ಮನೋರಂಜನೆ

ಸಿನಿಮೋತ್ಸವದಲ್ಲಿ ಕಲಾವಿದರು ಏಕೆ ಪಾಲ್ಗೊ­ಳ್ಳುತ್ತಿಲ್ಲ : ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರಸಿಂಗ್ ಬಾಬು

Pinterest LinkedIn Tumblr

pvec03babu-1

ಬೆಂಗಳೂರು: ಅಂತರರಾಷ್ಟ್ರೀಯ ಸಿನಿ­ಮೋ­ತ್ಸವಗಳು ಯಾರಿಗಾಗಿ ಮತ್ತು ಏಕೆ? ಹೀಗೊಂದು ಪ್ರಶ್ನೆಯನ್ನು ಕೇಳಿದರೆ ‘ಸ್ಥಳೀಯ ಚಿತ್ರರಂಗದ ಬೆಳವಣಿಗೆಗೆ ಪೂರಕ’ ಎನ್ನುವ ಸಿದ್ಧ ಉತ್ತರಗಳು ದೊರೆ­ಯುತ್ತವೆ. ಈ ಉತ್ತರ ಸರಿ­ಯಾಗಿಯೂ ಇದೆ. ಆದರೆ ನಮ್ಮ ಚಿತ್ರೋತ್ಸವಗಳಲ್ಲಿ ಕನ್ನಡದ ನಟ–ನಟಿಯರು ಯಾವ ಮಟ್ಟದಲ್ಲಿ ತೊಡ­ಗುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಉತ್ತರ ನಿರಾಶೆ ಮೂಡಿಸುತ್ತದೆ.

ಮೇಲ್ನೋಟಕ್ಕೆ ಕಾಣುವ ಅಂಶ ಎಂದರೆ ಸಿನಿಮೋತ್ಸವದಲ್ಲಿ ಪಾಲ್ಗೊಳ್ಳು­ತ್ತಿರುವವರಲ್ಲಿ ಬಹು ಮಂದಿ ಛಾಯಾ­ಗ್ರಹಣ, ಸಂಕಲನ, ನಿರ್ದೇಶನ ಇತ್ಯಾದಿ ತೆರೆಯ ಹಿಂದೆ ಕೆಲಸ ಮಾಡುತ್ತಿರುವ ಉತ್ಸಾಹಿಗಳು. ಚಲನಚಿತ್ರ ಅಕಾಡೆ­ಮಿಯು ಸಿನಿಮಾ ವಲಯದವರಿಗೆ ನೀಡಲು 500 ಪಾಸುಗಳನ್ನು ಚಲನ­ಚಿತ್ರ ವಾಣಿಜ್ಯ ಮಂಡಳಿಗೆ ಕೊಟ್ಟಿದೆ. ಆದರೆ, ಉತ್ಸವದ ಉದ್ಘಾಟನಾ ಸಮಾ­ರಂಭದಲ್ಲಿ ಕಾಣಿಸಿಕೊಂಡಿದ್ದನ್ನು ಬಿಟ್ಟರೆ ಬಹುತೇಕ ನಟ–ನಟಿಯರು ಚಿತ್ರಮಂದಿ­ರ­ಗಳಿಂದ ದೂರವೇ ಉಳಿದಿದ್ದಾರೆ.

ಈ ಮುನ್ನವೇ ನಿಗದಿಯಾದ ಚಿತ್ರೀಕ­ರಣ, ಅಭಿಮಾನಿಗಳ ಮುತ್ತಿಗೆ ಸಿನಿಮೋ­ತ್ಸವದಿಂದ ನಟರು ದೂರವಿ­ರಲು ಕಾರಣ ಎನ್ನುವುದು ಚಿತ್ರರಂಗದ­ವರ ಮಾತು. ಆದರೆ ಕನ್ನಡದ ಮಟ್ಟಿಗೆ ಪ್ರಯೋಗಾತ್ಮಕ ಚಿತ್ರಗಳ ಗೆಲುವು ಮರೀಚಿಕೆಯಾಗುತ್ತಿದೆ, ವಿಭಿನ್ನ ತರಹದ ಕಥೆ ಕಟ್ಟುವಲ್ಲಿ ಹಿನ್ನಡೆಯಾಗುತ್ತಿದೆ, ಸಿದ್ಧಸೂತ್ರಗಳ ಮತ್ತು ರೀಮೇಕ್ ಕಥನ­ಗಳು ಹೆಚ್ಚುತ್ತಿದೆ ಎನ್ನುವ ಆರೋಪದ ಈ ಹೊತ್ತಿನಲ್ಲಿ ನಟರ ಪಾಲ್ಗೊ­ಳ್ಳು­ವಿಕೆಯೂ ಮುಖ್ಯವಾ­ಗುತ್ತದೆ.

