ಕರ್ನಾಟಕ

ಕನ್ನಡ ಕಡ್ಡಾಯಕ್ಕಾಗಿ ಕಾಯ್ದೆ ತಿದ್ದುಪಡಿ: ರಾಜ್ಯ ಸಚಿವ ಸಂಪುಟದ ಮಹತ್ವದ ನಿರ್ಧಾರ

Pinterest LinkedIn Tumblr

Jayachandra

ಬೆಂಗಳೂರು: ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ನೀಡುವುದನ್ನು ಕಡ್ಡಾ­ಯ­ಗೊಳಿಸುವುದಕ್ಕೆ ಪೂರಕವಾಗಿ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ– 2009ಕ್ಕೆ ತಿದ್ದು­ಪಡಿ ತರಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸ­ಲಾಗಿದೆ.

ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಭಾಷಾ ಮಾಧ್ಯಮ ಕಡ್ಡಾಯ­ಗೊಳಿ­ಸುವ ಆದೇಶವನ್ನು ರದ್ದು ಮಾಡಿರುವ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಿ­­ರುವ ಪರಿಹಾರಾತ್ಮಕ ಅರ್ಜಿ ಮತ್ತು ಈ ಸಂಬಂಧ ಸುಪ್ರೀಂ­ಕೋರ್ಟ್‌­ನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೂಡಿ­ರುವ ನ್ಯಾಯಾಂಗ ನಿಂದನೆ ಮೊಕದ್ದಮೆ­ಗಳನ್ನು ಎದುರಿಸುವುದಕ್ಕಾಗಿ ಈ ತಿದ್ದು­ಪಡಿ ತರಲು ನಿರ್ಧರಿಸಲಾಗಿದೆ. ತಮಿಳು­ನಾಡು ಸರ್ಕಾರವು ಸ್ಥಳೀಯ ಭಾಷೆ­ಯಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯ­ಗೊಳಿ­ಸಿರುವ ಮಾದರಿ ಆಧರಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಸಂಪುಟ ಸಭೆಯ ಬಳಿಕ ಪತ್ರಿಕಾ­ಗೋಷ್ಠಿ­ಯಲ್ಲಿ ವಿವರ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ, ‘ಕೇಂದ್ರ ಸರ್ಕಾರ ರೂಪಿಸಿರುವ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ– 2009ರ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರವು 2009ರಲ್ಲಿ ರೂಪಿಸಿ­ರುವ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಒಂದರಿಂದ ಐದನೆ ತರಗತಿವರೆಗೆ ಎಲ್ಲ ಮಕ್ಕಳಿಗೂ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡು­ವುದನ್ನು ಕಡ್ಡಾಯ­ಗೊಳಿಸ­ಲಾಗುವುದು. ಇದಕ್ಕಾಗಿ ಕಾಯ್ದೆಗೆ ಕೆಲವು ಹೊಸ ಅಂಶಗಳನ್ನು ಸೇರಿಸಲಾಗುವುದು’ ಎಂದು ವಿವರ ನೀಡಿದರು.

ಪರಿಹಾರಾತ್ಮಕ ಅರ್ಜಿಗೆ ಸಂಬಂಧಿ­ಸಿದಂತೆ ರಾಜ್ಯದ ನಿಲುವನ್ನು ಸುಪ್ರೀಂ­ಕೋರ್ಟ್‌ಗೆ ತಿಳಿಸಬೇಕಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಭಾಷಾ

ಮಾಧ್ಯಮಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನ ಪಾಲನೆ ಸಂಬಂಧ ಖಾಸಗಿ ಶಿಕ್ಷಣ ಸಂಸ್ಥೆಗಳು ಹೂಡಿರುವ ನ್ಯಾಯಾಂಗ ನಿಂದನೆ ಮೊಕದ್ದಮೆ ವಿಚಾರದಲ್ಲೂ ಕಾನೂನು ಬಲ ಅಗತ್ಯ. ಈ ಎರಡೂ ಉದ್ದೇಶದಿಂದ ನಿಯಮ­ಗಳಿಗೆ ತಿದ್ದುಪಡಿ ತರುವ ನಿರ್ಧಾರವನ್ನು ಸಂಪುಟ ಕೈಗೊಂಡಿದೆ ಎಂದರು.

ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯ್ದೆ– 2012ರ ಸೆಕ್ಷನ್‌ 19 (9) ಹಾಗೂ 29 (2)ಕ್ಕೆ ತಿದ್ದುಪಡಿ ಮಾಡಲಾಗುವುದು. ಸೆಕ್ಷನ್‌ 29(2)(ಎಫ್‌)ನಲ್ಲಿ ‘ಮಗು­ವಿನ ಶಿಕ್ಷಣ ಮಾಧ್ಯಮವು ಮಾತೃ ಭಾಷೆ­ಯ­ಲ್ಲಿರಬೇಕು’ ಎಂಬ ಪದಗಳಿಗೆ ಬದಲಾಗಿ ‘ಕನ್ನಡ ಭಾಷೆಯಲ್ಲಿ ಇರ­ಬೇಕು’ ಎಂಬ ಪದಗಳನ್ನು ಸೇರಿಸ­ಲಾಗು­ವುದು. ಫೆಬ್ರುವರಿ 2ರಿಂದ ಆರಂಭ­ವಾಗುವ ವಿಧಾನಮಂಡಲ ಅಧಿವೇಶನ­ದಲ್ಲಿ ಈ ಸಂಬಂಧ ಮಸೂದೆ ಮಂಡಿಸಿ, ಒಪ್ಪಿಗೆ ಪಡೆಯಲಾಗುವುದು ಎಂದು ಹೇಳಿದರು.

ಮಕ್ಕಳ ಮಾತೃಭಾಷಾ ಮಾಧ್ಯಮ­ದಲ್ಲೇ ಪ್ರಾಥಮಿಕ ಶಿಕ್ಷಣ ನೀಡು­ವುದನ್ನು ಕಡ್ಡಾಯ­ಗೊಳಿಸು­ವುದಕ್ಕೆ ಪೂರಕ­ವಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಮುಖ್ಯಮಂತ್ರಿ ಸಿದ್ದ­ರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಒತ್ತಾಯಿ­ಸಿದ್ದಾರೆ. ಇದೇ ರೀತಿಯ ಒತ್ತಡ ತರುವಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಅವರು ಪತ್ರ ಬರೆದಿದ್ದಾರೆ. ಈಗ ಉದ್ಭವಿಸಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳು­ವುದಕ್ಕೆ ಪೂರಕವಾಗಿ ಶಿಕ್ಷಣ ಹಕ್ಕು ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದರು.

ಶಿಕ್ಷಕರ ತರಬೇತಿ ಯೋಜನೆ: ಕೇಂದ್ರ ಸರ್ಕಾ­ರದ ಪುರಸ್ಕೃತ ಶಿಕ್ಷಕರ ಶಿಕ್ಷಣ ಯೋಜನೆ ಜಾರಿಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ₨ 115.61 ಕೋಟಿ ಮತ್ತು ರಾಜ್ಯ ಸರ್ಕಾರ ₨ 38.53 ಕೋಟಿ ಅನುದಾನ ಒದಗಿಸಲಿವೆ.

ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆ­ಗ­ಳನ್ನು ಮೇಲ್ದರ್ಜೆಗೇರಿಸುವುದು, ಕೆಎಲ್‌ಇ ಶಿಕ್ಷಣ ಮಹಾವಿದ್ಯಾಲಯಗಳ ಉನ್ನತೀಕ­ರಣ, ಕಲಬುರ್ಗಿ ವಿಶ್ವವಿದ್ಯಾಲ­ಯದ ಶಿಕ್ಷಣ ವಿಭಾಗವನ್ನು ಶೈಕ್ಷಣಿಕ ಉನ್ನತ ಅಧ್ಯಯನ ಕೇಂದ್ರಗಳನ್ನಾಗಿ ಪರಿ­­ವರ್ತಿ­ಸುವ ಕಾರ್ಯಕ್ರಮಗಳು ಯೋಜ­­ನೆ­­­ಯಲ್ಲಿ ಸೇರಿವೆ. ಶಿಕ್ಷಕರಿಗೆ ತರ­ಬೇತಿ ನೀಡುವುದು ಯೋಜನೆಯ ಮೂಲ ಉದ್ದೇಶ ಎಂದು ಸಚಿವರು ತಿಳಿಸಿದರು.

2014–15ನೇ ಶೈಕ್ಷಣಿಕ ವರ್ಷ­ದಲ್ಲಿ ರಾಜ್ಯದ ಎಲ್ಲ ಶಾಲೆಗಳ ಒಂದ­ರಿಂದ ಎಂಟನೆ ತರಗತಿವರೆಗಿನ ಮಕ್ಕಳಿಗೆ ಸರ್ವ ಶಿಕ್ಷಣ ಅಭಿಯಾನ ಯೋಜನೆ­ಯಡಿ ಎರಡನೆ ಜೊತೆ ಸಮವಸ್ತ್ರ ವಿತರಿ­ಸುವ ಪ್ರಸ್ತಾವಕ್ಕೂ ಒಪ್ಪಿಗೆ ದೊರೆ­ತಿದೆ. ಇದಕ್ಕಾಗಿ ಸರ್ವ ಶಿಕ್ಷಣ ಅಭಿ­ಯಾನ­ದಿಂದ ₨ 16.35 ಕೋಟಿ ಅನುದಾನ ಒದಗಿಸಲಾಗುತ್ತದೆ ಎಂದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾ­ಲಯದ ಆವರಣದಲ್ಲಿ ₨ 166 ಕೋಟಿ ವೆಚ್ಚದಲ್ಲಿ ರಾಜ್ಯ ಉನ್ನತ ಶಿಕ್ಷಣ ಅಕಾ­ಡೆಮಿ ಸ್ಥಾಪಿಸುವ ಪ್ರಸ್ತಾ­ವಕ್ಕೂ ಸಂಪುಟ ಅನುಮೋದನೆ ನೀಡಿದೆ.

ಪೌರ ಕಾರ್ಮಿಕರಿಗೆ ಗೃಹ ಭಾಗ್ಯ: ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಲ್ಲಿರುವ 11,438 ಕಾಯಂ ಪೌರ ಕಾರ್ಮಿಕರಿಗೆ ವಸತಿ ಸೌಕರ್ಯ ಒದಗಿಸಲು ರೂಪಿಸಿರುವ ‘ಪೌರ ಕಾರ್ಮಿಕ ಗೃಹ ಭಾಗ್ಯ ಯೋಜನೆ’ಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಮೊದಲ ಹಂತದಲ್ಲಿ ಒಂದು ಸಾವಿರ ಪೌರ ಕಾರ್ಮಿಕರಿಗೆ ಮನೆಗಳನ್ನು ನಿರ್ಮಿಸಿ, ಹಂಚಿಕೆ ಮಾಡಲಾಗುತ್ತದೆ ಎಂದು ಜಯಚಂದ್ರ ತಿಳಿಸಿದರು.

ತಲಾ ₨ 7.5 ಲಕ್ಷ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ. ₨ 1.5 ಲಕ್ಷವನ್ನು ಫಲಾನುಭವಿಗಳು ಭರಿಸಬೇಕು. ₨ 6 ಲಕ್ಷವನ್ನು ಶೇಕಡ 10ರ ಬಡ್ಡಿ ದರದಲ್ಲಿ ಸಾಲವಾಗಿ ನೀಡಲಾಗುತ್ತದೆ ಎಂದರು.

