ಕರಾವಳಿ

ಉಡುಪಿಯಲ್ಲಿ ‘ಸಂಜೀವಿನಿ ಸಂತೆ ಮತ್ತು ಸಾಂಸ್ಕೃತಿಕ ಕಲರವ’..!

Pinterest LinkedIn Tumblr

ಉಡುಪಿ: ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸರಕಾರ ಹೆಚ್ಚಿನ ಒತ್ತು ನೀಡುತ್ತಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳಿಂದ ಮಹಿಳೆಯರಿಗೆ ಮತ್ತಷ್ಟು ಸ್ಫೂರ್ತಿ ಸಿಗಲು ಸಾಧ್ಯ ಎಂದು ಉಡುಪಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್.ಹೇಳಿದರು.

ಉಡುಪಿ ಬನ್ನಂಜೆಯ ಬಾಲಭವನ ಬಯಲು ರಂಗಮಂದಿರದಲ್ಲಿ ರವಿವಾರದಂದು ಜಿಲ್ಲಾಪಂಚಾಯತ್, ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಂಜೀವಿನಿ, ಲಿಂಗತ್ವ ಆಧಾರಿತ ದೌರ್ಜನ್ಯ ವಿಮೋಚನ ಅಭಿಯಾನದ ಪ್ರಯುಕ್ತ ಜಿಲ್ಲಾ ಮಟ್ಟದ ಸ್ಪರ್ಧಾ ಕೂಟವಾದ ‘ಸಂಜೀವಿನಿ ಸಂತೆ ಮತ್ತು ಸಾಂಸ್ಕೃತಿಕ ಕಲರವ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯ 86 ಸಾವಿರ ಮಂದಿ ಮಹಿಳೆಯರು ಸಂಜೀವಿನಿಯ ಸದಸ್ಯರಾಗಿದ್ದಾರೆ. 155 ಪಂಚಾಯತ್‌ಗಳಲ್ಲಿಯೂ ಇದು ಸಕ್ರಿಯವಾಗಿ ಕಾರ್ಯಚರಿಸುತ್ತಿದೆ. ನಮ್ಮ ಮನೆ ಹಾಗೂ ಸುತ್ತಮುತ್ತಲು ಬೆಳೆದ ಆಹಾರೋತ್ಪನ್ನಗಳನ್ನು ಸೇವಿಸುವುದರಿಂದ ಉತ್ತಮ ಆರೋಗ್ಯ ಹಾಗೂ ಸ್ಥಳೀಯವಾಗಿ ಉದ್ಯೋಗಾವಕಾಶ ಸಿಗಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಪ್ರಯತ್ನಶೀಲರಾಗಬೇಕು ಎಂದರು.

ಕಾಂತಾರ ಚಲನಚಿತ್ರದ ಪೋಷಕ ನಟಿ ಮಾನಸಿ ಸುಧೀರ್ ಉದ್ಘಾಟಿಸಿ, ಸಂಜೀವಿನಿ ಜೀವ ಕೊಡುವ ನಂಬಿಕೆ ಪುರಾಣದಲ್ಲಿದೆ. ಇಲ್ಲಿ ಸಂಜೀವಿನಿ ಹಲವಾರು ಮಂದಿಗೆ ಜೀವನ ನೀಡಿದೆ. ಮಹಿಳೆಯರಿಗೆ ತಮ್ಮದೇ ಆದ ಗುರುತು ಇರಬೇಕು. ಮಹಿಳೆಯನ್ನು ದೇವಿ ಎಂದು ಪೂಜಿಸುವುದು ನಮ್ಮ ಸಂಸ್ಕೃತಿ. ಗ್ರಾಾಮೀಣ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಕೊಂಡುಕೊಂಡು ಹೊಗಳುವ ಗುಣ ಇರಬೇಕು. ಸಂಜೀವಿನಿ ಸಂತೆಗಳು ದೊಡ್ಡ ಮಟ್ಟದಲ್ಲಿ ಯಶಸ್ವಿಯಾದರೆ ಆಗ ದೇವಿ ಮಹಾತ್ಮೆ ಆರಂಭವಾಗದಂತೆ. ನಮ್ಮ ಸುತ್ತಮುತ್ತಲಿನ ಆಹಾರಗಳನ್ನು ಸೇವಿಸಿ ಆರೋಗ್ಯವನ್ನು ಉತ್ತಮಗೊಳಿಸಬೇಕು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ವೀಣಾ ವಿವೇಕಾನಂದ, ಜಿ.ಪಂ.ಯೋಜನಾ ನಿರ್ದೇಶಕ ಬಾಬು ಎಂ., ಬ್ರಹ್ಮಾವರ ವಲಯದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕುಮಾರ ನಾಯ್ಕ, ಜಿ.ಪಂ. ಎಇಇ ಶ್ರೀನಾಥ್ ಉಪಸ್ಥಿತರಿದ್ದರು.

ಜಿ.ಪಂ. ಸಂಜೀವಿನಿಯ ಏಕವ್ಯಕ್ತಿ ಸಮಾಲೋಚಕ ಕೆ.ಪಾಂಡುರಂಗ ಸ್ವಾಗತಿಸಿದರು. ಸಂಜೀವಿನಿಯ ಜಿಲ್ಲಾಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಪ್ರಸ್ತಾವನೆಗೈದರು. ಜಿಲ್ಲಾಾ ವ್ಯವಸ್ಥಾಪಕ ಅವಿನಾಶ್ ವಂದಿಸಿದರು. ವ್ಯವಸ್ಥಾಾಪಕಿ ನವ್ಯಾಾ ಕಾರ್ಯಕ್ರಮ ನಿರೂಪಿಸಿದರು. ಭಾಷಣ ಸ್ಪರ್ಧೆ, ಸಮೂಹ ಗಾಯನ, ಜಾನಪದ ನೃತ್ಯಗಳು ಗಮನಸೆಳೆಯಿತು.

Comments are closed.