ಮನೋರಂಜನೆ

ಅಂತರರಾಷ್ಟ್ರೀಯ ಸಿನಿಮೋತ್ಸವ: ಸಿನಿಮಾ ವರ್ಗೀಕರಣ ಸಲ್ಲದು: ಶೇಷಾದ್ರಿ

Pinterest LinkedIn Tumblr

pvec09Film-05

ಬೆಂಗಳೂರು: ‘ಕಲಾತ್ಮಕ ಚಿತ್ರ ನಿರ್ಮಾಣ ಒಂದು ಕಾಲದಲ್ಲಿ ಹೆಮ್ಮೆ ವಿಷಯವಾಗಿತ್ತು. ಆದರೆ ಇಂದು ಅವು ಪ್ರಶಸ್ತಿಗಾಗಿ ಮಾಡುವ ಚಿತ್ರಗಳು ಎನ್ನು­ವಂತಾಗಿದೆ. ನಮ್ಮನ್ನು ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಭಾರತೀಯ ಚಿತ್ರ­ರಂಗ­ದಲ್ಲಿ 1950ರ ಬಳಿಕ ಹೊಸ ಬಗೆಯ ಚಿತ್ರಗಳು ಬಂದವು. ಕನ್ನಡ­ದಲ್ಲಿ ಈ ಪ್ರಕ್ರಿಯೆ 70ರ ಆಸುಪಾಸಿ­ನಲ್ಲಿ ಆರಂಭವಾಯಿತು. ಈಗಲೂ ಬರುತ್ತಿರುವ ಅಂಥ ಚಿತ್ರಗಳನ್ನು ಹೊಸ ಅಲೆಯ ಚಿತ್ರಗಳು ಎನ್ನಲಾಗುತ್ತಿದೆ…’ –ಹೀಗೆ ಬೇಸರದ ದನಿಯಲ್ಲಿ ಪ್ರತಿಕ್ರಿ­ಯಿ­ಸಿದ್ದು ನಿರ್ದೇಶಕ ಪಿ. ಶೇಷಾದ್ರಿ.

ನಗರದಲ್ಲಿ ನಡೆಯುತ್ತಿರುವ ಅಂತರ­ರಾಷ್ಟ್ರೀಯ ಸಿನಿಮೋತ್ಸವದಲ್ಲಿ ನಿರ್ದೇ­ಶಕ­ರೊಂದಿಗಿನ ಸಂವಾದದಲ್ಲಿ ಅವರು ಸೋಮವಾರ ಮಾತನಾಡಿದರು. ಕಮರ್ಷಿ­ಯಲ್ ಮತ್ತು ಕಲಾತ್ಮಕ ಚಿತ್ರ ಎನ್ನುವ ವರ್ಗೀಕರಣವೇ ಸಲ್ಲದು ಎನ್ನುವ ಆಕ್ಷೇಪ ಅವರ ಮಾತುಗಳಲ್ಲಿ ಕಾಣುತ್ತಿತ್ತು.

‘ಕಮರ್ಷಿಯಲ್ ಸಿನಿಮಾ ನೀವು ಮಾಡು­ವುದಿಲ್ಲವೇ ಎಂದು ಹಲ­ವರು ಕೇಳುತ್ತಾರೆ. ಏಕೆ ಆ ಸಿನಿಮಾ­ಗಳನ್ನು ಮಾಡ­ಬೇಕು ಎಂದು ನಾನು ಪ್ರಶ್ನಿಸು­ತ್ತೇನೆ. ಸಮಸ್ಯೆ ಇರುವುದೇ ಈ ವರ್ಗೀ­ಕರಣದಿಂದ. ಮುಂದಿನ ಚಿತ್ರ ಹೇಗಿರ­ಬೇಕು ಎಂಬುದನ್ನು ನಾನು ಯೋಚಿಸ­ಬೇಕಾಗಿದೆ. ಪ್ರತಿಯೊಬ್ಬ ನಿರ್ದೇ­ಶಕ­ನಿಗೂ ಆತನದೇ ಆದ ಅಭಿರುಚಿಗಳಿರು­ತ್ತವೆ ಅಲ್ಲವೇ’ ಎಂದು ಪ್ರಶ್ನಿಸಿ­ದರು.