ಇತರ ನಿರ್ಣಯಗಳು
*ಕುಡಿಯುವ ನೀರಿನ ಯೋಜನೆಗ­ಳಲ್ಲಿ ವಿದ್ಯುದ್ದೀಕರಣ ಕಾಮಗಾರಿಗೆ ಕರ್ನಾ­ಟಕ ಸಾರ್ವಜನಿಕ ಸಂಗ್ರಹಣೆ­ಯಲ್ಲಿ ಪಾರದರ್ಶಕತೆ ಕಾಯ್ದೆಯಡಿ ನೀಡಿದ್ದ ವಿನಾಯ್ತಿ ₨ 5 ಲಕ್ಷಕ್ಕೆ ಹೆಚ್ಚಳ.
*ದೆಹಲಿಯ ಕರ್ನಾಟಕ ಭವನಕ್ಕೆ ನೇರವಾಗಿ ಸಿಬ್ಬಂದಿ ನೇಮಕಾತಿಗೆ
ಅವಕಾಶ ಕಲ್ಪಿ­ಸುವ ವೃಂದ ಮತ್ತು ನೇಮಕಾತಿ ನಿಯಮ ರಚಿಸುವ ಪ್ರಸ್ತಾವಕ್ಕೆ ಒಪ್ಪಿಗೆ.
*ವಿರಾಜಪೇಟೆ ತಾಲ್ಲೂಕಿನ ಹುಣಸೂರು– ತಲಕಾವೇರಿ ರಸ್ತೆ ಅಭಿವೃದ್ಧಿ ಕಾಮಗಾರಿಯ ₨ 27.66 ಕೋಟಿ ವೆಚ್ಚದ ಪರಿಷ್ಕೃತ ಅಂದಾಜಿಗೆ ಒಪ್ಪಿಗೆ.
*ಕೊಳ್ಳೇಗಾಲ ತಾಲ್ಲೂಕಿನ ಬಿಳಿಗಿರಿರಂಗನ ಬೆಟ್ಟದ ಮೆಲ್ಲಹಳ್ಳಿ ಗೇಟ್‌ (₨ 10.75 ಕೋಟಿ), ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಎಳೆಸಂದ್ರ (₨ 10.05 ಕೋಟಿ), ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ಸುಟ್ಟಟ್ಟಿ (₨ 11.45 ಕೋಟಿ) ಗ್ರಾಮಗಳಲ್ಲಿ ಪರಿಶಿಷ್ಟ ಜಾತಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಕಟ್ಟಡ ನಿರ್ಮಾಣ.
*ಬಾಗೇಪಲ್ಲಿ ತಾಲ್ಲೂಕು ವೆಂಕಟಾಪುರ ಗ್ರಾಮ (₨ 8.30 ಕೋಟಿ), ಮಧುಗಿರಿ ತಾಲ್ಲೂಕು ನಲ್ಲೇಕಾಮನಹಳ್ಳಿ– ಬೇಡತ್ತೂರು (₨ 9.22 ಕೋಟಿ), ಮಳ­ವಳ್ಳಿ ತಾಲ್ಲೂಕಿನ ವಡ್ಡರಹಳ್ಳಿ (₨ 11.35 ಕೋಟಿ) ಮತ್ತು ಕೆ.ಆರ್‌.ಪೇಟೆ ತಾಲ್ಲೂಕಿನ ಮೊಳ್ಳೇನಹಳ್ಳಿ ಗ್ರಾಮದಲ್ಲಿ (₨ 10.75 ಕೋಟಿ) ವೆಚ್ಚದಲ್ಲಿ ಪರಿ­ಶಿಷ್ಟ ಜಾತಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳ ಕಟ್ಟಡ ನಿರ್ಮಾಣ.
*ಮೈಸೂರು ವಿಶ್ವವಿದ್ಯಾಲಯದ ಚಾಮರಾಜನಗರ ಅಧ್ಯಯನ ಕೇಂದ್ರಕ್ಕೆ ₨ 9 ಕೋಟಿ ಅನುದಾನ

Write A Comment