ಉಡುಪಿ: ದರೋಡೆಗೆ ಹೊಂಚು ಹಾಕುತ್ತಿದ್ದ ನಾಲ್ಕು ಮಂದಿಯನ್ನು ಉಡುಪಿ ಪೊಲೀಸರು ಮಂಗಳವಾರ ಉಡುಪಿ ನಗರದ ಕಿನ್ನಿಮೂಲ್ಕಿ ಜಂಕ್ಷನ್ ಬಳಿ ಬಂಧಿಸಿದ್ದಾರೆ.
ತಮಿಳು ಮತ್ತು ಹಿಂದಿ ಭಾಷೆಯಲ್ಲಿ ಮಾತನಾಡುತ್ತಿದ್ದ 5 ಮಂದಿ ದರೋಡೆಗೆ ಹೊಂಚು ಹಾಕುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆ ಮುಂಜಾನೆ 4 ಗಂಟೆಗೆ ಕಾರ್ಯಾಚರಣೆ ನಡೆಸಿದ್ದು 5 ಮಂದಿ ಮೂರು ಬೈಕ್ಗಳೊಂದಿಗೆ ನಿಂತಿದ್ದು ಅವರನ್ನು ಸುತ್ತುವರಿದು ನಾಲ್ಕು ಮಂದಿಯನ್ನು ಬಂಧಿಸಲಾಯಿತು. ಓರ್ವ ಈ ವೇಳೆ ಪರಾರಿಯಾಗಿದ್ದಾನೆ.

ಶ್ಯಾಮ್, ವೆಂಕಟೇಶ ಯಾನೆ ವೆಂಕಟ್, ರಾಕೇಶ್ ಯಾನೆ ರಾಕೇಶ್ ಕುಮಾರ್ ಮತ್ತು ಗೋಪಿ ಬಂಧಿತರು. ಇನ್ನೋರ್ವ ಆರೋಪಿ ಪರಮಶಿವ ಯಾನೆ ರಮೇಶ್ ತಪ್ಪಿಸಿಕೊಂಡಿದ್ದಾನೆ.ಹಣದೊಂದಿಗೆ ಹೋಗುವ ಜನರಿಗೆ ತಮ್ಮಲ್ಲಿರುವ ತುರಿಕೆ ಹುಡಿಯನ್ನು ಎರಚಿ ಅಥವಾ ಸ್ಲಿಂಗ್ಶಾಟ್ನಿದ ಬೇರಿಂಗ್ ಬಾಲ್ಗಳನ್ನು ಪ್ರಯೋಗಿಸಿ ಅವರ ಗಮನ ಬೇರೆಡೆ ಸೆಳೆದು ದರೋಡೆ ಮಾಡುವ ಅಥವಾ ಹಲ್ಲೆ ನಡೆಸಿ ಹಣ ದೋಚುವ ಗ್ಯಾಂಗ್ ಆಗಿತ್ತು ಎನ್ನಲಾಗಿದೆ.
ಬಂಧಿತರಿಂದ ಎರಡು ಮಂಕಿ ಕ್ಯಾಪ್, ಎರಡು ಕ್ಯಾಪ್, ಒಂದು ಫೇಸ್ ಮಾಸ್ಕ್, ಒಂದು ಬ್ಯಾಗ್, 5 ಮೊಬೈಲ್ ಪೋನ್ಗಳು, ಒಂದು ಸ್ಲಿಂಗ್ ಶಾಟ್, 25 ಬೇರಿಂಗ್ ಬಾಲ್ಗಳಿರುವ ಪ್ಲಾಸ್ಟಿಕ್ ತೊಟ್ಟೆ, ತುರಿಕೆ ಪುಡಿಯುಳ್ಳ ಪರ್ಸ್, ಐಡೆಂಟಿಟಿ ಕಾರ್ಡ್ಗಳು, ಆಧಾರ್ಕಾರ್ಡ್, ಮೂರು ಬೈಕ್ಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಮತ್ತು ಮಲ್ಪೆ ಪೊಲೀಸ್ ಉಪನಿರೀಕ್ಷಕ ಮಧು ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
Comments are closed.