Uncategorized

ಬೈಕ್ ಅಪಘಾತಕ್ಕೆ ನಿವೃತ್ತ ಹೆಡ್‌ಮಾಸ್ಟರ್ ಬಲಿ

Pinterest LinkedIn Tumblr


ಬೆಂಗಳೂರು, ಜ. ೨೮- ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿಯನ್ನು ನೋಡಲು ರಸ್ತೆ ದಾಟುತ್ತಿದ್ದ ನಿವೃತ್ತ ಮುಖ್ಯೋಪಾಧ್ಯಾಯ ರಾಯಪ್ಪ ಅವರು ಬೈಕ್ ಡಿಕ್ಕಿ ಹೊಡೆದು ಮೃತಪಟ್ಟಿರುವ ದುರ್ಘಟನೆ ಕಿದ್ವಾಯಿ ಆಸ್ಪತ್ರೆ ಬಳಿ ನಿನ್ನೆ ರಾತ್ರಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ರಾಯಪ್ಪ (63) ಅವರು ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪತ್ನಿಯನ್ನು ನೋಡಿಕೊಳ್ಳಲು ರಾತ್ರಿ 7.30ರ ವೇಳೆ ನಿಮ್ಹಾನ್ಸ್ ಆಸ್ಪತ್ರೆ ಬಳಿ ಬಸ್ ಇಳಿದು ಸ್ವಲ್ಪ ಮುಂದೆ ಹೋಗಿ ರಸ್ತೆ ದಾಟುತ್ತಿದ್ದರು.
ಈ ವೇಳೆ ಡೈರಿ ವೃತ್ತದ ಕಡೆಯಿಂದ ವೇಗವಾಗಿ ಬಂದ ಬೈಕ್ ಸವಾರ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಗಂಭೀರವಾಗಿ ಗಾಯಗೊಂಡ ರಾಯಪ್ಪ ಅವರನ್ನು ಕೂಡಲೇ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಪ್ರಕರಣ ದಾಖಲಿಸಿರುವ ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಇನ್ಸ್‌ಪೆಕ್ಟರ್ ಮೀನಾಕ್ಷಿ ಅವರು ಪರಾರಿಯಾಗಿರುವ ಬೈಕ್ ಸವಾರಿನಿಗಾಗಿ ಶೋಧ ನಡೆಸಿದ್ದಾರೆ.

ಮೂರು ಕಡೆ ಮನೆ ಕಳವು ಲಕ್ಷಾಂತರ ಲೂಟಿ
ಬೆಂಗಳೂರು, ಜ. ೨೮- ಖಾಸಗಿ ಕಂಪನಿಯೊಂದರ ಉದ್ಯೋಗಿಯೊಬ್ಬರ ಮನೆಯ ಮಹಡಿಯ ಶೀಟ್ ಮುರಿದು ಒಳ ನುಗ್ಗಿರುವ ದುಷ್ಕರ್ಮಿಗಳು ನಗದು ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿರುವ ದುರ್ಘಟನೆ ಜಯನಗರದ 2ನೇ ಬ್ಲಾಕ್‌ನಲ್ಲಿ ನಡೆದಿದೆ.
ಜಯನಗರದ 2 ಬ್ಲಾಕ್‌ನ ಗಣೇಶ್ ಮಂದಿರದಲ್ಲಿನ ಮನೆಗೆ ಬೀಗ ಹಾಕಿಕೊಂಡು ನಿನ್ನೆ ರಾತ್ರಿ ಕೆಲಸಕ್ಕೆ ಹೋಗಿದ್ದ ಚೈತ್ರಾ ಅವರು ಕೆಲಸ ಮುಗಿಸಿಕೊಂಡು ಮುಂಜಾನೆ ವಾಪಸ್ಸಾಗಿದ್ದಾರೆ.
ಅಷ್ಟರಲ್ಲಿ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು ನಗದು ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದು, ದೂರು ದಾಖಲಿಸಿಕೊಂಡಿರುವ ಸುಬ್ರಮಣ್ಯಪುರ ಪೊಲೀಸರು ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಅಪಾರ್ಟ್‌ಮೆಂಟ್‌ನಲ್ಲಿ ಕಳವು
ನಾಗರಭಾವಿಯ ಗ್ರೀನ್ ವಿಲ್ಲಾ ಅಪಾರ್ಟ್‌ಮೆಂಟ್‌ನ ಮನೆಯೊಂದರಲ್ಲಿ ವಾಸಿಸುತ್ತಿದ್ದ ದಕ್ಷಿಣಮೂರ್ತಿಯವರು ಕುಟುಂಬ ಸಮೇತ ಕಳೆದ ಜ. 20 ರಂದು ಕೆಲಸದ ಮೇಲೆ ಹೋಗಿ ನಿನ್ನೆ ಮಧ್ಯಾಹ್ನ ವಾಪಸ್ಸಾಗುವಷ್ಟರಲ್ಲಿ ಅವರ ಮನೆಯ ಮುಂಬಾಗಿಲು ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿರುವ ಚಂದ್ರಾಲೇಔಟ್ ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದು, ಕಳ್ಳತನವಾಗಿರುವ ವಸ್ತುಗಳ ಮೌಲ್ಯ ಸದ್ಯಕ್ಕೆ ತಿಳಿದುಬಂದಿಲ್ಲ.
ಮನೆ ಕಳವು
ಈಜಿಪುರದ 5ನೇ ಕ್ರಾಸ್‌ನ ಖಾಸಗಿ ಕಂಪನಿಯ ಉದ್ಯೋಗಿ ಮೇರಿ ದೀಪಾ ಅವರ ಮನೆಗೆ ನುಗ್ಗಿರುವ ದುಷ್ಕರ್ಮಿಗಳು 20 ಸಾವಿರ ನಗದು, 100 ಗ್ರಾಂ ಚಿನ್ನಾಭರಣ ಸೇರಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.
ಮೇರಿ ದೀಪಾ ಅವರು ನಿನ್ನೆ ಬೆಳಿಗ್ಗೆ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆ ಹೋಗಿ ರಾತ್ರಿ ವಾಪಸ್ ಬರುವಷ್ಟರಲ್ಲಿ ಕಳ್ಳತನ ನಡೆದಿದ್ದು, ಪ್ರಕರಣ ದಾಖಲಿಸಿರುವ ವಿವೇಕ್ ನಗರ ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ನಡೆಸಿದ್ದಾರೆ.

