ಜಬಲ್ಪುರ: ಬಾಲಿವುಡ್ ನಲ್ಲಿ ಕೆಲಸ ಮಾಡುತ್ತಿರುವ ಪಾಕಿಸ್ತಾನ ಕಲಾವಿದರ ಮೇಲೆ ಹೊಸದಾಗಿ ವಾಗ್ದಾಳಿ ನಡೆಸಿದ ವಿಎಚ್ ಪಿ ನಾಯಕಿ ಸಾದ್ವಿ ಪ್ರಾಚಿ, ಅವರು ಅವರ ದೇಶದಲ್ಲಿಯೇ ತಮ್ಮ ಪ್ರತಿಭೆಯನ್ನು ತೋರಿಸಬೇಕು. ಅಲ್ಲಿನ ಕಲಾವಿದರಿಗೆ ಮನ್ನಣೆ ತೋರುವ ಬಾಲಿವುಡ್ ನ ಕಲಾವಿದರಾದ ಸಲ್ಮಾನ್ ಖಾನ್, ಶಾರೂಕ್ ಖಾನ್, ಅಮೀರ್ ಖಾನ್ ಮೊದಲಾದವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿದ್ದಾರೆ.
ಪಾಕಿಸ್ತಾನ ಕಲಾದರಿಗೆ ಭಾರತದಲ್ಲಿ ನಿಷೇಧ ಹೇರಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ್ದ ಸಲ್ಮಾನ್ ಖಾನ್, ಅವರು ಕಲಾವಿದರೇ ಹೊರತು ಭಯೋತ್ಪಾದಕರಲ್ಲ ಎಂದು ಹೇಳಿದ್ದರು.
ನೆರೆ ರಾಷ್ಟ್ರಗಳೊಂದಿಗೆ ಶಾಂತಿ, ಸೌಹಾರ್ದತೆಯಿಂದ ಇರಬೇಕು ಎಂದು ಒಪ್ಪಿಕೊಂಡಿರುವ ಸಾದ್ವಿ ಪ್ರಾಚಿ, ರಾಕ್ಷಸ ಪ್ರವೃತ್ತಿಯ ನೆರೆ ರಾಷ್ಟ್ರಗಳಿಗೆ ಪಾಠ ಕಲಿಸಬೇಕಾದುದೂ ಕೂಡ ಮುಖ್ಯವಾಗಿದೆ ಎಂದಿದ್ದಾರೆ.
ಭಾರತ-ಪಾಕಿಸ್ತಾನ ಇಬ್ಭಾಗಕ್ಕೆ ಮತ್ತು ಕಾಶ್ಮೀರ ವಿವಾದಕ್ಕೆ ಮಹಾತ್ಮಾ ಗಾಂಧಿಯವರು ಕಾರಣ ಎಂದು ಹೇಳಿದ ಸಾದ್ವಿ, ತಮಗೆ ಮಹಾತ್ಮಾ ಗಾಂಧಿ ಯಾವತ್ತಿಗೂ ಆದರ್ಶವಲ್ಲ, ಅವರನ್ನು ಗುಂಡಿಕ್ಕಿ ಸಾಯಿಸಿದ ನಾಥೂರಾಮ್ ಗೋಡ್ಸೆಯವರಿಗೆ ನಾನು ವಂದಿಸುತ್ತೇನೆ, ಅವರನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
Comments are closed.