ಕರ್ನಾಟಕ

ಬಿಜೆಪಿ ಶಾಸಕರಿಗೆ ಗಾಳ ಹಾಕಿದ ಕಾಂಗ್ರೆಸ್ -ಜೆಡಿಎಸ್?

Pinterest LinkedIn Tumblr


ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಆಪರೇಷನ್​ ಕಮಲಕ್ಕೆ ಮುಂದಾದ ಬಿಜೆಪಿಗೆ ಉಭಯ ಪಕ್ಷಗಳು ತಿರುಗೇಟು ನೀಡಲು ತಂತ್ರ ರೂಪಿಸಿವೆ. ಒಂದೆಡೆ ಹೈಕಮಾಂಡ್​ ಸೂಚನೆಯಂತೆ ರಾಜ್ಯ ನಾಯಕರು ಸಚಿವ ಸ್ಥಾನ ವಂಚಿತರ ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಇನ್ನೊಂದೆಡೆ ಆಪರೇಷನ್​ ಕಮಲವನ್ನು ವಿಫಲಗೊಳಿಸಲು ಬಿಜೆಪಿಯ ಅತೃಪ್ತ ಶಾಸಕರನ್ನು ಕೈ-ತೆನೆ ನಾಯಕರು ಭೇಟಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ರಾತ್ರಿಯಿಂದಲೇ ಆಪರೇಷನ್​ ಕೈ-ತೆನೆಗೆ ಮುಂದಾಗಿರುವ ಎರಡೂ ಪಕ್ಷಗಳು ಬಿಜೆಪಿಯ 5 ಶಾಸಕರನ್ನು ಸಂಪರ್ಕಿಸಿ ಮಾತುಕತೆ ನಡೆಸಿದ್ದಾರೆ. ಜೆಡಿಎಸ್​ಗೆ ಬಂದರೆ ಸಚಿವ ಸ್ಥಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಸಚಿವ ಡಿಕೆಶಿ ಅವರೇ ಕೈ-ತೆನೆ ಆಪರೇಷನ್​ನ ಮುಂದಾಳತ್ವ ವಹಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಯಾರಿಗೆ ಗಾಳ..?

ಬಿಜೆಪಿಗೆ ಬಳ್ಳಾರಿಯಿಂದಲೇ ಕೌಂಟರ್​ ಆಪರೇಷನ್​ ಕೊಡಲು ಮುಂದಾಗಿದ್ದಾರೆ. ಡಿಕೆಶಿ ಹಾಗೂ ಸಿಎಂ ಆಪ್ತರು ಶಿರಗುಪ್ಪ ಬಿಜೆಪಿ ಶಾಸಕ ಎಂ.ಎಸ್​ ಸೋಮಲಿಂಗಪ್ಪ ಅವರಿಗೆ ಗಾಳ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಹಣಕಾಸಿನ ತೊಂದರೆಯಲ್ಲಿರುವ ಸೋಮಲಿಂಗಪ್ಪನವರಿಗೆ ಹಣಕಾಸಿನ ನೆರವು ನೀಡಿ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡುವ ಭರವಸೆ ನೀಡಿದ್ದಾರೆ. ಹೀಗಾಗಿ ಸೋಮಲಿಂಗಪ್ಪ ಬಿಜೆಪಿಯಿಂದ ಕಾಂಗ್ರೆಸ್​ ಅಥವಾ ಜೆಡಿಎಸ್​ಗೆ ಬರುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇನ್ನು ದೇವದುರ್ಗದ ಬಿಜೆಪಿ ಶಾಸಕ ಶಿವನಗೌಡ ನಾಯಕ್​, ಹಿರಿಯೂರು ಶಾಸಕಿ ಪೂರ್ಣಿಮಾ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್​, ಹಾಸನ ಶಾಸಕ ಪ್ರೀತಂಗೌಡ ಅವರ ಸಂಪರ್ಕಕ್ಕೆ ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಪ್ರಮುಖವಾಗಿ ಬೆಂಗಳೂರಿನ ಪ್ರಭಾವಿ ವೀರಶೈವ ಶಾಸಕರೊಬ್ಬರ ಸಂಪರ್ಕಕ್ಕೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ. ಅವರು ಈ ಹಿಂದೆ ಕಾಂಗ್ರೆಸ್​ನಲ್ಲೇ ಇದ್ದರು. ಡಿಸಿಎಂ ಪರಮೇಶ್ವರ್ ಹಾಗೂ ಸಚಿವ ಡಿಕೆಶಿ ಈಗಾಗಲೇ ಆ ಶಾಸಕರ ಜೊತೆ ಮಾತುಕತೆ ನಡೆಸಿದ್ದು, ಮನವೊಲಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯಲ್ಲಿದ್ದರೆ ಬಿಎಎಸ್​ವೈ ಮತ್ತು ಅವರ ಮಕ್ಕಳು ಬೆಳೆಯಲು ಬಿಡಲ್ಲ. ನಮ್ಮ ಪಕ್ಷಕ್ಕೆ ಬಂದರೆ ದಕ್ಷಿಣ ಕರ್ನಾಟಕದ ವೀರಶೈವ-ಲಿಂಗಾಯತ ನಾಯಕರಾಗುವ ಅವಕಾಶ ಇದೆ. ಮಂತ್ರಿ ಸ್ಥಾನ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆ ಶಾಸಕರರೂ ಸಹ ಕಾಂಗ್ರೆಸ್​ಗೆ ಬರುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ ಎನ್ನಲಾಗುತ್ತಿದ್ದು, ಬಿಜೆಪಿಗೆ ಕೈಕೊಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Comments are closed.