ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಅವಕಾಶ ಸಿಗದೇ ಆತ್ಮಹತ್ಯೆಗೆ ಯತ್ನಿಸಿದ್ದ ಕೊರಟಗೆರೆಯ ವಿದ್ಯಾರ್ಥಿನಿ ಗ್ರೀಷ್ಮಾ ಇದೀಗ ಪೂರಕ ಪರೀಕ್ಷೆಯಲ್ಲಿ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಮೂಡಬಿದಿರೆಯ ಆಳ್ವಾಸ್ ಶಾಲೆಯಲ್ಲಿ ಪರೀಕ್ಷೆ ಬರೆದಿದ್ದ ತುಮಕೂರಿನ ಕೊರಟಗೆರೆಯ ನರಸಿಂಹಮೂರ್ತಿ ಮತ್ತು ಪದ್ಮಾವತಿ ದಂಪತಿಯ ಮಗಳು ಗ್ರೀಷ್ಮಾ 625ಕ್ಕೆ 599 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಮೂಡಬಿದಿರೆಯ ಆಳ್ವಾಸ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಗ್ರೀಷ್ಮಾ 9ನೇ ತರಗತಿಯಲ್ಲಿ ಶೇ.96ರಷ್ಟು ಅಂಕ ಪಡೆದಿದ್ದರು. ಬಳಿಕ ಲಾಕ್ಡೌನ್ ಹಿನ್ನೆಲೆ ಮನೆಗೆ ವಾಪಸ್ ಆಗಿದ್ದರು. 9ನೇ ತರಗತಿಯಲ್ಲಿ ಬಾಕಿಯಿದ್ದ ಶುಲ್ಕ ಪಾವತಿಸದಿದ್ದಕ್ಕೆ 10ನೇ ತರಗತಿ ಪ್ರವೇಶಕ್ಕೆ ಅವಕಾಶ ಕಲ್ಪಿಸಿರಲಿಲ್ಲ. ಇದರಿಂದ ನೊಂದು ಗ್ರೀಷ್ಮಾಆತ್ಮಹತ್ಯೆಗೆ ಯತ್ನಿಸಿದ್ದರು. ಬಳಿಕ ಅಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್ ನೀಡಿದ್ದ ಭರವಸೆಯಿಂದ ಆತ್ಮಹತ್ಯೆ ಯೋಚನೆ ಬಿಟ್ಟು ಇದೀಗ ರಾಜ್ಯಕ್ಕೆ ಮಾದರಿಯಾಗಿದ್ದಾಳೆ.
ಸುರೇಶ್ ಕುಮಾರ್ ಸಂತಸ
ಗ್ರೀಷ್ಮಾ ಪ್ರಥಮ ಸ್ಥಾನ ಬಂದಿರುವುದಕ್ಕೆ ಸಾಮಾಜಿಕ ಜಾಲತಾಣಗಳ ಸಂತಸ ವ್ಯಕ್ತಪಡಿಸಿರುವ ಸುರೇಶ್ ಕುಮಾರ್, ಅತ್ಯಂತ ಸಮಾಧಾನ ತಂದ ಸುದ್ದಿ ಇದು. ಸಂತಸವೂ ಆಗುತ್ತಿದೆ. ಅಂದು ಏನೋ ತಪ್ಪಿಂದ ಗ್ರೀಷ್ಮಾ ಗೆ ಎಸೆಸೆಲ್ಸಿ ಪರೀಕ್ಷೆಯ ಹಾಲ್ ಟಿಕೆಟ್ ದೊರಕಿರಲಿಲ್ಲ. (ಹತ್ತನೆಯ ತರಗತಿಗೆ ವಿದ್ಯಾರ್ಥಿನಿಯ ದಾಖಲಾತಿಯೇ ಆಗಿರಲಿಲ್ಲ) ತೀವ್ರವಾಗಿ ನೊಂದ ಗ್ರೀಷ್ಮಾ ಪರೀಕ್ಷೆಯ ಒಂದು ಅನಾಹುತಕ್ಕೆ ಕೈ ಹಾಕಿದ್ದಳು. ಸುದ್ದಿ ತಿಳಿದ ತಕ್ಷಣ 17.7.2021, ಶನಿವಾರ ಮುಂಜಾನೆಯೇ ನಾನು ಕೊರಟಗೆರೆಯ ಗ್ರೀಷ್ಮಾಳ ಮನೆಗೆ ಧಾವಿಸಿದೆ. (19 ರಿಂದ ಪರೀಕ್ಷೆ) ಅವಳನ್ನು ಪಕ್ಕದಲ್ಲಿ ಕೂಡಿಸಿಕೊಂಡು ಧೈರ್ಯ ಹೇಳಿದೆ. ನಿನ್ನನ್ನು ಎಸೆಸೆಲ್ಸಿ ಪೂರಕ ಪರೀಕ್ಷೆಗೆ ಕೂಡಿಸುವ ಜವಾಬ್ದಾರಿ ನನ್ನದು ಚಿಂತೆ ಇಲ್ಲದೆ ಸಿದ್ಧಳಾಗು, ಎಂದಿದ್ದೆ.
ನಂತರ ನನ್ನ ಶಿಕ್ಷಣ ಸಚಿವ ಸ್ಥಾನ ಹೋದ ನಂತರವೂ ಆಯುಕ್ತರು, ಎಸ್ಎಸ್ಎಲ್ಸಿ ಮಂಡಳಿ ನಿರ್ದೇಶಕರು, ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರು ಹಾಗೂ ಆಳ್ವಾಸ್ ಸಂಸ್ಥೆಯ ಮುಖ್ಯಸ್ಥರ ಜೊತೆ ನಿರಂತರ ಸಂಪರ್ಕವಿಟ್ಟುಕೊಂಡು ಗ್ರೀಷ್ಮಾಳನ್ನು SSLC ಪೂರಕ ಪರೀಕ್ಷೆಯಲ್ಲಿ ಅವಕಾಶ ಕೊಡಿಸುವುದರಲ್ಲಿ ಯಶಸ್ವಿಯಾದೆ. ಇಂದು ಫಲಿತಾಂಶ ತಿಳಿದಾಗ ನಿರಾಳವಾಯಿತು ನನ್ನ ಮನ. ಇಂದು ಮೊದಲನೇ Rank ಪಡೆದಿರುವ ಕು. ಗ್ರೀಷ್ಮಳಿಗೆ ಹಾರ್ದಿಕ ಅಭಿನಂದನೆಗಳು. (625 ಕ್ಕೆ 599 ಅಂಕಗಳು) ಗ್ರೀಷ್ಮಾ ನೀನು ಹಿಡಿದ ಛಲ ಬಿಡಲಿಲ್ಲ. ಸಾಧಿಸಿ ತೋರಿಸಿದೆ. ನೀನೊಂದು ಉತ್ತಮ ಉದಾಹರಣೆ ರಾಜ್ಯದ ಮಕ್ಕಳಿಗೆ. ನಿನ್ನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಿದ್ದಾರೆ.
Comments are closed.