ಕುಂದಾಪುರ: ಅ.7ರಂದು ರಾತ್ರಿ ಉಪ್ಪುಂದ ಅಂಬಾಗಿಲು ಎಂಬಲ್ಲಿ ಸ್ವರ್ಣೋದ್ಯಮಿ ಗಣೇಶ್ ಶೇಟ್ ಅವರಿಗೆ ಚೂರಿ ಇರಿದು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಪ್ರಕರಣದ ಪ್ರಮುಖ ಆರೋಪಿ ರವಿ ಜತ್ತನ್ ಪೊಲೀಸ್ ಬಲೆಗೆ ಬಿದ್ದಿದ್ದಾನೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ವಿಶೇಷ ಪೊಲೀಸ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲ್ಪಟ್ಟಿದ್ದಾನೆ. ವ್ಯವಹಾರ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಗಣೇಶ್ ಶೇಟ್, ಪುತ್ರ ಸುಧೀಂದ್ರ ಶೇಟ್, ಪುತ್ರಿ ದಿವ್ಯಶ್ರೀ ಅವರನ್ನು ಅಡ್ಡಗಟ್ಟಿದ ಐವರ ತಂಡ ಕಣ್ಣಿಗೆ ಮೆಣಸಿನ ಪುಡಿ ಎರಚಿ ಚೂರಿಯಿಂದ ಇರಿದು 12ಲಕ್ಷ ರೂಪಾಯಿ ಮೊತ್ತದ ಚಿನ್ನಾಭರಣಗಳಿದ್ದ ಬ್ಯಾಗ್ ಅಪಹರಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೆ ಶಿವಪ್ರಕಾಶ್, ಚಂದ್ರಹಾಸ್, ಪ್ರದೀಪ್ ಪೂಜಾರಿ, ದುರ್ಗಾದಾಸ್ ನಿಟ್ಟೂರು ಎಂಬವರನ್ನು ಬಂಧಿಸಲಾಗಿದ್ದು ಪ್ರಮುಖ ಆರೋಪಿ ರವಿ ಜತ್ತನ್ ಉಡುಪಿ ತಪ್ಪಿಸಿಕೊಂಡಿದ್ದ. ಮಡಿಕೇರಿ ಸಮೀಪ ಈತನನ್ನು ಬಂಧಿಸಲಾಗಿದೆ.
