
ಬೆಂಗಳೂರು: ನಗರದ 16 ಠಾಣಾ ವ್ಯಾಪ್ತಿಯಲ್ಲಿ ಜಾರಿಯಲ್ಲಿದ್ದ ಕರ್ಫ್ಯೂ ಹಿಂಪಡೆಯಲಾಗಿದ್ದು, ಜನಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ.
ಸೆಪ್ಟೆಂಬರ್ 20ರವರೆಗೂ ನಿತ್ಯ 12 ಸಾವಿರ ಕ್ಯೂಸೆಕ್ ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಹಾಗೂ ರಾಮೇಶ್ವರಂನಲ್ಲಿ ಕನ್ನಡಿಗರ ಮೇಲೆ ನಡೆದ ಹಲ್ಲೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ಕಾವೇರಿ, ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕಾಗಿ ಕರ್ಫ್ಯೂ ಹೇರಲಾಗಿತ್ತು. ಬುಧವಾರ ಕರ್ಫ್ಯೂ, ನಿಷೇಧಾಜ್ಞೆಯನ್ನು ಹಿಂಪಡೆಯಲಾಗಿದೆ.
ಜನ ಜೀವನ ಸಹಜ ಸ್ಥಿತಿಗೆ ಮರಳಿದ್ದು, ಸರ್ಕಾರಿ ಬಸ್ಗಳು ಹಾಗೂ ಮೆಟ್ರೋ ಸಂಚಾರ ಸಾಮಾನ್ಯವಾಗಿದೆ. ಖಾಸಗಿ ವಾಹನಗಳ ಸಂಚಾರ ವಿರಳವಿದ್ದು, ಜನಸಂದಣಿ ಎಂದಿಗಿಂತ ಕಡಿಮೆ ಇದೆ. ಅಂಗಡಿ, ಮಾಲ್, ಕಚೇರಿಗಳು, ಹೋಟೆಲ್ಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. ನಗರದ ಕೆಲವು ಖಾಸಗಿ ಶಾಲೆಗಳು ಎಚ್ಚರಿಕಾ ಕ್ರಮವಾಗಿ ಬುಧವಾರ ರಜೆ ಘೋಷಿಸಿವೆ.
ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಪೀಣ್ಯ, ಆರ್ಎಂಸಿ ಯಾರ್ಡ್, ರಾಜಗೋಪಾಲನಗರ, ರಾಜಾಜಿನಗರ, ನಂದಿನಿ ಲೇಔಟ್, ರಾಜರಾಜೇಶ್ವರಿ ನಗರ, ಬ್ಯಾಟರಾಯನಪುರ, ಮಾಗಡಿ ರಸ್ತೆ, ವಿಜಯನಗರ, ಕೆಂಗೇರಿ, ಕೆ.ಪಿ ಅಗ್ರಹಾರ, ಚಂದ್ರಾ ಲೇಔಟ್, ಜ್ಞಾನಭಾರತಿ ಮತ್ತು ಕಾಮಾಕ್ಷಿ ಪಾಳ್ಯದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು.
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಬಂದೋಬಸ್ತ್ ಮುಂದುವರಿಸಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತರಾದ ಎನ್.ಎಸ್.ಮೆಘರಿಕ್ ಟ್ವೀಟಿಸಿದ್ದಾರೆ.
ಕರ್ಫ್ಯೂ ನಿಷೇದಾಜ್ಞೆಯನ್ನು ಹಿಂಪಡೆಯಲಾಗಿದೆ, ಜನಜೀವನ ಸಾಮಾನ್ಯವಾಗಿದೆ!
Curfew is lifted. Life is normal !
— BengaluruCityPolice (@BlrCityPolice) September 14, 2016
ಅಹಿತಕರ ಘಟನೆಗಳು ನಡೆಯದಂತೆ ನಗರದಾದ್ಯಂತ ಬಿಗಿ ಬಂದೋಬಸ್ತ್ ಮುಂದುವರೆಸಲಾಗಿದೆ!!
Strong bandobust continues to prevent any mischief !!
— N S Megharikh IPS (@CPBlr) September 14, 2016
Comments are closed.