ಕರ್ನಾಟಕ

ಚಕ್ರವ್ಯೂಹ ಎಂದರೇನು ?ಇದನ್ನು ಪ್ರವೇಶಿಸುವ ಲಾಜಿಕ್ ಏನು ಎಂಬುದರ ಸಮಗ್ರ ಮಾಹಿತಿ.

Pinterest LinkedIn Tumblr

ಮಂಗಳೂರು: ಮಹಾಭಾರತ ಯುದ್ಧದಲ್ಲಿ ರಚಿಸಲಾಗಿದ್ದ ವ್ಯೂಹಗಳಲ್ಲಿ ಅತ್ಯಂತ ಕ್ಲಿಷ್ಟಕರವಾದದ್ದು ‘ಚಕ್ರವ್ಯೂಹ’. ಏಳು ವಲಯಗಳಲ್ಲಿ ರಚಿಸುವ ಈ ವ್ಯೂಹದೊಳಗೆ ಶತ್ರುಗಳ ಪ್ರವೇಶ ಅಸಾಧ್ಯ. ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರನ್ನು ಸಂಹರಿಸಲು ದ್ರೋಣಾಚಾರ್ಯರು ತನ್ನ ಅನುಭವವೆಲ್ಲವನ್ನೂ ಉಪಯೋಗಿಸಿ ರಚಿಸಿದ ವ್ಯೂಹವೇ ‘ಚಕ್ರವ್ಯೂಹ’. ಇದರಲ್ಲಿ ಸಿಲುಕಿಕೊಂಡ ಅಭಿಮನ್ಯು ವೀರಮರಣವನ್ನಪ್ಪುತ್ತಾನೆ. ಚಕ್ರವ್ಯೂಹ ವೆಂದರೇನು? ಅದರ ಒಳಗೆ ಪ್ರವೇಶಿಸಲು ಅಭಿಮನ್ಯುವಿಗೆ ಗೊತ್ತಿತ್ತೇ? ಅದರ ಒಳಗೆ ಪ್ರವೇಶಿಸಲು ಇರುವ ಲಾಜಿಕ್ ಏನು? ಎಂಬ ಅನೇಕ ವಿಷಯಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳೋಣ.

‘ಚಕ್ರವ್ಯೂಹ’ವನ್ನು ಏಳು ವಲಯಗಳಲ್ಲಿ ನಿರ್ಮಿಸಲಾಗಿರುತ್ತದೆ.ಒಂದು ಕಡೆ ಮಾತ್ರ ಕಿರಿದಾದ ಮಾರ್ಗವಿರುತ್ತದೆ.
ಸಾಮಾನ್ಯವಾಗಿ, ಯಾರೇ ಆಗಲಿ ಮಾರ್ಗವಿರುವ ಕಡೆಯಿಂದಲೇ ಪ್ರವೇಶಿಸುತ್ತಾರೆ.ಈ ರೀತಿ ಶತ್ರುಗಳನ್ನು ಸಂಹರಿಸುತ್ತಾ ವಲಯಗಳ ಸುತ್ತಲೂ ಸುತ್ತುತ್ತಾ ಕೇಂದ್ರ ಭಾಗಕ್ಕೆ ಹೋಗುತ್ತಾರೆ.
ಹಾಗೆ ಹೋಗುವಾಗ…ಎದುರಾಗುವ ಶತ್ರುವನ್ನು ಸಂಹರಿಸುತ್ತಾ ಒಳಗೆ ಹೋಗುವ ಪ್ರಯತ್ನ ಮಾಡುತ್ತಾರೆ.
ಹೀಗೆ ಮಾಡುವುದರಿಂದ …ಮರಣಹೊಂದಿದ ಸೈನಿಕನ ಸ್ಥಾನದಲ್ಲಿ ಮತೊಬ್ಬ ಬಂದು ಸೇರಿಕೊಳ್ಳುತ್ತಾನೆ, ಅಲ್ಲಿಂದ ಅಭಿಮನ್ಯುವಿನ ರಕ್ಷಕರಾಗಿ ಬಂದವರನ್ನು ಒಳಗೆ ಹೋಗದಂತೆ ತಡೆದು ನಿಲ್ಲುತ್ತಾರೆ. ಹೀಗೆ ಮಾಡುವುದರಿಂದ… ಅಭಿಮನ್ಯುವನ್ನು ಒಬ್ಬಂಟಿಗನನ್ನಾಗಿಸಿ, ಒಳಗೆ ಆಹ್ವಾನಿಸಿ ಕೊಳ್ಳಬೇಕೆನ್ನುವುದೇ ದ್ರೋಣಾಚಾರ್ಯರ ಯೋಜನೆ.

