ಕರಾವಳಿ

ಶಕಪುರುಷ ಕಾರಂತ ಪ್ರಶಸ್ತಿ ಪ್ರಕೃತಿ ಪುರುಷ ಶ್ರೀಪಡ್ರೆಯ ಮಡಿಲು ಸೇರಿದೆ: ಕೋಟ ಶ್ರೀನಿವಾಸ ಪೂಜಾರಿಯವರ ಲೇಖನ

Pinterest LinkedIn Tumblr

ಲೇಖನ: ಕೋಟ ಶ್ರೀನಿವಾಸ ಪೂಜಾರಿ (ವಿಧಾನ ಪರಿಷತ್ ಪ್ರತಿಪಕ್ಷ ನಾಯಕ)
ಉಡುಪಿ: ಕಡಲ ತಡಿಯ ಭಾರ್ಗವ ಜ್ಞಾನಪೀಠ ಪ್ರಶಸ್ತಿ ವಿಜೇತ ನಮ್ಮೂರ ಶಿವರಾಮ ಕಾರಂತ ಬಹುಮುಖಿ ವ್ಯಕ್ತಿತ್ವದ ಒಂದು ವಿಸ್ಮಯ ವ್ಯಕ್ತಿ ಅಲ್ಲ, ವಿಸ್ಮಯ ಶಕ್ತಿ ಕಾರಂತರದ್ದು. ಸಾಹಿತ್ಯ, ಕಲೆ, ಸಂಸ್ಕೃತಿ ರಚನಾತ್ಮಕ ಕಾರ್ಯಕ್ರಮಕ್ಕಾಗಿ ಅಹರ್ನಿಶಿ ದುಡಿಮೆ, ಸಮಾಜದಲ್ಲಿ ಅನ್ಯಾಯ, ಅಕ್ರಮ, ಅಸ್ಪ್ರಶ್ಯತೆ, ಭ್ರಷ್ಟಾಚಾರ ಇವುಗಳೆಲ್ಲ ನಡೆದಾಗ ಕಾರಂತರು ಸಡ್ಡು ಹೊಡೆದು ಪ್ರತಿರೋಧ ಮಾಡಿದ್ದರು. ಕಾರಂತರ ಬದುಕಿನ ದಿನಗಳಲ್ಲಿ ಕೋರ್ಟು, ಕಛೇರಿ, ನ್ಯಾಯಾಲಯಗಳೆಲ್ಲ ನ್ಯಾಯ ನಿರಾಕರಣೆ ಮಾಡಿದರೆ, ಸಮನಾಂತರ ಸರಕಾರದಂತಿದ್ದ ಕಾರಂತರು ನೊಂದವರ ಧನಿಯಾಗಿ ಆರ್ಭಟಿಸಿ ನ್ಯಾಯ ಕೊಡುತ್ತಿದ್ದರು. ಕಾರಂತರ ಅಪಾರ ಜ್ಞಾನವನ್ನು ಅರ್ಥಮಾಡಿಕೊಂಡವರು ಶಿವರಾಮ ಕಾರಂತರೇ ಒಂದು ವಿಶ್ವವಿದ್ಯಾಲಯ ಎನ್ನುತ್ತಿದ್ದರು. ಕಾರಂತರ ಆತ್ಮಚರಿತ್ರೆ, ಹುಚ್ಚು ಮನಸ್ಸಿನ ಹತ್ತುಮುಖಗಳನ್ನು ಓದಿದವರಷ್ಟೇ ಅವರ ಆಸಕ್ತ ಕ್ಷೇತ್ರದ ಸರ್ವವ್ಯಾಪಿ, ಸರ್ವಸ್ಪರ್ಶಿ ಅನುಭವ ಅರ್ಥಮಾಡಿಕೊಳ್ಳಬಲ್ಲರು.

(ಕೋಟ ಶಿವರಾಮ ಕಾರಂತ)

ಕಾರಂತರ ವ್ಯಕ್ತಿತ್ವವೇ ವಿಮರ್ಶಾತೀತಾ. ತನ್ನೆಳೆಯ ದಿನಗಳಲ್ಲಿಯೇ ಮಡಿವಂತಿಕೆ ಮೀರಿ ಅಂತರ್ಜಾತಿ ವಿವಾಹವಾದರು. ಅಸ್ಪ್ರಶ್ಯತೆಯನ್ನು ಸೆಟೆದು ವಿರೋಧಿಸಿದರು. ಕೈಗಾ ಅಣು ಸ್ಥಾವರದ ವಿವಾದ ಭುಗಿಲೆದ್ದಾಗ ವಿಜ್ಞಾನಕ್ಕೊಬ್ಬನೇ ರಾಜರಾಮಣ್ಣ ಅಲ್ಲ ಎಂದು ಆರ್ಭಟಿಸಿದ್ದು ಮಾತ್ರವಲ್ಲ, ಪರಿಸರದ ಬಗ್ಗೆ ಜನಜಾಗೃತಿ ಮೂಡಿಸಲು ಪಕ್ಷೇತರನಾಗಿ ಲೋಕಸಭೆಗೆ ಸ್ಪರ್ಧಿಸಿಯೇ ಬಿಟ್ಟಿದ್ದರು. ರಾಜಕಾರಣವನ್ನು ಒಲ್ಲೆ ಎನ್ನುತ್ತಿದ್ದ ಕಾರಂತರ ಚುನಾವಣಾ ಸ್ಪರ್ಧೆ ಅಂದಿನ ದಿನಗಳಲ್ಲಿ ಜನಶಕ್ತಿಯ ಬೆಳೆ ತೆಗೆಯಿತು. ನಾಮಪತ್ರ ಸಲ್ಲಿಸಿ ಕಾರಂತರು ಅಮೇರಿಕಾಕ್ಕೆ ಹೊರಟರು. ಕಾರಂತರ ಹೆಸರು ಹಿಡಿದು ಬಡಿದಾಡಿದವರ ಶ್ರಮಕ್ಕೆ 80 ಸಾವಿರ ಓಟುಗಳು ಬಂದಿತ್ತು. ಕಾರಂತರೇ ಸ್ವತಃ ಚುನಾವಣೆಗೆ ದುಡಿದಿದ್ದರೆ ಸ್ಥಿತಿ ಏನಾಗುತ್ತಿತ್ತು? ಎಂದು ಪರಿಸರವಾದಿಗಳ ಪರ ಪಿ.ಲಂಕೇಶ್ ನೋವು ತೋಡಿಕೊಂಡಿದ್ದರು.

