ಬೆಂಗಳೂರು: ನಗರದಲ್ಲಿ ಭಾನುವಾರ (ಫೆ.8) ‘ವಿರಾಟ್ ಹಿಂದೂ ಸಮಾಜೋತ್ಸವ’ ನಡೆಯಲಿರುವ ಸ್ಥಳದಲ್ಲಿ ವಿಡಿಯೊ ಕಾನ್ಫರೆನ್ಸ್ ಸೇರಿದಂತೆ ಬೇರೆ ಯಾವುದೇ ರೀತಿಯಲ್ಲೂ ವಿಶ್ವ ಹಿಂದೂ ಪರಿಷತ್ನ (ವಿಎಚ್ಪಿ) ಅಂತರರಾಷ್ಟ್ರೀಯ ಕಾರ್ಯಾ-ಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರ ಭಾಷಣ ಪ್ರಸಾರ ಮಾಡದಂತೆ ಪೊಲೀಸರು ನಿಷೇಧ ಹೇರಿದ್ದಾರೆ.
ಬಸವನಗುಡಿಯಲ್ಲಿ ನಡೆಯಲಿರುವ ಹಿಂದೂ ಸಮಾಜೋತ್ಸವದಲ್ಲಿ ತೊಗಾಡಿಯಾ ಪ್ರಚೋದನಾಕಾರಿ ಭಾಷಣ ಮಾಡಬಹುದೆಂಬ ಕಾರಣಕ್ಕೆ ಅವರಿಗೆ ಫೆ.5ರಿಂದ 11ರವರೆಗೆ ನಗರ ಪ್ರವೇಶಿಸದಂತೆ ಪೊಲೀಸರು ಹಿಂದೆ ನಿರ್ಬಂಧ ವಿಧಿಸಿದ್ದರು.
‘ಸಮಾಜೋತ್ಸವದ ಆಯೋಜಕರು ಕಾರ್ಯಕ್ರಮದ ಸ್ಥಳದಲ್ಲಿ ಬೃಹತ್ ಪರದೆ ಹಾಗೂ ಧ್ವನಿವರ್ಧಕಗಳನ್ನು ಅಳವಡಿಸಿ ವಿಡಿಯೊ ಕಾನ್ಫರೆನ್ಸ್ ಮೂಲಕ ತೊಗಾಡಿಯಾ ಅವರ ಭಾಷಣ ಪ್ರಸಾರಕ್ಕೆ ಮುಂದಾಗಿದ್ದರು. ಈ ಬಗ್ಗೆ ಗುಪ್ತಚರ ವಿಭಾಗದ ಡಿಸಿಪಿ ವರದಿ ನೀಡಿದ್ದಾರೆ’ ಎಂದು ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ತಿಳಿಸಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ಅಥವಾ ಬೇರೆ ಯಾವುದೇ ವಿಧಾನದ ಮೂಲಕ ಪ್ರಚೋದನಾಕಾರಿ ಭಾಷಣ ಪ್ರಸಾರ ಮಾಡುವುದು ಕಾನೂನು ಉಲ್ಲಂಘನೆಯಾಗುತ್ತದೆ. ಅಲ್ಲದೇ, ಧಾರ್ಮಿಕ ಭಾವನೆ ಮತ್ತು ಶಾಂತಿ ಸುವ್ಯವಸ್ಥೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿ ಭಾನುವಾರ ಬೆಳಿಗ್ಗೆಯಿಂದ ಸೋಮವಾರ ಸಂಜೆ 6 ಗಂಟೆವರೆಗೆ ತೊಗಾಡಿಯಾ ಅವರ ಭಾಷಣ ಪ್ರಸಾರ ಮಾಡದಂತೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಶಿಸ್ತು ಕ್ರಮ: ತೊಗಾಡಿಯಾ ಅವರು ಆದೇಶ ಉಲ್ಲಂಘಿಸಿ ಕಳ್ಳದಾರಿಯಿಂದ ನಗರ ಪ್ರವೇಶಿಸಿದರೆ ಅಥವಾ ಆಯೋಜಕರು ಅವರ ಭಾಷಣ ಪ್ರಸಾರ ಮಾಡಿದರೆ ಕ್ರಮ ಜರುಗಿಸಲಾಗುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಎಂ.ಎನ್.ರೆಡ್ಡಿ ಹೇಳಿದ್ದಾರೆ.
ಬಿಗಿ ಭದ್ರತೆ: ಮೈದಾನ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸುಮಾರು 6 ಸಾವಿರ ಪೊಲೀಸ್ ಸಿಬ್ಬಂದಿ, ಒಂದು ಸಾವಿರ ಗೃಹರಕ್ಷಕರು, ಗಡಿ ಭದ್ರತಾ ಪಡೆಯ ಎರಡು ಕಂಪೆನಿ ಹಾಗೂ ಅಕ್ಕಪಕ್ಕದ ಜಿಲ್ಲೆಗಳ 25 ಅಧಿಕಾರಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಕಮಿಷನರ್ ಅಲೋಕ್ಕುಮಾರ್ ತಿಳಿಸಿದ್ದಾರೆ.
***
ತೊಗಾಡಿಯಾ ಭಾಷಣಕ್ಕೆ ನಿಷೇಧ ಹೇರಿರುವಾಗ ವಿಡಿಯೊ ಕಾನ್ಫರೆನ್ಸ್ ನಡೆಸುವುದು ಕಾನೂನು ಉಲ್ಲಂಘನೆಯಾಗುತ್ತದೆ. ವಿಡಿಯೊ ಕಾನ್ಫರೆನ್ಸ್ ನಡೆಸಿದರೆ ಪೊಲೀಸರು ಕಾನೂನು ಕ್ರಮ ಜರುಗಿಸಲಿದ್ದಾರೆ.
– ಸಿದ್ದರಾಮಯ್ಯ, ಮುಖ್ಯಮಂತ್ರಿ
ಸಂದೇಶ ಖಚಿತ
ವಿರಾಟ ಹಿಂದೂ ಸಮಾಜೋತ್ಸವದಲ್ಲಿ ಭಾಗವಹಿಸುವ ಕಾರ್ಯಕರ್ತರಿಗೆ ಪ್ರವೀಣ್ ತೊಗಾಡಿಯಾ ಅವರ ಸಂದೇಶ ದೊರೆಯಲಿದೆ. ಅದು ಯಾವ ಮಾಧ್ಯಮದ ಮೂಲಕ ಎನ್ನುವುದು ಕಾದು ನೋಡಿ.
– ಟಿ.ಎ.ಪಿ. ಶೆಣೈ, ವಿಎಚ್ಪಿ, ದಕ್ಷಿಣ ಪ್ರಾಂತ ಕಾರ್ಯದರ್ಶಿ
