ಕನ್ನಡ ವಾರ್ತೆಗಳು

ಪಾಲಿಕೆಗಳಿಗೆ ಪ್ರತ್ಯೇಕ ಕಮಿಷನರೇಟ್ ಸ್ಥಾಪನೆ : ಸಚಿವ ವಿನಯ್ ಕುಮರ್ ಸೊರಕೆ.

Pinterest LinkedIn Tumblr

dc_meeting_photo_1

ಮಂಗಳೂರು,ಜ.24 : ರಾಜ್ಯದ 10 ನಗರ ಪಾಲಿಕೆಗಳನ್ನು ಸೇರಿಸಿ ಪ್ರತ್ಯೇಕ ಕಮಿಷನರೇಟ್ ಸ್ಥಾಪನೆ ಮಾಡಲಾಗುವುದು ಎಂದು ರಾಜ್ಯದ ನಗರಾಭಿವೃದ್ಧಿ ಖಾತೆ ಸಚಿವ ವಿನಯಕುಮಾರ್ ಸೊರಕೆ ಹೇಳಿದರು.

dc_meeting_photo_3 dc_meeting_photo_2

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಗಳ ಆಡಳಿತ ವ್ಯವಸ್ಥೆಯು ಡೈರೆಕ್ಟರೇಟ್ ಆಫ್ ಮುನ್ಸಿಪಾಲ್ ಅಡ್ಮಿನಿಸ್ಟ್ರೇಶನ್ (ಡಿಎಂಎ) ಅಡಿಯಲ್ಲಿ ಬರುವುದರಿಂದ ರಾಜ್ಯದ ಎಲ್ಲ ಸ್ಥಳೀಯಾಡಳಿತದ ಆಡಳಿತ ವ್ಯವಸ್ಥೆ ನೋಡಿಕೊಳ್ಳುವುದು ಕಷ್ಟ ಸಾಧ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆಗಳಿಗೆ ಆಡಳಿತ ವ್ಯವಸ್ಥೆ ನೋಡಿಕೊಳ್ಳಲು ಪ್ರತ್ಯೇಕ ಕಮಿಷನರೇಟ್ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರಿಂದ ಆಡಳಿತ ವ್ಯವಸ್ಥೆಯನ್ನೇ ನಾವೇ ನೋಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ವಾರ್ಡ್ ಸಮಿತಿ: ವಾರ್ಡ್ ಸಮಿತಿ ರಚನೆ ಕುರಿತು ಕೆಲವು ಬದಲಾವಣೆ ಮಾಡುವುದು ಅಗತ್ಯವಿದ್ದು, ಆ ತಿದ್ದುಪಡಿ ಮಾಡಿಕೊಂಡು, ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಸಚಿವ ಸೊರಕೆ ಹೇಳಿದರು.

dc_meeting_photo_5 dc_meeting_photo_4

94ಸಿಸಿ ಅಂಕಿತಕ್ಕೆ ಬಾಕಿ: ನಗರ ಪ್ರದೇಶಗಳಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿ ವಾಸ ಮಾಡುವವರಿಗೆ ಹಕ್ಕುಪತ್ರ ನೀಡುವುದಕ್ಕಾಗಿ 94 ಸಿಸಿ ಕಾನೂನು ಜಾರಿಗೆ ವಿಧಾನ ಸಭೆಯಲ್ಲಿ ತಿದ್ದುಪಡಿ ಮಸೂದೆ ಅನುಮೋದನೆಗೊಂಡಿದ್ದು, ರಾಜ್ಯಪಾಲರ ಅಂಕಿತವಾದ ತಕ್ಷಣ ಈ ಕಾನೂನು ಅನುಷ್ಠಾನಕ್ಕೆ ಬರಲಿದೆ ಎಂದು ಸೊರಕೆ ಹೇಳಿದರು.

ಟಿಡಿಆರ್ ಹೆಚ್ಚಳ: ಸರಕಾರಿ ಉಪಯೋಗಕ್ಕೆ ಖಾಸಗಿಯವರಿಂದ ಪಡೆಯುವ ಭೂಮಿಗೆ ನೀಡುವ ಟಿಡಿಆರ್‌ನ್ನು ಶೇ.1.50ರಿಂದ ಶೇ.2.50ಕ್ಕೆ ಏರಿಸಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ಮಾತ್ರ ಟಿಡಿಆರ್ ಬಳಸಿಕೊಳ್ಳಲಾಗುತ್ತಿದೆ ಎಂದರು.

ಸ್ವಯಂ ಘೋಷಿತ ಆಸ್ತಿ ತೆರಿಗೆ: ಸ್ವಯಂ ಘೋಷಿತ ಆಸ್ತಿ ತೆರಿಗೆ ಏರಿಸುವುದಿಲ್ಲ ಎಂಬ ಭರವಸೆ ನೀಡಿ ಆಡಳಿತ ಹಿಡಿದ ಕಾಂಗ್ರೆಸ್ ಇದೀಗ ತೆರಿಗೆ ಹೆಚ್ಚಿಸಿದ್ದರ ಬಗ್ಗೆ ಪ್ರಶ್ನಿಸಿದಾಗ ಸ್ಪಷ್ಟ ಉತ್ತರ ನೀಡಲು ಸೊರಕೆ ತಡಕಾಡಿದರು. ಮೂಲ ಸೌಕರ‌್ಯಗಳು ಬೇಕಾದರೆ ತೆರಿಗೆ ಪಾವತಿಸಬೇಕು. ಮಂಗಳೂರು ಪಾಲಿಕೆ ತೆರಿಗೆ ತುಂಬ ಕಡಿಮೆ ಎಂದರು. ಮಂಗಳೂರನ್ನು ಸ್ಮಾರ್ಟ್ ಸಿಟಿ ಮಾಡಲಾಗುತ್ತಿದ್ದು, ಇಷ್ಟೇ ಪ್ರಮಾಣದಲ್ಲಿ ಆದಾಯ ಸಂಗ್ರಹಿಸಬೇಕು ಎಂಬ ನಿಯಮವಿದೆ ಎಂದರು.