ಕಾರು-ಆಟೋ ಡಿಕ್ಕಿ: ವ್ಯಕ್ತಿ ಸಾವು
ಕುಣಿಗಲ್, ಜ. ೨೮- ಕಾರು ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಆಟೋ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಗವಿಮಠದ ಬಳಿ ಕಳೆದ ರಾತ್ರಿ ನಡೆದಿದೆ.
ಮೃತಪಟ್ಟಿರುವ ವ್ಯಕ್ತಿಯನ್ನು ಬೆಂಗಳೂರು ಮೂಲದ ಆಟೋ ಚಾಲಕ ಶ್ರೀನಿವಾಸ್ (35) ಎಂದು ಗುರುತಿಸಲಾಗಿದೆ. ರಾತ್ರಿ ಆಟೋ ಗವಿಮಠದ ಬಳಿ ಬರುತ್ತಿದ್ದಾಗ ವೇಗವಾಗಿ ಎದುರಿಗೆ ಬಂದ ಕಾರು ಮುಖಾಮುಖಿಯಾಗಿ ಅಪ್ಪಳಿಸಿದ್ದರಿಂದ ಈ ದುರ್ಘಟನೆ ಸಂಭವಿಸಿದೆ.
ಈ ಸಂಬಂಧ ಕುಣಿಗಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

ದೇವಾಲಯದಲ್ಲಿ ಹುಂಡಿ ಕಳವು
ತುಮಕೂರು, ಜ. ೨೮- ದೇವಾಲಯವೊಂದರ ಗ್ರಿಲ್ ಮೀಟಿ ಒಳನುಗ್ಗಿರುವ ಕಳ್ಳರು ಹುಂಡಿ ದೋಚಿಕೊಂಡು ಪರಾರಿಯಾಗಿರುವ ಘಟನೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹುಲಿಯೂರುದುರ್ಗ ಹೋಬಳಿಯ ಬೆನ್ನವಾರ ಕೊಪ್ಪಲು ಗ್ರಾಮದ ಅರಿವಿನ ಮಾರಮ್ಮ ದೇವಾಲಯದಲ್ಲಿ ಈ ಕೃತ್ಯ ನಡೆದಿದೆ. ಮಧ್ಯರಾತ್ರಿ ಕಳ್ಳರು ದೇವಾಲಯದ ಗ್ರಿಲ್ ಮೀಟಿ ಒಳನುಗ್ಗಿದ್ದು, ಹುಂಡಿ ಒ‌ಡೆದು ಅದರಲ್ಲಿ ಹಣವನ್ನು ಕಳವು ಮಾಡಿದ್ದಾರೆ.
ನಂತರ ಪಕ್ಕದಲ್ಲೇ ಇದ್ದ ಸೆಣಬ ಗದ್ದೆ ಹುಚ್ಚಮ್ಮ ದೇವಾಲಯಕ್ಕೆ ನುಗ್ಗಿ ಕಳ್ಳತನ ಮಾಡಲು ಯತ್ನಿಸುತ್ತಿದ್ದಾಗ ಗ್ರಾಮಸ್ಥರು ಕೈ ಕಳ್ಳರು ಸಿಕ್ಕಿ ಬಿದ್ದು ಧರ್ಮದೇಟು ತಿಂದಿದ್ದಾರೆನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹುಲಿಯೂರುದುರ್ಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಜರುಗಿಸುತ್ತಿದ್ದಾರೆ.

FacebookGoogle+WhatsAppGoogle GmailShare

Comments are closed.