Uncategorized

ಪೊಲೀಸರು ಯಾವುದೇ ಒತ್ತಡಕ್ಕೊಳಗಾಗದೇ ಕರ್ತವ್ಯ ನಿರ್ವಹಿಸಬೇಕು: ನ್ಯಾ.ಸುಬ್ರಮಣ್ಯ

Pinterest LinkedIn Tumblr

ಉಡುಪಿ: ಪೊಲೀಸರು ಕರ್ತವ್ಯ ನಿರ್ವಹಣೆ ಸಮಯದಲ್ಲಿ ಯಾವುದೇ ಮಾನಸಿಕ ಮತ್ತು ದೈಹಿಕ ಒತ್ತಡಗಳಿಗೆ ಒಳಗಾಗದೆ ಕಾರ್ಯ ನಿರ್ವಹಿಸಬೇಕು. ಇದಕ್ಕಾಗಿ ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜೆ.ಎನ್.ಸುಬ್ರಮಣ್ಯ ಹೇಳಿದರು.

ಅವರು ಇಂದು, ಉಡುಪಿಯ ಚಂದು ಮೈದಾನದಲ್ಲಿ, ಉಡುಪಿ ಪೊಲೀಸ್ ತರಬೇತಿ ಶಾಲೆಯ 13 ನೇ ತಂಡದ ಸಶಸ್ತç ಪೊಲೀಸ್ ಕಾನ್ಸ್ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ, ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

ಪೊಲೀಸರು ಯಾವುದೇ ಒತ್ತಡ, ಪ್ರಲೋಭನೆಗಳಿಗೆ ಒಳಗಾಗದೇ ಸಂಯಮದಿAದ, ಕಾನೂನಿನಡಿಯಲ್ಲಿ, ಆತ್ಮಸಾಕ್ಷಿಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸುವಂತೆ ಹೇಳಿದ ಜಿಲ್ಲಾ ನ್ಯಾಯಾಧೀಶರು, ಸೇವಾವಧಿಯಲ್ಲಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ. ಉನ್ನತ ಗುರಿ ಇಟ್ಟುಕೊಂಡು ಪರಿಶ್ರಮದಿಂದ ಕಾರ್ಯನಿರ್ವಹಿಸಿ. ಬಿಡುವಿನ ವೇಳೆಯಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಪ್ರಯತ್ನಿಸುವಂತೆ ಪ್ರಶಿಕ್ಷಣಾರ್ಥಿಗಳಿಗೆ ತಿಳಿಸಿದರು.

ಉಡುಪಿ ಪೊಲೀಸ್ ತರಬೇತಿ ಶಾಲೆಯಲ್ಲಿ ನಡೆದ 13 ನೇ ತಂಡದಲ್ಲಿ 100 ಪ್ರಶಿಕ್ಷಣಾರ್ಥಿಗಳಿದ್ದು, ಅದರಲ್ಲಿ ಎಸ್.ಎಸ್.ಎಲ್.ಸಿ 4, ಪಿ.ಯು.ಸಿ 20, ಡಿಪ್ಲೋಮಾ 1, ಪದವೀಧರರು 49, ಸ್ನಾತಕ ಪದವೀಧರರು 8 ಮತ್ತು 18 ಮಂದಿ ಎಂಜಿನಿಯರಿಂಗ್ ವಿದ್ಯಾರ್ಹತೆ ಪಡೆದಿದ್ದು, ಇದರಲ್ಲಿ 11 ಮಂದಿ ಮಾಜಿ ಸೈನಿಕರು ಇದ್ದಾರೆ.

ತರಬೇತಿ ಅವಧಿಯಲ್ಲಿ ಹೊರಾಂಗಣ, ಗುರಿ ಅಭ್ಯಾಸ, ಒಳಾಂಗಣ ತರಬೇತಿಯಲ್ಲಿ ಉತ್ತಮ ಸಾಧನೆ ತೋರಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆಕಾಶ ಎನ್.ಎಸ್., ಡಿ.ಎ.ಆರ್ ಮಂಡ್ಯ ಜಿಲ್ಲೆ ಅವರು ಆಲ್‌ರೌಂಡರ್ ಪ್ರಶಸ್ತಿ ಪಡೆದರು. ಪ್ರಶಿಕ್ಷಣಾರ್ಥಿಗಳಿಂದ ಆಕರ್ಷಕ ಪೆರೇಡ್ ನಡೆಯಿತು. ನಂತರ ಪ್ರತಿಜ್ಞಾ ವಿಧಿ ಭೋಧಿಸಲಾಯಿತು.

ಉಡುಪಿಯಲ್ಲಿ ಇದುವರೆಗೆ ನಡೆದ ತರಬೇತಿಯಲ್ಲಿ 6 ಸಶಸ್ತ್ರ ಮೀಸಲು, 5 ಸಿವಿಲ್, 1 ರೈಲ್ವೆ ಮತ್ತು 1 ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ ತಂಡಗಳ ಒಟ್ಟು 1218 ಮಂದಿಗೆ ತರಬೇತಿ ನೀಡಲಾಗಿದೆ.

ಕಾರ್ಯಕ್ರಮದಲ್ಲಿ ಎಸ್ಪಿ ವಿಷ್ಣುವರ್ಧನ್ ಸ್ವಾಗತಿಸಿದರು. ಎಎಸ್ಪಿ ಸಿದ್ಧಲಿಂಗಪ್ಪ ವರದಿ ವಾಚನ ಮಾಡಿದರು. ಕುಂದಾಪುರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ್ ವಂದಿಸಿದರು. ಕರಾವಳಿ ಕಾವಲು ಪೊಲೀಸ್‌ನ ಉಪನಿರೀಕ್ಷಕ ಬಿ.ಮನಮೋಹನ ರಾವ್ ನಿರೂಪಿಸಿದರು. ಪ್ರಶಿಕ್ಷಣಾರ್ಥಿಗಳ ಪೋಷಕರು ಮತ್ತು ಕುಟುಂಬ ವರ್ಗದವರು ಉಪಸ್ಥಿತರಿದ್ದರು.

Comments are closed.