
ಮುಂಬಯಿ: ನಕಲಿ ಕಂಪನಿಗಳ ಮೂಲಕ 1,478 ಕೋ. ರೂ. ಗಳಷ್ಟು ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಆರೋಪಕ್ಕೊಳಗಾಗಿರುವ ನಗರದ ವಜ್ರ ವ್ಯಾಪಾರಿ ಮತ್ತವರ ಸಹಾಯಕನಿಗೆ ಸೇರಿದ ಸುಮಾರು 58.16 ಕೋ.ರೂ.ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ರಾಜೇಶ್ವರ ಎಕ್ಸ್ಪೋರ್ಟ್ಸ್ ನ ರಿತೇಶ್ ಜೈನ್ ಮತ್ತವರ ಸಹಾಯಕ ಅಮೃತಲಾಲ್ ಜೈನ್ ಅವರು ಕೇಂದ್ರ ಸರಕಾರ 500 ಮತ್ತು 1,000 ರೂ. ಮೌಲ್ಯದ ನೋಟುಗಳನ್ನು ಅಪಮೌಲ್ಯಗೊಳಿಸಿದ ಬಳಿಕ ನಕಲಿ ಕಂಪನಿಗಳ ಹೆಸರಿನಲ್ಲಿ 100 ಕೋ. ರೂ.ಗಳಷ್ಟು ಹಣವನ್ನು ಠೇವಣಿ ಇರಿಸಿದುದು ತನಿಖೆಯ ವೇಳೆ ಬಹಿರಂಗಕ್ಕೆ ಬಂದಿತ್ತು.
ಈ ಪ್ರಕರಣದ ಹಿನ್ನೆಲೆಯಲ್ಲಿ 10 ಸ್ಥಿರಾಸ್ತಿಗಳು ಮತ್ತು 58.16 ಕೋ. ರೂ. ಮೌಲ್ಯದ ಚಿನ್ನ ಮತ್ತು ವಜ್ರಾಭರಣಗಳನ್ನು ಜಫ್ತಿ ಮಾಡಿದೆ. ಜಫ್ತಿ ಮಾಡಿಕೊಳ್ಳಲಾಗಿರುವ ಆಸ್ತಿಗಳು ರಿತೇಶ್ ಮತ್ತು ಅಮೃತ್ಲಾಲ್ ಅವರಿಗೆ ಸೇರಿದವಾಗಿವೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಯೋರ್ವರು ತಿಳಿಸಿದರು.
ಈ ಹಿಂದೆ ಜಾರಿ ನಿರ್ದೇಶನಾಲಯ ನಕಲಿ ಕಂಪನಿಗಳ ಹೆಸರಿನಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆದ ಆರೋಪದ ಮೇಲೆ ರಿತೇಶ್ ವಿರುದ್ಧ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ, 2002ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿತ್ತು. ಅಷ್ಟೇ ಅಲ್ಲದೆ ಮುಂಬಯಿ ಪೊಲೀಸರು ಕಳೆದ ಡಿಸೆಂಬರ್ನಲ್ಲಿ ರಿತೇಶ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು.
-ಉದಯವಾಣಿ
Comments are closed.