dc_meeting_photo_6

ತೆರಿಗೆಯನ್ನು ನೇರವಾಗಿ ಪಾವತಿಸುವ ವ್ಯವಸ್ಥೆ ಪಾಲಿಕೆಯ ಆರು ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಮಾಡಲಾಗಿದ್ದು, ಇದು ಯಶಸ್ವಿಯಾದರೆ ಇಡೀ 60 ವಾರ್ಡ್‌ಗಳಿಗೆ ವಿಸ್ತರಿಸಲಾಗುವುದು ಎಂದರು.

ನರ್ಮ್ ಬಸ್ ತಿರಸ್ಕಾರ: ನರ್ಮ್ ಯೋಜನೆಯಂತೆ ಬಸ್‌ಗಳನ್ನು ನಿಶ್ಚಿತ ಏಜೆನ್ಸಿಯಿಂದ ಪಡೆಯಬೇಕು ಎಂಬ ನಿಯಮ ಇದೆ. ಈ ಏಜೆನ್ಸಿಯಿಂದ ಖರೀದಿಸುವ ಬಸ್‌ಗಳಿಗೆ 43 ಲಕ್ಷರೂ.ಗಳಿವೆ. ಆದರೆ ಟಾಟಾ ಕಂಪನಿಯಿಂದ ನೇರ ಖರೀದಿಸಿದರೆ 24 ಲಕ್ಷ ರೂ.ಗಳಿಗೆ ಬಸ್ ಲಭಿಸುತ್ತದೆ. ಈ ಹಿನ್ನೆಲೆಯಿಂದ ಬಸ್ ಖರೀದಿಸುವ ಪ್ರಸ್ತಾಪ ತಿರಸ್ಕರಿಸಲಾಗಿದೆ ಎಂದರು.

ಕರಾವಳಿ ನೀರು, ಒಳಚರಂಡಿಗೆ ಅನುದಾನ: ಪಾಲಿಕೆಗೆ ಮುಖ್ಯಮಂತ್ರಿಯವರ ಮೂರನೇ ಹಂತದ 100ಕೋಟಿ ರೂ. ಯೋಜನೆ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. 13ನೇ ಹಣಕಾಸಿನಿಂದ 40 ಕೋಟಿ ರೂ., ಎಸ್‌ಎಫ್‌ಸಿಯಿಂದ 20ಕೋಟಿ ರೂ.ಗಳನ್ನು , ಜಿಂಕೆ ಪಾರ್ಕ್‌ನ ಅಭಿವೃದ್ಧಿಗೆ 5ಕೋಟಿ, ತುಂಬೆ ಅಣೆಕಟ್ಟೆಗೆ 35ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು ಎಂದು ಸಚಿವ ಸೊರಕೆ ಹೇಳಿದರು.

ಎಡಿಬಿಯಿಂದ ಮಂಗಳೂರು ಪಾಲಿಕೆಯಲ್ಲಿ 24*7 ನೀರು ಪೂರೈಕೆಗೆ 160ಕೋಟಿ ರೂ. ಒಳಚರಂಡಿಗೆ 180ಕೋಟಿ ರೂ., ಪುತ್ತೂರಿಗೆ 24*7 ನೀರು ಪೂರೈಕೆಗೆ 15ಕೋಟಿ, ಒಳಚರಂಡಿಗೆ 90ಕೋಟಿ ರೂ.ಗಳನ್ನು ಒದಗಿಸಲಾಗುತ್ತಿದೆ. ಮೂಡುಬಿದಿರೆಗೆ ಒಳಚರಂಡಿಗೆ 75ಕೋಟಿ ರೂ.ಗಳು, ಸುಳ್ಯಕ್ಕೆ ಕುಡಿಯುವ ನೀರಿಗೆ 65.6ಕೋಟಿ ರೂ.ಗಳ ಬಂಟ್ವಾಳಕ್ಕೆ ಕುಡಿಯುವ ನೀರಿಗೆ 52.8ಕೋಟಿ ರೂ. ಬಿಡುಗಡೆ ಮಾಡಲಾಗಿದ್ದು, ಟೆಂಡರ್ ಹಂತದಲ್ಲಿದೆ. ಬಂಟ್ವಾಳ ಒಳಚರಂಡಿ ವ್ಯವಸ್ಥೆಗೆ 49.2ಕೋಟಿ ರೂ.ಗಳು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಿಂದ ಕುಡಿಯುವ ನೀರಿಗೆ 8.6ಕೋಟಿ, ಒಳಚರಂಡಿಗೆ 17ಕೋಟಿ ರೂ.ಗಳನ್ನು ನೀಡಲಿದ್ದು, ಅದರ ಕಾಮಗಾರಿ ಅನುಷ್ಠಾನವನ್ನು ಜಲಮಂಡಳಿ ಮಾಡಲಿದೆ ಎಂದರು.

ಶಾಸಕರಾದ ಜೆ. ಆರ್. ಲೋಬೊ, ಮೊಯ್ದೀನ್ ಬಾವ, ಮಂಗಳೂರು ಮೇಯರ್ ಮಹಾಬಲ ಮಾರ್ಲ, ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ, ಪಾಲಿಕೆ ಆಯುಕ್ತೆ ಹೆಫ್ಸಿಬಾ ರಾಣಿ ಕೊರ್ಲಪತಿ ಉಪಸ್ಥಿತರಿದ್ದರು.

Write A Comment