ಕುಂದಾಪುರ: ಕುಂದಾಪುರ ತಾಲೂಕು ಹಕ್ಲಾಡಿ ಗ್ರಾಮ ಯಳೂರು ಮಕ್ಕಿಮನೆ ದಿವಂಗತ ಚಿಕ್ಕಮ್ಮ ಶೆಡ್ತಿ ಹಾಗೂ ಮಹಾಬಲ ಶೆಟ್ಟಿ ದಂಪತಿ ಪುತ್ರ ಮಂಜುನಾಥ ಶೆಟ್ಟಿ ಸೈನ್ಯಕ್ಕೆ ಆಯ್ಕೆಯಾಗಿದ್ದು ಸದ್ಯ ಗೋವಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಚಿಕ್ಕಂದಿನಿಂದ ಕೈತುತ್ತು ನೀಡಿ, ಸಾಕಿ ಬೆಳೆಸಿದ ಮೊಮ್ಮಗ ಯೋಧನಾಗುತ್ತಿದ್ದು ಒಂದೆರಡು ದಿನದಲ್ಲಿ ತರಬೇತಿ ಮುಗಿಸಿ ಮನೆಗೆ ಬರಲಿರುವ ಮೊಮ್ಮಗನ ನಿರೀಕ್ಷೆಯಲ್ಲಿ ಹಾಗೂ ಬರಮಾಡಿಕೊಳ್ಳಲು ಅಜ್ಜಿ ನೀಲಮ್ಮ ಶೆಟ್ಟಿ ಹಾತೊರೆಯುತ್ತಿದ್ದಾರೆ.
ಮಂಜುನಾಥ ಪದವೀಧರನಾಗಿದ್ದು, ಶಿವಮೊಗ್ಗದಲ್ಲಿ ಫಾರ್ಮಾಸಿಸ್ಟ್ ವ್ಯಾಸಂಗ ಮಾಡಿದ್ದಾರೆ. ಅರಣ್ಯ, ಫಾರ್ಮಸಿಟ್, ಬ್ಯಾಂಕಿಂಗ್ ಪರೀಕ್ಷೆ ಬರೆದಿದ್ದು, ಅದಲ್ಲವನ್ನೂ ಬಿಟ್ಟು ಸೈನಿಕ ಪರೀಕ್ಷೆಗೆ ಹಾಜರಾಗಿ, ಆಯ್ಕೆ ಆಗಿದ್ದಾರೆ. ಪ್ರಸಕ್ತ ಗೋವಾದಲ್ಲಿ ತರಬೇತಿ ಮುಗಿಸಿದ್ದು, ಶನಿವಾರ ಊರಿಗೆ ಬರುವ ಹಿನ್ನೆಯಲ್ಲಿ ಊರಮಗನ ಅಭಿಮಾನದಿಂದ ಯಳೂರು ದುರ್ಗಾ ಫ್ರೆಂಡ್ಸ್ ಹಾಕಿದ ಸ್ವಾಗತ ಬ್ಯಾನರ್ ಅನ್ನು ದಿನನಿತ್ಯವು ಸ್ವಚ್ಛ ಮಾಡುವ ಮೂಲಕ ಯೋಧನ ಅಜ್ಜಿ ಮೊಮ್ಮಗನ ಮೇಲಿನ ಪ್ರೀತಿ, ಯೋಧನೆಂಬ ಗೌರವ ತೋರುತ್ತಿದ್ದಾರೆ. ಜಾಲತಾಣದಲ್ಲಿ ಅಜ್ಜಿ ಬ್ಯಾನರ್ ಸ್ವಚ್ಛ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಯುವಕರಿಗೆ ಮಂಜುನಾಥ್ ಪ್ರೇರಣೆಯಾಗಲಿ….
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಯುವಕರು ಸೈನ್ಯ ಸೇರಲು ಹಿಂದೇಟು ಹಾಕುತ್ತಿದ್ದು, ಮಂಜುನಾಥ ಸೈನ್ಯ ಪ್ರವೇಶ ಇನ್ನಷ್ಟು ಯುವಕರು ದೇಶ ಸೇವೆಗೆ ಅಣಿಯಾಗಲು ಪ್ರೇರಣೆ ಆಗಬೇಕಿದೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.