ಉಡುಪಿ : ತೀರ್ಥಹಳ್ಳಿ ನಗರದಲ್ಲಿ ನಡೆದ ಅತ್ಯಾಚಾರ ಶಂಕೆ ಪ್ರಕರಣದ ಸಂತ್ರಸ್ತ ಬಾಲಕಿ ಮಣಿಪಾಲ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ. ಮೃತಪಟ್ಟ ಬಾಲಕಿ ಬಾಳೆಬೈಲು ನಿವಾಸಿಯಾಗಿದ್ದು ತೀರ್ಥಹಳ್ಳಿ ಸ.ಪ.ಪೂ. ಕಾಲೇಜು 8ನೇ ತರಗತಿ ವಿದ್ಯಾರ್ಥಿನಿ ನಂದಿತಾ.
ಮನೆಯವರು ಹೇಳುವ ಪ್ರಕಾರ ಆಕೆಯ ಮೇಲೆ ಅತ್ಯಾಚಾರ ನಡೆದಿಲ್ಲ ಎನ್ನುತ್ತರೆ. ಬದಲಾಗಿ ನೀರು ಬಾಟಲಿಯಲ್ಲಿ ಮತ್ತು ಬರುವ ಪದಾರ್ಥ ನೀಡಿ ಹತ್ಯೆ ಮಾಡಿದ್ದು ಅದನ್ನು ಪೊಲಿಸರು ತನಿಖೆ ನಡೆಸಿ ನ್ಯಾ ಒದಗಿಸಬೇಕೆಂದು ಕುಟುಂಬಿಕರು ಆಗ್ರಹಿಸಿದ್ದಾರೆ.
ಘಟನೆ ಹಿನ್ನೆಲೆ: ನಂದಿತಾ ಅ. 29ರ ಬೆಳಗ್ಗೆ ಶಾಲೆಗೆ ಬರಲು ಬಸ್ ನಿಲ್ದಾಣದಲ್ಲಿ ಸ್ನೇಹಿತೆಯರಿಗಾಗಿ ಕಾದುನಿಂತಿದ್ದಾಗ ಕಾರೊಂದರಲ್ಲಿ ಬಂದವರು ಆಕೆಯ ಹೆಸರನ್ನು ಕರೆದು ಬಳಿಗೆ ಕರೆದಿದ್ದು ಆಕೆ ಹೋದಾಗ ಬಲವಂತದಿಂದ ಕಾರಿನೊಳಗೆ ಸೆಳೆದು ಕೊಂಡೊಯ್ದರು.
ಮಧ್ಯಾಹ್ನ 12ರ ಸುಮಾರಿಗೆ 3 ಕಿ.ಮೀ. ದೂರದ ತುಡುಕಿ ಆನಂದಗಿರಿಯಲ್ಲಿ ಗುಡ್ಡದ ಬಳಿ ಆಕೆಯನ್ನು ಬಿಟ್ಟು ಅವರು ಪರಾರಿಯಾಗಿದ್ದು ಬೆದರಿದ್ದ ಆಕೆಯನ್ನು ಕಂಡ ಕಟ್ಟಿಗೆ ಒಡೆಯುವವರು ವಿಚಾರಿಸಿ ಆಕೆಯ ಗುರುತುಚೀಟಿಯಲ್ಲಿದ್ದ ಮನೆಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ವಿಚಾರ ತಿಳಿಸಿದರು. ಮನೆ ಮಂದಿ ಬಂದು ಬಾಲಕಿಯನ್ನು ಮನೆಗೆ ಕರೆದೊಯ್ದರು.
ಸಂಜೆ ವೇಳೆಗೆ ಬಾಲಕಿ ವಾಂತಿ ಮಾಡಲು ಆರಂಭಿಸಿದ್ದು, ಅ. 30ರಂದು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ರಕ್ತದೊತ್ತಡ ಒಂದೇ ಸಮನೆ ಇಳಿಮುಖವಾಗುತ್ತಿದ್ದ ಕಾರಣ ಶಿವಮೊಗ್ಗ ಆಸ್ಪತ್ರೆಗೆ ಬಳಿಕ ಶುಕ್ರವಾರ ಮುಂಜಾನೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.
ಪರೀಕ್ಷೆ ಮಾಡಿ ವೈದ್ಯರು ಹೊಟ್ಟೆಯೊಳಗೆ ಸಮಸ್ಯೆ ಪತ್ತೆಹಚ್ಚಿದ್ದು, ಸಂಜೆ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೆ ಬಾಲಕಿ ಸಾವನ್ನಪ್ಪಿದ್ದಾಳೆ.
ಘಟನೆ ಕುರಿತಂತೆ ಬಾಲಕಿಯು ತಾಯಿಯ ಬಳಿ ಮಾಹಿತಿ ನೀಡಿದ್ದಾಳೆ ಎನ್ನಲಾಗಿದ್ದು ಬಾಲಕಿಗೆ ಪರಿಚಯವಿದ್ದ ಯುವಕನೇ ಕರೆದೊಯ್ದಿದ್ದು ಬಾಲಕಿ ಆತನ ಹೆಸರು ತಿಳಿಯಲಿಲ್ಲ ಎಂದು ಮನೆಯವರಲ್ಲಿ ಹೇಳಿಕೊಂಡಿದ್ದಾಳೆ ಎನ್ನಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಮತ್ತು ತಾಯಿಯ ವಿಚಾರಣೆ ಬಳಿಕ ಘಟನೆ ಸತ್ಯಾಂಶ ಹೊರಬರಲಿದೆ.