ನವದೆಹಲಿ: ಅರ್ಕಾವತಿ ಬಡಾವಣೆ ಡಿನೋಟಿಫಿಕೇಶನ್ ಹಗರಣ ಕುರಿತು ಕರ್ನಾಟಕದ ಕೆಲ ಕಾಂಗ್ರೆಸ್ ನಾಯಕರು ಹೈಕಮಾಂಡ್ಗೆ ದೂರು ನೀಡಿದ್ದಾರೆ.
ಮುಖ್ಯಮಂತ್ರಿಗಳ ಕೆಲವು ಸಮೀಪವರ್ತಿಗಳು ಈ ಡಿನೋಟಿಫಿಕೇಶನ್ನಿಂದ ಲಾಭ ಮಾಡಿಕೊಂಡಿದ್ದಾರೆಂಬ ಆರೋಪಗಳಿವೆ ಎಂದು ಹೈಕಮಾಂಡ್ಗೆ ತಿಳಿಸಿದ್ದಾಗಿ ವಿಶ್ವಸನೀಯ ಮೂಲಗಳು ಹೇಳಿವೆ.
ಅರ್ಕಾವತಿ ಡಿನೋಟಿಫಿಕೇಶನ್ ತೀರ್ಮಾನವನ್ನು ಕೋರ್ಟ್ನಲ್ಲಿ ಪ್ರಶ್ನಿಸಲು ಬಿಜೆಪಿ ಉದ್ದೇಶಿಸಿದೆ. ಮೊಕದ್ದಮೆ ದಾಖಲಿಸಲು ರಾಜ್ಯಪಾಲರ ಅನುಮತಿ ಪಡೆಯುವ ಸಂಭವವಿದೆ. ಹಾಗೇನಾದರೂ ಆದರೆ ಪಕ್ಷ ಮತ್ತು ಸರ್ಕಾರ ತೀವ್ರ ಮುಜುಗರ ಎದುರಿಸಬೇಕಾಗುತ್ತದೆ ಎಂದು ವರಿಷ್ಠರ ಗಮನಕ್ಕೆ ತಂದಿದ್ದಾರೆ.
ಇವರೆಲ್ಲ ಅನೇಕ ದಿನಗಳಿಂದ ದೆಹಲಿಯಲ್ಲಿ ಉಳಿದಿದ್ದು, ಅರ್ಕಾವತಿ ಹಗರಣದ ಎಲ್ಲ ದಾಖಲೆಗಳನ್ನು ಹೈಕಮಾಂಡ್ಗೆ ತಲುಪಿಸಿದ್ದಾರೆಂದು ಮೂಲಗಳು ಖಚಿತಪಡಿಸಿವೆ.
ಹಿಂದೆ ಬಿ.ಎಸ್. ಯಡಿಯೂರಪ್ಪ ಪ್ರಕರಣದಲ್ಲಿ ಆಗಿನ ರಾಜ್ಯಪಾಲ ಎಚ್. ಆರ್. ಭಾರದ್ವಾಜ್ ಮಾಡಿದಂತೆ ಅರ್ಕಾವತಿ ಪ್ರಕರಣದಲ್ಲಿ ರಾಜ್ಯಪಾಲ ವಜುಭಾಯ್ ವಾಲಾ ಅವರು ಮೊಕದ್ದಮೆಗೆ ಅನುಮತಿ ಕೊಡುವ ಸಾಧ್ಯತೆಯಿದೆ ಎಂದೂ ಈ ಮುಖಂಡರು ವಿವರಿಸಿದ್ದಾರೆ.
ಎಸ್.ಎಂ. ಕೃಷ್ಣ ಸರ್ಕಾರ 2003ರಲ್ಲಿ ರೂಪಿಸಿದ ಅರ್ಕಾವತಿ ಬಡಾವಣೆ ಯೋಜನೆಗೆ ಬಿಡಿಎ ಜಮೀನು ಸ್ವಾಧೀನ ಪ್ರಕ್ರಿಯೆ ಆರಂಭಿಸಿದಾಗಿನಿಂದಲೂ ವಿವಾದ ಹುಟ್ಟಿಕೊಂಡಿದೆ. ಸಿದ್ದರಾಮಯ್ಯ ಸರ್ಕಾರ ಬಿಡಿಎ ಶಿಫಾರಸಿನ ಅನ್ವಯ ಅರ್ಕಾವತಿ ಬಡಾವಣೆ ಯೋಜನೆಯನ್ನು ಪುನರ್ ರೂಪಿಸಿ 541 ಎಕರೆ ಭೂಮಿಯನ್ನು ಅಧಿಸೂಚನೆ ವ್ಯಾಪ್ತಿಯಿಂದ ಕೈಬಿಟ್ಟಿದೆ.
ಕೋರ್ಟ್ ಆದೇಶದಂತೆ ಈ ಕ್ರಮ ಕೈಗೊಂಡಿರುವುದಾಗಿ ಸಿದ್ದರಾಮಯ್ಯ ಪ್ರತಿಪಾದಿಸುತ್ತಿದ್ದಾರೆ. ಆದರೆ ಇಲ್ಲಿ ನಿಯಮಗಳನ್ನು ಉಲ್ಲಂಘಿಸಿ ಅಧಿಸೂಚನೆ ವ್ಯಾಪ್ತಿಯಿಂದ ಕೈಬಿಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ದೂರುತ್ತಿದ್ದಾರೆ.
