Uncategorized

‘ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ – ಬಹ್ರೈನ್’ನ ಚೊಚ್ಚಲ ಆಡಳಿತ ಮಂಡಳಿಯ ರಚನೆ

Pinterest LinkedIn Tumblr

ಕುಳಿತವರು [ಎಡದಿಂದ]: ಹೇಮಾ ರಾಘವೇಂದ್ರ [ಆಂತರಿಕ ಲೆಕ್ಕಪರಿಶೋಧಕರು], ಲೋಲಾಕ್ಷಿ ರಾಜಾರಾಮ್ [ಖಜಾಂಚಿ], ಸುಜ್ಯೋತಿ ಜೆ. ಶೆಟ್ಟಿ [ಪ್ರಧಾನ ಕಾರ್ಯದರ್ಶಿ], ಲೀಲಾಧರ್ ಬೈಕಂಪಾಡಿ [ಅಧ್ಯಕ್ಷರು] ಹಾಗೂ ಸಮಾಜ ಕಲ್ಯಾಣ ಸಂಯೋಜಕರಾದ ವಿನ್ಸೆಂಟ್ ಸಿಕ್ವೇರ ಮತ್ತು ವಿಟ್ಲ ಜಮಾಲುದ್ದೀನ್.

ಮನಾಮ, ಬಹ್ರೈನ್: ಕೊಲ್ಲಿಯ ದ್ವೀಪರಾಷ್ಟ್ರ ಬಹ್ರೈನ್ನಲ್ಲಿ ಉದ್ಯೋಗ ನಿಮಿತ್ತ ವಾಸ್ತವ್ಯವಿರುವ ಸಮಸ್ತ ಅನಿವಾಸಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುವ ಮತ್ತು ಅವರ ಕಲ್ಯಾಣಕ್ಕಾಗಿ ಶ್ರಮಿಸುವ ಸದುದ್ದೇಶದಿಂದ ನೂತನವಾಗಿ ಸ್ಥಾಪಿತವಾದ ‘ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ – ಬಹ್ರೈನ್’ ಇದರ ಚೊಚ್ಚಲ ಆಡಳಿತ ಮಂಡಳಿಗೆ ಇತ್ತೀಚೆಗೆ ಆಯ್ಕೆಯು ನಡೆದಿದ್ದು, ಸ್ಥಳೀಯ ಅನಿವಾಸಿ ಸಮುದಾಯದ ವಿವಿಧ ಜಾತಿ – ಮತ – ಧರ್ಮಗಳ ಸಾಮಾಜಿಕ ಸಂವೇದನೆಯುಳ್ಳ ಈ ಕೆಳಗಿನ ಕ್ರಿಯಾಶೀಲ ಕನ್ನಡಿಗರು ಇದರ ನವ ಪದಾಧಿಕಾರಿಗಳಾಗಿ ನಿಯುಕ್ತಿಗೊಂಡಿದ್ದಾರೆ.

ಅಂತೆಯೇ ನಿಂತವರು [ಎಡದಿಂದ]: ಸಮಾಜ ಕಲ್ಯಾಣ ಸಂಯೋಜಕರಾದ ಜಗದೀಶ್ ಆಚಾರ್, ಗಣೇಶ್ ಮಾಣಿಲ, ಆರ್. ಎಂ. ಪಾಟೀಲ್, ಸುರೇಂದ್ರ ಉದ್ಯಾವರ, ನಿತಿನ್ ಶೆಟ್ಟಿ, ಸ್ಟ್ಯಾನಿ ಡಿ’ಸೋಜಾ ಮತ್ತು ಉಮ್ಮರ್ ಸಾಹೇಬ್.

ಕರ್ನಾಟಕ ಸರಕಾರದ ಅಂಗವಾಗಿರುವ ‘ಅನಿವಾಸಿ ಭಾರತೀಯ ಸಮಿತಿ – ಕರ್ನಾಟಕ’ ಈ ಇಲಾಖೆಯ ಆಶ್ರಯದಲ್ಲಿದ್ದುಕೊಂಡು, ಸದ್ರಿ ಇಲಾಖೆಯು ಹೊರತಂದಿರುವ ‘ಅನಿವಾಸಿ ಭಾರತೀಯ ನೀತಿಸಂಹಿತೆ’ಯನ್ವಯ ಬಹ್ರೈನ್ ನೆಲದಲ್ಲಿ ಸೇವೆಯೆಸಗಲಿರುವ ‘ಅನಿವಾಸಿ ಭಾರತೀಯ ಸಮಿತಿ – ಬಹ್ರೈನ್’ ಇದರ ಸ್ಥಾಪನೆಯನ್ನು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಮಾಜಸೇವಾ ಕಾರ್ಯಕರ್ತ ತಥಾ ಯಶಸ್ವಿ ಯುವ ಸಂಘಟಕ ಲೀಲಾಧರ್ ಬೈಕಂಪಾಡಿಯವರು ಇತ್ತೀಚೆಗೆ ಗೈದಿರುತ್ತಾರೆ.

ಇದಕ್ಕೆ ಮೊದಲು ಕರ್ನಾಟಕದ ಮೂಲ ಇಲಾಖೆಯು ಲೀಲಾಧರ್ ಬೈಕಂಪಾಡಿಯವರನ್ನು ಸಂಭಾವ್ಯ ಬಹ್ರೈನ್ ಸಮಿತಿಗೆ ಮುಖ್ಯಸ್ಥರನ್ನಾಗಿ ಅಧಿಕೃತವಾಗಿ ನಿಯೋಜಿತಗೊಳಿಸಿರುತ್ತದೆ. ಆ ಪ್ರಕಾರ ಈ ನೂತನ ಸಂಸ್ಥೆಯ ಚೊಚ್ಚಲ ಆಡಳಿತ ಮಂಡಳಿಗೆ ಲೀಲಾಧರ್ ಬೈಕಂಪಾಡಿಯವರ ಮೂಲಕವೇ ಸ್ಥಳೀಯ ಕನ್ನಡಿಗರ ನೇಮಕಾತಿಯು ನಡೆದಿರುತ್ತದೆ.

