ಕರ್ನಾಟಕ

ಮೊದಲ ದಿನದ ಸಂಸತ್​​ ಅಧಿವೇಶನದಲ್ಲಿ ವಿಶೇಷ ಧಿರಿಸು ಧರಿಸಿ ಮಿಂಚಿದ ಯುವ ಸಂಸದರು!

Pinterest LinkedIn Tumblr

ನವದೆಹಲಿ: ದೇಶದ ಅಧಿಕಾರದ ಕೇಂದ್ರ ಸ್ಥಾನ ಸಂಸತ್ತಿಗೆ ಪ್ರವೇಶಿಸುವುದೆಂದರೆ ಸಂಭ್ರಮದ ಕ್ಷಣ. ಮೊದಲ ಬಾರಿಗೆ ಪ್ರವೇಶಿಸುವುದೆಂದರೆ ಇನ್ನೂ ಹೆಚ್ಚಿನ ಪುಳಕವಿರುತ್ತದೆ.

ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ ಯುವ ಸಂಸದರ ಪೈಕಿ ಒಬ್ಬರಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದ ತೇಜಸ್ವಿ ಸೂರ್ಯ ಇಂದು ಕರ್ನಾಟಕದ ಮೈಸೂರಿನ ಗತ ವೈಭವವನ್ನು ಮೆರೆದಿದ್ದಾರೆ. ಮೈಸೂರು ಶೈಲಿಯ ಪಂಚೆ, ಶಲ್ಯ ಧರಿಸಿ ತೇಜಸ್ವಿ ಸೂರ್ಯ ಅವರು ಬಂದಿದ್ದು ವಿಶೇಷವಾಗಿತ್ತು.

ಸಂಸತ್​ ಭವನದೊಳಗೆ ಹೋಗುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಅವರು, ನನ್ನನ್ನು ಆಯ್ಕೆ ಮಾಡಿದ ಜನರಿಗೆ ವಿನಯಪೂರ್ವಕವಾಗಿ ಧನ್ಯವಾದ ಅರ್ಪಿಸುತ್ತಾ, ಸಂಸತ್​ ಭವನವನ್ನು ಪ್ರವೇಶಿಸುತ್ತಿದ್ದೇನೆ ಎಂದರು. ಸಂಸತ್​ ಭವನ ಬಹುದೊಡ್ಡ ಸಂಸ್ಥೆ. ನಮ್ಮ ದೇಶದ ಭೂತ, ವರ್ತಮಾನ ಮತ್ತು ಭವಿಷ್ಯತ್ತಿನ ಹಣೆಬರಹ ನಿರ್ಧಾರವಾಗಿರುವ, ನಿರ್ಧಾರವಾಗಲಿರುವ ಪವಿತ್ರ ಸ್ಥಳವಿದು. ಇಂಥ ಪವಿತ್ರ ಸ್ಥಳದಲ್ಲಿ ಕುಳಿತು ಭಾರತ ಮಾತೆಯ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಕೊಂಡೊಯ್ಯುವ ಆದರ್ಶದೊಂದಿಗೆ ಸಂಸತ್​ನ ಒಳಗೆ ಮತ್ತು ಹೊರಗೆ ಹೋರಾಡುವೆ ಎಂದರು.

ಕೊಡಗು -ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಎರಡನೇ ಬಾರಿ ಸಂಸದರಾದ ಸಂತಸದಲ್ಲಿ ಈ ಬಾರಿ ಕೊಡವರ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದರು.

ಇವರಿಬ್ಬರ ಜೊತೆಗೆ ಮೊದಲ ಬಾರಿಗೆ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಬಾಲಿವುಡ್ಡಿನ ಹಿರಿಯ ನಟ ಸನ್ನಿ ಡಿಯೋಲ್, ಭೋಜ್ ಪುರಿ ನಟ, ದೆಹಲಿ ಸಂಸದ ರವಿ ಕಿಷನ್ ಅವರು ಕಪ್ಪುಬಣ್ಣದ ಗಾಗಲ್ಸ್, ನೀಲಿ ವೇಸ್ಟ್​ಕೋಟ್​ ಧರಿಸಿ ಗಮನ ಸೆಳೆದರು.

Comments are closed.