ಮಂಗಳೂರು ನ.21: . ನಗರದ ಪಿಲಿಕುಳ ನಿಸರ್ಗ ಧಾಮದಲ್ಲಿ ನೂತನವಾಗಿ ನಿರ್ಮಿಸಿದ ಅತ್ಯಾಧುನಿಕ ಸೌಲಭ್ಯವನ್ನು ಒಳಗೊಂಡ ಶೌಚಗೃಹವನ್ನು ಜಿಲ್ಲಾಧಿಕಾರಿಯಾದ ಶ್ರೀ ಎ ಬಿ ಇಬ್ರಾಹಿಂ ಅವರು ವಿಶ್ವ ಶೌಚಾಲಯ ದಿನಾಚರಣೆಯ ಅಂಗವಾಗಿ ಶನಿವಾರ ಸಾಂಕೇತಿಕವಾಗಿ ಉದ್ಘಾಟಿಸಿ ಸಂದರ್ಶಕರ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಚಾಲನೆ ನೀಡಿದರು.
ಈ ಶೌಚಾಲಯವನ್ನು ಮಂಗಳೂರು ರೌಂಡ್ ಟೇಬಲ್ 115ಮತ್ತು ಮಂಗಳೂರು ಲೇಡೀಸ್ ಸರ್ಕಲ್ 82 ಸಂಸ್ಥೆಯವರು ತಮ್ಮ ಸಮಾಜ ಸೇವಾ ಚಟುವಟಿಕೆಗಳ ಅಂಗವಾಗಿ ರೂ 5 ಲಕ್ಷ ವೆಚ್ಚದಲ್ಲಿ ಕಟ್ಟಿಸಿ ನಿಸರ್ಗ ಧಾಮದ ಆಡಳಿತ ಮಂಡಳಿಗೆ ವರ್ಗಾಯಿಸಿದರು.
ಜಿಲ್ಲಾಧಿಕಾರಿಯವರು ಈ ಯೋಜನೆಯನ್ನು ರಾಷ್ಟ್ರೀಯ ಸ್ವಚ್ಛ ಭಾರತ ಅಭಯಾನದ ಅಂಗವಾಗಿ ನಿರ್ಮಿಸಲಾಗಿದ್ದು, ದಾನಿ ಸಂಸ್ಥೆಯ ನಿಸ್ವಾರ್ಥ ಸಮಾಜ ಸೇವೆ ಮತ್ತು ಸಮಾಜದಲ್ಲಿ ಬೇರೂರಿರುವ ಮೂಲ ಸೌಕರ್ಯಗಳ ಕೊರತೆ ಹಾಗೂ ಸಮಾಜದ ಸಮಸ್ಯೆಗಳ ಕಾಳಜಿ ಬಗ್ಗೆ ಪ್ರಶಂಸಿಸಿ ಸಂಸ್ಥೆಯ ಸದಸ್ಯರನ್ನು ಹಾಗೂ ಅವರ ಕೊಡುಗೆಯನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ಲೇಡೀಸ್ ಸರ್ಕಲ್ 82 ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ನಂದಿತಾ ಫೆರ್ನಾಂಡಿಸ್, ಮಂಗಳೂರು ರೌಂಡ್ ಟೇಬಲ್ 115 ಸಂಸ್ಥೆಯ ಕಾರ್ಯದರ್ಶಿ ಹಾರನ್ ಫೆರ್ನಾಂಡೆಸ್, ಮಾಜಿ ಅಧ್ಯಕ್ಷರಾದ ನವೀನ್ ಕಾರ್ಢೋಜ, ದೀಕ್ ರಮಣಿ, ಸಂದೀಪ್ ಢಿ ಸಿಲ್ವ, ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಮೋದ್ ಪಿಂಟೋ, ರಾಯ್ಸ್ಟರ್ ಡಿಸೋಜ ಮತ್ತು ವಾದಿರಾಜ ಶೆಣೈಯವರು ಉಪಸ್ಥಿತರಿದ್ದರು.
ಈ ಕಟ್ಟಡದಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕ ಸೌಲಭ್ಯ, ವಿಕಲಚೇತನರಿಗೆ ವಿಶೇಷ ಸೌಲಭ್ಯ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಗಳನ್ನು ಒಳಗೊಂಡಿದೆ.
ಇದೇ ದಿನ ರೌಂಡ್ ಟೇಬಲ್ ಸಂಸ್ಥೆಯವರು 24 ಘಂಟೆಗಳಲ್ಲಿ ವಿವಿಧ ಶಾಲಾ ಮತ್ತು ಆಶ್ರಮಗಳಿಗೆ ರೂ 11.40 ಮೌಲ್ಯದ 24 ಸಮಾಜ ಸೇವಾ ಚಟುವಟಿಕೆಗಳನ್ನು ನೆರವೇರಿಸಿ ವಿಶೇಷ ದಾಖಲೆಯನ್ನು ನಿರ್ಮಿಸಿದರು.