ಬಹ್ರೈನ್ನಾದ್ಯಂತ ಸುಮಾರು 16 ವಿವಿಧ ಕನ್ನಡ ಪರ ಮತ್ತು ಇತರ ಸಾಮುದಾಯಿಕ ಸಂಘಟನೆಗಳಲ್ಲಿ ವಿಭಜಿತರಾಗಿರುವ ಹಾಗೂ ಯಾವುದೇ ಸಂಘಟನೆಯಲ್ಲೂ ಇರದೆ ಇನ್ನೂ ಅಸಂಘಟಿತ ಸ್ವರೂಪದಲ್ಲೇ ಇರುವ ಸಮಸ್ತ ಅನಿವಾಸಿ ಕನ್ನಡಿಗರನ್ನು ಏಕಛತ್ರದಡಿ ಸಂಘಟಿಸಿ, ಅವರೆಲ್ಲರ ಶ್ರೇಯೋಭಿವೃದ್ಧಿಗಾಗಿ ಅಹರ್ನಿಶಿ ದುಡಿಯಲಿರುವ ಮತ್ತು ಮೂಲ ಇಲಾಖೆಯ ಮೂಲಕ ಅನಿವಾಸಿಯರಿಗೆ ಲಭ್ಯವಿರುವ ಯೋಜನೆಗಳ ಫಲಾನುಭವಿಗಳಾಗುವಂತೆ ಕಾರ್ಯವೆಸಗಲಿರುವ ಬಹ್ರೈನ್ನ ಈ ಅನಿವಾಸಿ ಭಾರತೀಯ ಸಮಿತಿಯು ಒಂದು ಜಾತ್ಯಾತೀತ ನೆಲೆಯ ಶ್ರೇಷ್ಠ ಸೇವಾ ಸಂಘಟನೆಯಾಗಿದೆ. ಅಲ್ಲದೆ ಇದು ಬಹ್ರೈನ್ನ ಅನಿವಾಸಿ ಕನ್ನಡಿಗರೆಲ್ಲರಿಗೆ ಒಂದು ಮಾತೃಸಂಸ್ಥೆಯಾಗಿಯೂ ನೆಲೆನಿಂತು ಕರ್ನಾಟಕ ಸರಕಾರದ ನಿಯಮಾವಳಿ, ನಿರ್ದೇಶನ ಮತ್ತು ಬೆಂಬಲದಂತೆ ವಿದೇಶಿ ನೆಲದಲ್ಲಿ ಸಮಸ್ತ ಅನಿವಾಸಿಯರ ಸೇವೆಯನ್ನು ಗೈಯಲಿರುವ ಕನ್ನಡಿಗರ ಅತ್ಯಂತ ಪ್ರತಿಷ್ಠಿತ ಸಂಸ್ಥೆ ಎಂಬ ಹಿರಿಮೆಗೂ ಪಾತ್ರವಾಗಲಿದೆ.

ಏತನ್ಮಧ್ಯೆ, ಬಹ್ರೈನ್ನ ಅನಿವಾಸಿ ಕನ್ನಡಿಗರ ಬದುಕಿಗೆ ಮಾರ್ಗದರ್ಶಿಯಾಗಲಿರುವ ಈ ನೂತನ ಸಂಸ್ಥೆ ಮತ್ತದರ ಚೊಚ್ಚಲ ಆಡಳಿತ ಸಮಿತಿಯನ್ನು ಸಮಸ್ತ ಅನಿವಾಸಿ ಸಮುದಾಯಕ್ಕೆ ಪರಿಚಯಿಸುವ ನಿಟ್ಟಿನಿಂದಲೂ ಹಾಗೂ ಅನಿವಾಸಿಯರಿಗಾಗಿ ಪ್ರಸ್ತುತ ಲಭ್ಯವಿರುವ ರಾಜ್ಯ ಸರಕಾರದ ಸಮಗ್ರ ಯೋಜನೆಗಳ ಬಗ್ಗೆ ಸಂಪೂರ್ಣ  ಮಾಹಿತಿಯನ್ನು ನೀಡುವ ಉದ್ದೇಶದಿಂದಲೂ ಈ ಸಂಸ್ಥೆಯು ತಾಯ್ನಾಡಿನ ನಾಡು – ನುಡಿ, ಕಲೆ – ಸಾಹಿತ್ಯ, ಸಂಸ್ಕೃತಿ – ಪರಂಪರೆಯನ್ನು ಬಿಂಬಿಸುವ  ‘ಕನ್ನಡ ಡಿಂಡಿಮ’ ಎಂಬ ಬೃಹತ್ ಸಾಂಸ್ಕೃತಿಕ ಉತ್ಸವವನ್ನು ಈಗಾಗಲೇ ಯೋಜಿಸಿದ್ದು, ಅದು ಅಕ್ಟೋಬರ್ ತಿಂಗಳ 12 ರಂದು ಸ್ಥಳೀಯ ಇಂಡಿಯನ್ ಕ್ಲಬ್ ಸಭಾಂಗಣದಲ್ಲಿ ಅದ್ದೂರಿಯಾಗಿ ಜರಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಲೀಲಾಧರ್ ಬೈಕಂಪಾಡಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.