ಬೆಂಗಳೂರು: ಸಿನಿಮಾ ನಟನೆ ಜೊತೆ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ನಟಿಯರಾದ ತಾರಾ ಅನುರಾಧ ಹಾಗೂ ಶೃತಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಒಲಿದಿದೆ.
ಸಂಪುಟ ದರ್ಜೆ ಸ್ಥಾನಮಾನ ಹೊಂದಿರುವ ನಿಗಮ ಮಂಡಳಿ ಸ್ಥಾನಕ್ಕೆ ಇವರಿಬ್ಬರಬ್ಬನ್ನು ನೇಮಕ ಮಾಡಿ ಬಿಎಸ್ ಯಡಿಯೂರಪ್ಪ ಸರ್ಕಾರ ಆದೇಶ ಹೊರಡಿಸಿದೆ.
ನಟಿ ಶೃತಿ ಅವರನ್ನು ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಹಾಗೂ ತಾರಾ ಅನುರಾಧ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ವಿಧಾನಪರಿಷತ್ ಸದಸ್ಯೆಯಾಗಿರುವ ನಟಿ ತಾರಾ, ರಾಜಕೀಯ ಜೀವನ ಆರಂಭದಿಂದಲೂ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. ಇನ್ನು ನಟಿ ಶೃತಿಗೆ ಈ ಸ್ಥಾನ ಅದೃಷ್ಟದಂತೆ ಒಲಿದು ಬಂದಿದೆ.
ಬಿಜೆಪಿಯಲ್ಲಿ ಶಿಲ್ಪಾ ಗಣೇಶ್, ಮಾಳವಿಕಾ ಅವಿನಾಶ್, ಭಾವನಾ ರಾಮಣ್ಣ ಸೇರಿದಂತೆ ಅನೇಕ ತಾರಾನಟಿಯರ ದಂಡೇ ಇದೆ.
ಇನ್ನು ಉಪಚುನಾವಣೆಗೆ ಮುನ್ನ ಪಕ್ಷದೊಳಗೆ ಎದ್ದಿದ್ದ ಅಸಮಾಧಾನ ಹೋಗಲಾಡಿಸಲು ನಿಗಮ-ಮಂಡಳಿ ಸ್ಥಾನಗಳನ್ನು ಗಾಳವಾಗಿ ಬಳಸಿಕೊಂಡಿದ್ದ ಸಿಎಂ ಬಿಎಸ್ ಯಡಿಯೂರಪ್ಪ 8 ಜನ ಅತೃಪ್ತರಿಗೆ ಅಧ್ಯಕ್ಷ ಸ್ಥಾನ ನೀಡಿದ್ದರು.
Comments are closed.