ಕುಂದಾಪುರ: ಕುಂದಾಪುರದ ಎಲ್ಲೆಡೆ ಶಿವರಾತ್ರಿ ಸಂಭ್ರಮ. ಅಮವಾಸ್ಯೆಯ ಒಂದು ದಿನ ಮುಂಚಿತವಾಘಿ ಆಗಮಿಸಿದ ಶಿವರಾತ್ರಿ ಉತ್ಸವಕ್ಕೆ ಕುಂದಾಪುರದ ಈಶ್ವರ ದೇವಸ್ಥಾನಗಳಲ್ಲು ಹಾಗೂ ಭಜನಾ ಮಂದಿರಗಳಲ್ಲಿ ಶಿವರಾತ್ರಿ ಆಚರಣೆಗೆ ವಾರದ ಹಿಂದೆಯೇ ಸಕಲ ಸಿದ್ಧತೆಗಳನ್ನು ಮಾಶಡಿಕೊಳ್ಳಲಾಗಿತ್ತು. ಏಕಾಹ ಭಜನೆ, ಜಾಗರಣೆ, ಶಿವಸ್ತೋತ್ರ, ಪಾರಾಯಣ ಹೀಗೇ ವಿವಿಧ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೆ ಭಜನಾ ಸ್ಫರ್ಧೆಗಳೂ ನಡೆದವು.
ಶ್ರೀ ಕುಂದೇಶ್ವರ : ನಗರದ ಪ್ರಮುಖ ದೇವಸ್ಥಾನವಾದ ಕುಂದೇಶ್ವರ ದೇವಸ್ಥಾನದಲ್ಲಿ ಭಕ್ತರು ಮಂಗಳವಾರ ಕಿಕ್ಕಿರಿದು ತುಂಬಿದ್ದರು. ಶಿವನ ದರ್ಶನ ಮಡೆದ ಭಕ್ತರು ಮಹಾಶಿವರಾತ್ರಿಯ ಪುಣ್ಯವನ್ನು ಆಸ್ವಾದಿಸಿದರು. ಬೆಳಗ್ಗಿನಿಂದಲೇ ಶಿವನಾಮ ಸ್ಮರಣೆ ಕುಂದೇಶ್ವರನಿಗೆ ಸಮರ್ಪಿತವಾಯಿತು.
ಶ್ರೀ ಕೋಟಿಲಿಂಗೇಶ್ವರ : ಕೋಟೇಶ್ವರದ ಇತಿಹಾಸ ಪ್ರಸಿದ್ದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿಯೂ ಮಹಾ ಶಿವರಾತ್ರಿ ಆಚರಣೆ ವಿಜೃಂಭಣೆಯಿಂದ ನಡೆಯಿತು. ಏಕಾಹ ಭಜನೆ, ಮಹಾ ಮಂಗಳಾರತಿ, ಶಿವನ ಸ್ತೋತ್ರಗಳು ದೇವಳದಲ್ಲಿ ಮೇಳೈಸಿದವು. ಸಾವಿರಾಋಉ ಭಕ್ತರು ಕೋಟಿಲಿಂಗೇಶ್ವರನ ಸನ್ನಿಧಿಯಲ್ಲಿ ವಂದಿಸಿ ಶಿವರಾತ್ರಿ ಆಚರಣೆಯಲ್ಲಿ ಪಾಲ್ಗೊಂಡರು.
ಶ್ರೀ ಮಹಾಲಿಂಗೇಶ್ವರ : ತಾಲೂಕಿನ ಪ್ರಮುಖ ಮಹಾಲಿಂಗೇಶ್ವರ ದಏವಸ್ಥಾನಗಳಾದ ತೆಕ್ಕಟ್ಟೆ, ತಲ್ಲೂರು, ಉಳ್ತೂರು, ಬಸ್ರೂರು ಮೊದಲಾದೆಡೆಗಳಲ್ಲಿ ಮಹಾಶಿವರಾತ್ರಿ ಆಚರಣೆ ನಡೆಯಿತು. ದೇವಸ್ಥಾನಗಳ ಆಡಳಿತ ವ್ಯವಸ್ಥಾಪಕರು ಹಾಗೂ ಅರ್ಚಕರು ಭಕ್ತರಿಗೆ ದೇವರ ದರ್ಶನ, ಮಹಾಮಂಗಳಾರತಿ ನಡೆಸುವ ಮೂಲಕ ದೇವರ ದರ್ಶನಕ್ಕೆ ಅನುವು ಮಾಡಿಕೊಟ್ಟರು.
ಶ್ರೀ ಹರಿಹರೇಶ್ವರ : ಕುಂಭಾಶಿಯ ಹರಿಹರೇಶ್ವರ ದೇವಸ್ಥಾನದಲ್ಲಿಯೂ ಮಹಾಶಿವರಾತ್ರಿ ಆಚರಣೆ ನಡೆಯಿತು. ನಾಡಿನೆಲ್ಲೆಡೆಯಿಂದ ಆಗಮಿಸಿದ ಭಕ್ತರು ಹರಿಹರೇಶ್ವರನ ದರ್ಶನ ಭಾಗ್ಯ ಪಡೆದು ಪುನೀತರಾದರು. ಒಟ್ಟಾರೆಯಾಗಿ ತಾಲೂಕಿನ ಎಲ್ಲೆಡೆ ಇರುವ ಶಿವನ ದೇವಸ್ಥಾನಗಳಲ್ಲಿ ಮಂಗಳವಾರ ಸಾಗರದೋಪಾದಿಯಲ್ಲಿ ಆಗಮಿಸಿದ ಭಕ್ತರ ಸಂಖ್ಯೆಯಿಂದಾಗಿ ದೇವಸ್ಥಾನದಲ್ಲಿ ಶಿವ ಸಾನಿಧ್ಯಕ್ಕೆ ಹೊಸ ಕಳೆ ಬಂದಿತ್ತು.