ಮಂಗಳೂರು: ಉರ್ವಾ ಶ್ರೀ ಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ಹಾಗೂ ಬೈಕಂಪಾಡಿ ಮೊಗವೀರ ಸಭಾದ ಮುಖಂಡ ಗಂಗಾಧರ ಪಾಂಗಳ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸತೀಶ್ ಬೈಕಂಪಾಡಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ಸತೀಶ್ ಬೈಕಂಪಾಡಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ನನ್ನ ಮೇಲೆ ದ್ವೇಷ ಹೊಂದಿರುವ ಕೆಲ ವ್ಯಕ್ತಿಗಳು ನನ್ನ ಹೆಸರು ಹಾಳು ಮಾಡುವುದಕ್ಕಾಗಿ ಸುಳ್ಳು ಆರೋಪ ಮಾಡಿದ್ದಾರೆ ಹಾಗೂ ಈ ಕೊಲೆ ಕೇಸಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿ ನಿರೀಕ್ಷಣಾ ಜಾಮೀನು ಕೋರಿದ್ದರು.
ನ್ಯಾಯಾಲಯ ಆರೋಪಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು ಬಂಧನಕ್ಕೊಳಗಾಗಿರುವ ಹರೀಶ್ ಬೈಕಂಪಾಡಿ ಹಾಗೂ ಭಾಸ್ಕರ ಬೈಕಂಪಡಿಯನ್ನು ಕೂಡಾ ಜಾಮೀನಿನಲ್ಲಿ ಬಿಡುಗಡೆಗೊಳಿಸಲು ಆದೇಶಿಸಿದೆ.ಆರೋಪಿಗಳ ಪರವಾಗಿ ಹೈಕೋರ್ಟ್ನಲ್ಲಿ ನ್ಯಾಯವಾದಿ ಪಿ. ಪಿ. ಹೆಗ್ಡೆ ವಾದಿಸಿದ್ದರು.
ಘಟನೆ ವಿವರ :
ಬೈಕಂಪಾಡಿ ಮೊಗವೀರ ಸಭಾದ ಮುಖಂಡ ಗಂಗಾಧರ ಪಾಂಗಳ್ ಅವರು ಮೇ 14ರಂದು ರಾತ್ರಿ ಸ್ಕೂಟರ್ನಲ್ಲಿ ಹೋಗುತ್ತಿದ್ದಾಗ ಅವರ ಹಿಂದುಗಡೆಯಿಂದ ಬೊಲೆರೋ ಕಾರು ಅತೀ ವೇಗವಾಗಿ ಬಂದು ಡಿಕ್ಕಿ ಹೊಡೆಸಿದ್ದು, ಅದರ ಪರಿಣಾಮ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು . ಗಂಗಾಧರ ಪಾಂಗಾಳ ಮತ್ತು ಸತೀಶ್ ಬೈಕಂಪಾಡಿಯವರ ಮಧ್ಯೆ ಮೊಗವೀರ ಸಭಾದ ಆಡಳಿತ ವಿಚಾರದಲ್ಲಿ ಭಿನ್ನಾಭಿಪ್ರಾಯವಿತ್ತು. ಅದೇ ದ್ವೇಷದಿಂದ ಸತೀಶ್ ಬೈಕಂಪಾಡಿ ಮತ್ತವರ ಸಹೋದರರು ಸೇರಿಕೊಂಡು ಗಂಗಾಧರ ಪಾಂಗಾಳ ಅವರನ್ನು ವಾಹನ ಡಿಕ್ಕಿಗೊಳಿಸಿ ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ತನಿಖಾ ವೇಳೆ ಪೊಲೀಸರು ಅಪಘಾತ ಎಸಗಿದ ಬೊಲೆರೋ ಕಾರು ಹಾಗೂ ಚಾಲಕ ಪುಷ್ಪರಾಜ್ನನ್ನು ಬಂಧಿಸಿದ್ದರು. ಸತೀಶ್ ಬೈಕಂಪಾಡಿ ಬಂಧನಕ್ಕೆ ಸಿಗದೆ ತಲೆಮರೆಸಿಕೊಂಡಿದ್ದು, ಅವರ ಸಹೋದರರಾದ ಭಾಸ್ಕರ ಬೈಕಂಪಾಡಿ ಮತ್ತು ಹರೀಶ್ ಬೈಕಂಪಾಡಿಯವರನ್ನು ಪೊಲೀಸರು ಬಂಧಿಸಿದ್ದರು. ಸತೀಶ್ ಬೈಕಂಪಡಿ ಸುಪಾರಿ ನೀಡಿ ವಾಹನ ಡಿಕ್ಕಿ ಹೊಡೆಸಿ ಗಂಗಾಧರ ಬೈಕಂಪಾಡಿಯನ್ನು ಕೊಲೆ ಮಾಡಿಸಿದ್ದಾರೆ ಎಂದು ಆರೋಪಿಸಿ ಪೊಲೀಸರು ನ್ಯಾಯಾಲಯಕ್ಕೆ ಜಾರ್ಚ್ಶೀಟ್ ಸಲ್ಲಿಸಿದ್ದರು. ಅವರ ಬಂಧನಕ್ಕೆ ಮಂಗಳೂರು ಜೆಎಂಎಫ್ಸಿ ನ್ಯಾಯಾಲಯ ವಾರಂಟ್ ಹೊರಡಿಸಿತ್ತು ಹಾಗೂ ಬಂಧನಕ್ಕೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.
ಸ್ವಜಾತಿ ಭಾಂದವರಿಂದಲೇ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ :
ಐದು ತಿಂಗಳ ಹಿಂದೆ ಸಂಭವಿಸಿದ ಬೈಕಂಪಾಡಿಯ ಹದಿನಾಲ್ಕು ಪಟ್ಣ ಮೋಗವೀರ ಸಂಯುಕ್ತ ಸಭಾದ ಕ್ರೀಯಾಶೀಲ ಸಲಹೆಗಾರ ಗಂಗಾಧರ್ ಪಾಂಗಲ್ ಅವರ ಹತ್ಯೆಯ ಪ್ರಮುಖ ಅರೋಪಿ ಸತೀಶ್ ಬೈಕಂಪಾಡಿಯ ಶೀಘ್ರ ಬಂಧನಕ್ಕೆ ಅಗ್ರಹಿಸಿ ಮಂಗಳೂರು ಹದಿನಾಲ್ಕು ಪಟ್ಣ ಮೋಗವೀರ ಸಂಯುಕ್ತ ಸಭಾ, ಮಂಗಳೂರು ಏಳು ಪಟ್ಣ ಮೊಗವೀರ ಸಭಾ ಹಾಗೂ ಇನ್ನಿತರ ಸ್ವಜಾತಿ ಭಾಂದವರ ಸಂಘಟನೆಗಳ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿ ಎದುರು ಹಲವಾರು ಬಾರೀ ಪ್ರತಿಭಟನೆ ಮತ್ತು ಧರಣಿ ಸತ್ಯಾಗ್ರಹವನ್ನು ನಡೆಸಲಾಗಿತ್ತು.