‘ಇಲ್ಲಿ ಮಾತ್ರ ಎಂದಲ್ಲ. ಎಲ್ಲ ಸಿನಿ­ಮೋ­ತ್ಸವಗಳಲ್ಲೂ ನಟರ ಪಾಲ್ಗೊ­ಳ್ಳು­ವಿಕೆ ಕಡಿಮೆ ಇದೆ. ಹಾಜರಾದರೂ ತಮ್ಮ ಪಾಲಿನ ಕಾರ್ಯಕ್ರಮ ಮುಗಿಸಿ ಹೊರಟುಹೋಗುತ್ತಾರೆ. ಕಮಲ್‌ ಹಾಸನ್‌, ಸುಹಾಸಿನಿ ಮತ್ತಿತರ ಕೆಲವೇ ಮಂದಿ ಮಾತ್ರ ಗೋವಾ ಚಿತ್ರೋತ್ಸವ­ದಲ್ಲಿ ಪಾಲ್ಗೊಳ್ಳುತ್ತಾರೆ. ಬಹುಪಾಲು ನಟರು ಸಿನಿಮೋತ್ಸವವನ್ನು ಗಂಭೀರ­ವಾಗಿ ಪರಿಗಣಿಸಿಲ್ಲ. ಇವರು ಸಿನಿಮೋ­ತ್ಸ­ವ­ಗಳಲ್ಲಿ ಪಾಲ್ಗೊಂಡರೆ  ಚಿತ್ರರಂಗದ ಬೆಳ­ವಣಿಗೆಗೆ ಅನುಕೂಲ­ವಾಗುತ್ತದೆ. ಜಾಗತಿಕ ಸಿನಿಮಾಗಳಲ್ಲಿನ ಪಾತ್ರ ಸೃಷ್ಟಿ, ಕಥೆಯ ನಿರ್ವಹಣೆ, ನಟರ ಸ್ಪಂದನದ ಅರಿವಾಗುತ್ತದೆ’ ಎನ್ನುತ್ತಾರೆ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಪಿ.ಎಚ್.ವಿಶ್ವನಾಥ್.

‘ನಮ್ಮಲ್ಲಿ ಸ್ಟಾರ್ ಎಂದರೆ ಇದೇ ರೀತಿಯ ಕಥೆ ಇರಬೇಕು ಎನ್ನುವ ಭಾವನೆ ಇದೆ. ಈ ದೃಷ್ಟಿಕೋನ ಬದ­ಲಾವಣೆಯಾಗಬೇಕು ಎಂದರೆ ಬೇರೆ ದೇಶಗಳ ಸಿನಿಮಾಗಳನ್ನು ನಮ್ಮ ನಟರು ನೋಡಬೇಕು. ಇದರಿಂದ ಸ್ಥಳೀಯವಾಗಿ ಪ್ರಯೋಗಾತ್ಮಕ ಚಿತ್ರಗಳು ಮೂಡಿ­ಬರಲಿವೆ. ಖಂಡಿತ­ವಾಗಿಯೂ ಜನರು ಅದನ್ನು ಒಪ್ಪಿಕೊ­ಳ್ಳು­ತ್ತಾರೆ’ ಎಂದು ವಿಶ್ವನಾಥ್‌ ಅವರು ಅಭಿಪ್ರಾಯ­ಪಡುತ್ತಾರೆ.

‘ಜಾಗತಿಕವಾಗಿ ನೋಡುವುದಾ­ದರೂ ಸಿನಿಮೋತ್ಸವ­ಗಳಲ್ಲಿ ನಟರ ಪಾಲ್ಗೊ­ಳ್ಳುವಿಕೆ ಕಡಿಮೆ ಇದೆ. ಚಿತ್ರೀ­ಕ­ರಣದ ದಿನಾಂಕ ಇತ್ಯಾದಿ ಕಾರಣಕ್ಕೆ ಅವರು ಪಾಲ್ಗೊಳ್ಳದೇ ಇರಬಹುದು. ಆದರೆ ಭಾಗವಹಿಸಿದರೆ ಅವರಿಗೆ ಮಾನಸಿಕ ಮತ್ತು ಬೌದ್ಧಿಕವಾಗಿ ಚೈತನ್ಯ ಬರುತ್ತದೆ’ ಎನ್ನುವ ನುಡಿ ನಿರ್ದೇಶಕ ಬಿ. ಸುರೇಶ್ ಅವರದ್ದು.

