ಇಸಿಸ್ ಉಗ್ರ ಸಂಘಟನೆ ಸೇರಲು ಹೊರಟಿದ್ದ ಪತ್ರಕರ್ತ ಮಹಾಶಯನೊಬ್ಬ ದೆಹಲಿ ಪೊಲೀಸರ ಅತಿಥಿಯಾದ ಘಟನೆ ನಡೆದಿದೆ.
ಮುಂಬೈ ಮೂಲದ ಜುಬೇರ್ ಅಹ್ಮದ್ ಖಾನ್ ಎಂಬ ೫೦ ವರ್ಷದ ವ್ಯಕ್ತಿಯೊಬ್ಬ ತನ್ನ ಫೇಸ್ಬುಕ್ನಲ್ಲಿ ತಾನು ಭಾರತೀಯ ಪೌರತ್ವವನ್ನು ಬಿಟ್ಟು ಇಸಿಸ್ ಉಗ್ರರ ಅಧಿಕೃತ ವಕ್ತಾರನಾಗಲು ಬಯಸಿರುವುದಾಗಿ ಸ್ಟೇಟಸ್ ಹಾಕಿಕೊಂಡಿದ್ದ. ಅಷ್ಟೇ ಅಲ್ಲ, ಇದೇ ಕಾರಣಕ್ಕೆ ಇರಾಕ್ ರಾಯಭಾರ ಕಚೇರಿಂದ ಉದ್ಯೋಗ ವೀಸಾ ಪಡೆಯುವ ಸಲುವಾಗಿ ಶುಕ್ರವಾರ ಇರಾಕ್ ರಾಯಭಾರ ಕಚೇರಿಗೆ ಆಗಮಿಸಿದ್ದ. ಈ ಸಮಯದಲ್ಲಿ ಆತನ ವರ್ತನೆಯಿಂದ ಅನುಮಾನಗೊಂಡ ರಾಯಭಾರ ಕಚೇರಿ ಸಿಬ್ಬಂದಿ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದ್ದು ತಕ್ಷಣ ಆಗಮಿಸಿದ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂದು ವಿಚಾರಣೆ ನಡೆಸುತ್ತಿದ್ದಾರೆ.
ಪೊಲೀಸರ ವಿಚಾರಣೆಯ ಸಮಯದಲ್ಲಿ ತಾನು ಪತ್ರಕರ್ತನೆಂದು ಹೇಳಿಕೊಂಡಿದ್ದ ಈತನ ಫೇಸ್ಬುಕ್ ನಲ್ಲಿ ಮುಂಬೈನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದು, 2007ರಲ್ಲಿ ವಜಾಗೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಅಲ್ಲದೇ ವಕ್ತಾರನಾಗಿ ಬಯಸಿ ಈತ ಇಸಿಸ್ ಉಗ್ರರ ನಾಯಕ ಅಬು ಬಾಕರ್ ಅಲ್ ಬಗ್ದಾದಿಗೆ ಕಳುಹಿಸಿದ್ದ ಫೇಸ್ಬುಕ್ ಸಂದೇಶ ಮತ್ತು 1993ರ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣದಲ್ಲಿ ಇತ್ತೀಚೆಗೆ ಗಲ್ಲು ಶಿಕ್ಷೆಗೆ ಒಳಗಾದ ಯಾಕುಬ್ ಮೆಮನ್ ಹುತ್ಮಾತನಾಗಿದ್ದಾಗಿ ಈತ ಬರೆದುಕೊಂಡಿದ್ದ ವಿವರಗಳು ಪತ್ತೆಯಾಗಿದ್ದು ತನಿಖೆ ಮುಂದುವರೆದಿದೆ.