ಮಾಡುತ್ತಿರುವುದು ಬಲ್ಜೀಂದರ್ ಸಿಂಗ್ ಆತನಿಗೆ ಸಹಕರಿಸಿರುವುದು ವಿಚಾರಣೆಯಿಂದ ತಿಳಿದು ಬಂದಂತೆ 2 ಜನ ಆರೋಪಿತರ ವಿರುದ್ದ ಬರ್ಕೆ ಠಾಣಾ ಅ.ಕ್ರ. 56/2019 ಕಲಂ 170, 171, 419, 420 ಜೊತೆಗೆ 34 ಐಪಿಸಿ & ಕಲಂ 7 The State emblem of India (Prohibition of Improper Use) Act. ನಂತೆ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಿ ಪೊಲೀಸು ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರಿಸುತ್ತಿದ್ದು, ಆರೋಪಿ ಬಸೀತ್ ಷಾ ನು ಇತರೆ ಆರೋಪಿಗಳೊಂದಿಗೆ, ಇತರ ದೇಶದ ವ್ಯಕ್ತಿಗಳೊಂದಿಗೆ ಸಂಪರ್ಕ ಹೊಂದಿದ್ದಾನೆಯೇ ಎಂಬ ಬಗ್ಗೆ ತನಿಖೆಯಿಂದ ತಿಳಿದುಕೊಳ್ಳಬೇಕಾಗಿರುತ್ತದೆ ಎಂದು ಪೊಲೀಸ್ ಅಯುಕ್ತ  ಡಾ.ಹರ್ಷ. ಪಿ.ಎಸ್ ಪ್ರಕರಣದ ಕುರಿತು ವಿವರ ನೀಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಲಕ್ಷ್ಮೀ ಗಣೇಶ್, ಅರುಣಾನಿಶ್ ಗಿರಿ ಹಾಗೂ ಮತ್ತಿತ್ತರ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.