ಕುಂದಾಪುರ: ಬೈಂದೂರಿನಿಂದ ಕುಂದಾಪುರ ಕಡೆಗೆ ಸಾಗುತಿದ್ದ ಲಾರಿಯೊಂದು ಅದೇ ಮಾರ್ಗವಾಗಿ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದು ಎದುರಿನಿಂದ ಬರುತ್ತಿದ್ದ 407 ಗೂಡ್ಸ್ ಟೆಂಪೋ ವಾಹನಕ್ಕೆ ಡಿಕ್ಕಿ ಹೊಡೆದ ಸರಣಿ ಅಪಘಾತದಲ್ಲಿ 407 ಟೆಂಪೋ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನದ ಸುಮಾರಿಗೆ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿ ಸಮೀಪ ನಡೆದಿದೆ.
ತಲ್ಲೂರು ಸಬ್ಲಾಡಿ ನಿವಾಸಿಯಾದ ನರಸಿಂಹ ಮೊಗವೀರ (39) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದವರು.
ಘಟನೆ ವಿವರ: ಬೈಂದೂರಿನಿಂದ ಕುಂದಾಪುರ ಕಡೆಗೆ ತೆರಳುತ್ತಿದ್ದ ಸರಕು ತುಂಬಿದ ಲಾರಿ ಹಾಗೂ ವ್ಯಾಗನಾರ್ ಕಾರು ಮುಳ್ಳಿಕಟ್ಟೆ ಸಮೀಪ ಬರುತ್ತಿದ್ದ ವೇಳೆ ಲಾರಿ ಚಾಲಕ ಓವರ್ಟೇಕ್ ಮಾಡುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆದು ಬಳಿಕ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಸಾಗುತ್ತಿದ್ದ 407 ಟೆಂಫೋಗೆ ರಭಸವಾಗಿ ಡಿಕ್ಕಿಹೊಡೆದಿದ್ದಾನೆ, ಇದೇ ಸಂದರ್ಭ ಡಿಕ್ಕಿಯ ರಭಸಕ್ಕೆ ಕಾರು ಪಲ್ಟಿಯಾಗಿದ್ದು ಟೆಂಫೋ ವಾಹನದ ಎದುರು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಅಲ್ಲದೇ ಟೆಂಪೋ ಚಾಲಕ ನರಸಿಂಹ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಶೀಘ್ರ ಕುಂದಾಪುರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಕಾರಿನಲ್ಲಿದ್ದ ಪ್ರಯಾಣಿಕರು ಅದೃಷ್ಟವಶಾತ್ ಪಾರಾಗಿದ್ದಾರೆ.
ರಸ್ತೆ ಸಂಚಾರ ಅಸ್ಥವ್ಯಸ್ಥ: ಮುಳ್ಳಿಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಕಾರು, ಲಾರಿ ಮತ್ತು ಟೆಂಫೋ ಸರಣಿ ಅಪಘಾತದ ಪರಿಣಾಮ ಕಾರು ರಸ್ತೆಯಲ್ಲಿಯೇ ಪಲ್ಟಿಯಾಗಿದ್ದು ಇದರಿಂದ ಒಂದೂವರೆ ತಾಸುಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಳಿಕ ಕ್ರೈನ್ ತರಿಸಿ ಕಾರನ್ನು ಹಾಗೂ ನಜ್ಜುಗುಜ್ಜಾದ ಟೆಂಪೋ ವಾಹನವನ್ನು ತೆರವುಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿತ್ತು.
ಸ್ಥಳಕ್ಕೆ ಗಂಗೊಳ್ಳಿ ಎಸ್ಸೈ ಸುಬ್ಬಣ್ಣ, ಕುಂದಾಪುರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