ತಾಯಿಯ ಗರ್ಭದಲ್ಲಿರುವಾಗಲೇ, ಚಕ್ರವ್ಯೂಹ ಪ್ರವೇಶವನ್ನು ತಿಳಿದುಕೊಂಡಿದ್ದ ಅಭಿಮನ್ಯು, ದ್ರೋಣಚಾರ್ಯ ಆಲೋಚಿಸಿದಂತಲ್ಲದೆ…ಬೇರೆಯೇ ರೀತಿಯ ದಾರಿ ಹುಡುಕಿದ. ಅದರ ಪ್ರಕಾರ ತನ್ನೆದುರಿಗೆ ಬರುವ ಪ್ರತ್ಯರ್ಥಿ ಯನ್ನಲ್ಲದೆ ಆವನ ಎಡ,ಬಲಗಳಲ್ಲಿರುವ ಇಬ್ಬರನ್ನು ಸಾಯಿಸಲಾರಂಭಿಸುತ್ತಾನೆ… ಹೀಗೆ ಎಲ್ಲರನ್ನೂ ಸಾಯಿಸುತ್ತಾ ಒಳಗೆ ಹೋಗುತ್ತಾನೆ… ಹೀಗೆ ಮಾಡುವುದರಿಂದ ಹೆಚ್ಚಿನ ಅಂತರ ದೊರೆಯುತ್ತದೆ, ಇದರಿಂದಾಗಿ … ಅಭಿಮನ್ಯುವಿಗೆ ರಕ್ಷಣೆಯಾಗಿ ಬರುವ ಧರ್ಮರಾಜ,ಭೀಮ,ನಕುಲ,ಸಹದೇವರು ವ್ಯೂಹದೊಳಕ್ಕೆ ಜೊತೆಯಾಗಿ ಬರಲು ಅವಕಾಶವಿದ್ದು ಕೌರವರ ವಿರುದ್ಧ ವಿಜಯ ಸಾದಿಸಬಹುದೆಂದು ಹೀಗೆ ಮಾಡುತ್ತಾನೆ

ಅಭಿಮನ್ಯು ಹೀಗೆ ತನ್ನ ಯೋಜನೆಯ ಪ್ರಕಾರವೇ ಒಳಗೆ ಪ್ರವೇಶಿಸಿದ ….ಆದರೆ,ಆತನಿಗೆ ರಕ್ಷಣೆಯಾಗಿ ಬರುತ್ತಾರೆಂದುಕೊಂಡಿದ್ದ ಧರ್ಮರಾಜ,ಭೀಮ,ನಕುಲ,ಸಹದೇವರುಗಳು ಒಳಗೆ ಪ್ರವೇಶಿಸಲಾಗಲಿಲ್ಲ.ಇದಕ್ಕೆ ಕಾರಣ… ಪಾಂಡವರನ್ನು ಯಾವುದಾದರೂ ಒಂದು ದಿನ ತಡೆಹಿಡಿಯುವ ವರವನ್ನು ಪಡೆದಿದ್ದ ಸೈಂದವ ಇವರನ್ನು ಯುದ್ಧರಂಗದಲ್ಲಿ ತಡೆ ಹಿಡಿದ.
ಹೀಗೆ ಚಕ್ರವ್ಯೂಹದೊಳಗೆ ಪ್ರವೇಶಿಸಿದ ಅಭಿಮನ್ಯುವಿಗೆ ಪಾಂಡವರ ಸಹಾಯ ದೊರೆಯಲಿಲ್ಲ.ಆದರೂ ಸಹ ವೀರತ್ವದಿಂದ ಹೋರಾಡಿ, ಲಕ್ಷ್ಮಣ ಕುಮಾರನನ್ನು ಸಂಹರಿಸಿ, ಕೌರವರ ವ್ಯೂಹಕ್ಕೆ ಬಲಿಯಾದ.

ಅಭಿಮನ್ಯುವಿಗೆ ಚಕ್ರವ್ಯೂಹದ ಬಗ್ಗೆ ಹೇಗೆ ಗೊತ್ತಿತ್ತು :
ಒಮ್ಮೆ ಕೃಷ್ಣ ಸುಭದ್ರೆಯೋಡನೆ ಮಾತನಾಡುತ್ತಾ, ಯುದ್ಧ ವಿದ್ಯೆಯಲ್ಲಿ ಚಕ್ರವ್ಯೂಹ ಪ್ರವೇಶ ಅತ್ಯಂತ ಕ್ಲಿಷ್ಟಕರವಾದದ್ದು ಅದನ್ನು ಪ್ರವೇಶಿಸಿ,ಚಾಕಚಕ್ಯತೆಯಿಂದ ಹೋರಾಡುವುದನ್ನು ವಿವರಿಸಿ ಹೇಳುತ್ತಾನೆ. ಆಗ ತಾಯಿಯ ಗರ್ಭದಲ್ಲಿದ್ದ ಅಭಿಮನ್ಯು ಇದೆಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತನೆ.ಆದರೆ, ಚಕ್ರವ್ಯೂಹದಿಂದ ಹೊರಬರುವ ವಿಧಾನವನ್ನು ಕೃಷ್ಣ ಸುಭದ್ರೆಗೆ ಹೇಳುವಷ್ಟರಲ್ಲೇ ಸುಭದ್ರೆ ನಿದ್ರೆಗೆ ಜಾರುವುದರಿಂದ ಕೃಷ್ಣ ಅಲ್ಲಿಗೇ ಹೇಳುವುದನ್ನು ನಿಲ್ಲಿಸಿಬಿಡುತ್ತಾನೆ. ಯುದ್ಧದಲ್ಲಿ ಅಭಿಮನ್ಯು ಚಾಕಚಕ್ಯತೆಯಿಂದ ಚಕ್ರವ್ಯೂಹವನ್ನು ಬೇಧಿಸಿ ವೀರಾವೆಶದಿಂದ ಹೋರಾಡಿದನಾದರೂ ಹೊರ ಬರಲಾಗದೆ ವೀರ ಮರಣವನ್ನಪ್ಪಿದ.

Comments are closed.