ಮರಾಠಿ ಮತ್ತು ಕನ್ನಡ ಚಿತ್ರರಂಗ­ವನ್ನು ತುಲನೆ ಮಾಡಿದ ಅವರು,  ‘ಮುನ್ನುಡಿ ಚಿತ್ರ ಮಾಡಿ 14 ವರ್ಷ­ಗಳಾ­ಗಿವೆ. ಆಗ ಸರ್ಕಾರ ₨10 ಲಕ್ಷ ಸಬ್ಸಿಡಿ ನೀಡುತ್ತಿತ್ತು. ಈಗಲೂ ಅಷ್ಟೇ ಹಣ ನೀಡುತ್ತಿದೆ. 2003­ರಲ್ಲಿ ಮರಾಠಿ ಚಿತ್ರ ‘ಶ್ವಾಸ್‌’ ಆಸ್ಕರ್ ಅಂಗಳಕ್ಕೆ ಹೋದಾಗ ಅಲ್ಲಿನ ಸರ್ಕಾರ ಎಚ್ಚೆತ್ತು ಆ ಚಿತ್ರಕ್ಕೆ ₨50 ಲಕ್ಷ  ಸಬ್ಸಿಡಿ ನೀಡಿತು. ಉಳಿದಂತೆ ಎ, ಬಿ ಎಂದು ವಿಭಾಗಿಸಿ ₨30, ₨40 ಲಕ್ಷ ಸಬ್ಸಿಡಿ ಜಾರಿ ಮಾಡಿತು. ಆದರೆ ನಮ್ಮಲ್ಲಿ ಇಂದಿಗೂ ಸಬ್ಸಿಡಿ ಮೊತ್ತ ಹೆಚ್ಚಾ­ಗಿಲ್ಲ’ ಎಂದರು. ಕನ್ನಡ ಚಿತ್ರಗಳಿಗೆ ಸಂಬಂಧಿಸಿದಂತೆ ವಿಶೇಷ ಕಾನೂನನ್ನು ಏಕೆ ರೂಪಿಸ­ಬಾರದು ಎಂಬ ಪ್ರಶ್ನೆ ಯನ್ನೂ ಶೇಷಾದ್ರಿ ಸರ್ಕಾರದ ಮುಂದಿಟ್ಟರು.

‘ಹರಿವು’ ಚಿತ್ರದ ನಿರ್ದೇಶಕ ಮಂಜು­ನಾಥ್ ಮಂಸೋರೆ ಮಾತನಾಡಿ, ‘ನಮ್ಮಂಥ ಯುವ ನಿರ್ದೇಶಕರಿಗೆ ಸಿನಿ­ಮೋತ್ಸವ­ಗಳು ನೆರವಾಗುತ್ತವೆ. ಆದರೆ, ಚಿತ್ರಗಳಿಗೆ ಹೂಡಿರುವ ಹಣ­ ಯಾವ ರೀತಿ ವಾಪಸು ತೆಗೆದು ಕೊಳ್ಳಬೇಕು ಎನ್ನುವುದು ತಿಳಿಯು­ತ್ತಿಲ್ಲ. ನನ್ನ ಚಿತ್ರದ ಟ್ರೇಲರ್ ಬಿಡುಗಡೆಯಾದ ಸಂದರ್ಭ­ದಲ್ಲಿ ಇದು ಕಲಾತ್ಮಕವೇ ಅಥವಾ ಕಮರ್ಷಿಯಲ್ ಸಿನಿಮಾವೇ ಎನ್ನುವ ಪ್ರಶ್ನೆ ಇಟ್ಟಿ­ದ್ದರು.

ಹಂಚಿಕೆದಾರರ ಬಳಿ ಹೋದರೆ ₨20 ಲಕ್ಷ  ಕೊಟ್ಟರೆ ತೆರೆ ಕಾಣಿ­ಸುವುದಾಗಿ ಹೇಳು­ತ್ತಾರೆ. ಅಷ್ಟು ಹಣ ಕೊಟ್ಟು ಸಿನಿಮಾ ತೆರೆಗೆ ತರಲು ಸಾಧ್ಯವೇ’ ಎಂದರು. ಕರ್ನಾಟಕ ಚಲನ­ಚಿತ್ರ ಅಕಾ­ಡೆಮಿ ಅಧ್ಯಕ್ಷ ಎಸ್‌.ವಿ. ರಾಜೇಂದ್ರ­ಸಿಂಗ್ ಬಾಬು, ಸಿನಿಮೋತ್ಸ­ವದ ಕಲಾ­ನಿರ್ದೇಶಕ ವಿದ್ಯಾಶಂಕರ್‌್, ಗಾಯಕಿ ಎಂ.ಡಿ.ಪಲ್ಲವಿ ಹಾಜರಿದ್ದರು.

Write A Comment