‘ಹಳೆಯ, ನನ್ನ ತಲೆಮಾರಿನ ಮತ್ತು ಯುವ ಛಾಯಾಗ್ರಾಹಕರು, ಸಂಕಲನ­ಕಾ­ರರು, ನಿರ್ದೇಶಕರು ಹೆಚ್ಚಿನ ಸಂಖ್ಯೆ­ಯಲ್ಲಿ ಪಾಲ್ಗೊಂಡು ಸ್ಫೂರ್ತಿ ಪಡೆಯು­ತ್ತಿ­ದ್ದಾರೆ. ಗೋವಾ ಚಿತ್ರೋತ್ಸವದಲ್ಲಿ ಕಮಲ­ಹಾಸನ್ ಜತೆ ಚಿತ್ರ ನೋಡಿ, ಚರ್ಚಿಸಿದ್ದೇನೆ. ಅವರು ಹೇಳಿದ ನಂತ­ರವೇ ಕೆಲವು ನಿರ್ದೇಶಕರ ಚಿತ್ರಗಳನ್ನು ನಾನು ನೋಡಿದ್ದು. ಸೆಲೆಬ್ರಿಟಿಗಳಿಗಿಂತ ತಂತ್ರಜ್ಞರ ಪಾಲ್ಗೊಳ್ಳುವಿಕೆ ಮುಖ್ಯ’ ಎಂದು ಸುರೇಶ್ ಅಭಿಪ್ರಾಯ ಪಡುತ್ತಾರೆ.

‘ಖುದ್ದು ಆಹ್ವಾನಿಸಿದ್ದೆ’
ಕಲಾವಿದರು ಏಕೆ ಸಿನಿಮೋತ್ಸವದಲ್ಲಿ ಪಾಲ್ಗೊ­ಳ್ಳುತ್ತಿಲ್ಲ ಎಂದು ನನಗೆ ತಿಳಿಯುತ್ತಿಲ್ಲ. ಚಿತ್ರರಂಗದ ಪಾಲ್ಗೊಳ್ಳುವಿಕೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ನಾನು ಅಕಾಡೆಮಿ ಅಧ್ಯಕ್ಷ ಸ್ಥಾನ ವಹಿಸಿಕೊಂಡು ಕೆಲವೇ ದಿನಗಳಲ್ಲಿ ಈ ಉತ್ಸವ ಬಂದಿತು. ನಾನೇ ವೈಯಕ್ತಿಕವಾಗಿ ನಟರನ್ನು ಭೇಟಿ ಮಾಡಿ ಸಿನಿಮೋತ್ಸ­ವ­ದಲ್ಲಿ ಪಾಲ್ಗೊಳ್ಳು­ವಂತೆ ಆಹ್ವಾನಿಸಿದ್ದೆ. ಈ ಮುಂಚೆಯೇ ಅವರು ಕೆಲಸಗಳನ್ನು ಒಪ್ಪಿಕೊಂಡಿ­ರುತ್ತಾರೆ ಎನ್ನುವುದು ನಿಜ. ಹಾಗಿದ್ದರೆ ಅವರನ್ನು ಕರೆತರಲು ಯಾವ ಬಗೆಯ ಪ್ರಯತ್ನ ಮಾಡಬೇಕು ಎನ್ನುವ ಬಗ್ಗೆ ಯೋಚಿಸಲಾಗುತ್ತಿದೆ. ನಿರ್ದೇ­ಶ­ಕರು, ನಿರ್ಮಾಪಕರು ಮತ್ತು ನಟರಿಗೆ ಈ ಸಂಬಂಧ ಯಾವ ರೀತಿ ಅನುಕೂಲ ಮಾಡಿ­ಕೊಡಬೇಕು ಎಂದು ಮುಂದಿನ ವರ್ಷದ ಚಿತ್ರೋತ್ಸವ ಸಂದರ್ಭದಲ್ಲಿ ಚರ್ಚಿಸಲಾಗುವುದು. ಸಿನಿಮೋತ್ಸವ ಪೂರ್ಣಗೊಂಡ ನಂತರ ಈ ಬಗ್ಗೆ ವಿಮರ್ಶೆ ಮಾಡಿಕೊಳ್ಳಲು ಸಭೆ ಕರೆಯುತ್ತೇನೆ.
–ಎಸ್‌.ವಿ. ರಾಜೇಂದ್ರಸಿಂಗ್ ಬಾಬು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ

Write A Comment