ಕಾರಂತರ ತಾರುಣ್ಯದ ದಿನಗಳಲ್ಲಿ ದೇಶದ ಉದ್ದಗಲಕ್ಕೂ ಸ್ವಾತಂತ್ರ್ಯ ಹೋರಾಟದ ಗಾಳಿ ಜೋರಾಗಿ ಬೀಸುತ್ತಿತ್ತು. ಈ ಗಾಳಿ ಕಾರಂತರನ್ನು ತಟ್ಟದೇ ಬಿಡಲಿಲ್ಲ. ಭಾರತವನ್ನು ಬಂಧಮುಕ್ತ ಮಾಡಲು ಕಾಲೇಜು ವಿದ್ಯಾಭ್ಯಾಸಕ್ಕೆ ನಮಸ್ಕಾರ ಹೇಳಿದ ಕಾರಂತರು ಅಸಹಕಾರ ಚಳುವಳಿಗೆ ಧುಮುಕಿಬಿಟ್ಟಿದ್ದರು. ಗಾಂಧೀಜಿಯವರ ಪ್ರೇರಣೆಯ ಪ್ರಭಾವಗಳು ಕಾರಂತರ ನಡೆ-ನುಡಿ, ಆಚಾರ ವಿಚಾರಗಳಲ್ಲಿ ಮೇಳೈಸಿದ್ದವು. ಸಮಾಜ ಸುಧಾರಣೆಯ ಕನಸು ಕಾರಂತರ ಮನಸ್ಸಿನಲ್ಲಿ ಮಹಾತ್ಮ ಗಾಂಧಿ ಬಿತ್ತಿಯೇ ಬಿಟ್ಟರು. ಶಿವರಾಮ ಕಾರಂತ ಎಂಬ ಮಹಾನ್ ವಿಚಾರವಂತ ಊರೂರು ಅಲೆದು ಸ್ವದೇಶಿ ವಸ್ತುಗಳನ್ನು ಬಳಸಿ ವಿದೇಶಿ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂದು ಉಪದೇಶ ನೀಡುತ್ತಲೇ, ರಂಗಭೂಮಿಯನ್ನು ವೇದಿಕೆ ಮಾಡಿಕೊಂಡು ಮಧ್ಯಪಾನದ ದುಷ್ಪರಿಣಾಮವನ್ನು ಮುಗ್ಧಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದರು.

ಸಾಹಿತ್ಯಲೋಕದ ದಿಗ್ಗಜ ಕಾರಂತರ ಬದುಕಿನಲ್ಲಿ ವಸಂತಾಗಮನ ಆಗಿದ್ದು ಅವರದ್ದೇ ಸಂಪಾದಕತ್ವದಲ್ಲಿ ಮೂಡಿ ಬಂದವಸಂತ ಪತ್ರಿಕೆಯ ಮೂಲಕ. ವಸಂತ ಮನೋರಂಜನೆಗಿಂತ ವೈಚಾರಿಕತೆಗೆ ಮಣೆಹಾಕಿತ್ತು. ಗಾಂಧೀಜಿಯವರ ಆದರ್ಶಗಳಾದ ಅಸ್ಪ್ರಶ್ಯರ ಉದ್ಧಾರ, ಪಾನನಿರೋಧ, ಸ್ವಾತಂತ್ರ್ಯ ಚಳುವಳಿಯ ಮಹತ್ವ ಇದರೊಂದಿಗೆ, ವಸಂತವನ್ನು ಕಾರಂತರು ಬಿಳಿಯರ ವಿರುದ್ಧ ಖಡ್ಗವಾಗಿ ಬಳಸಿಕೊಂಡರು.

(ಕೋಟ ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ)

ಕಾರಂತರು ಎಲ್ಲೇ ಇದ್ದರೂ, ಏನೇ ಮಾಡಿದರು ಅವರ ಚಟುವಟಿಕೆಗೆ ತನ್ನದೇ ಆದ ಕಾರಂತ ತನದ ಎದೆಗಾರಿಕೆ ಇತ್ತು. ಹಾಳು ಹಂಪೆಯ ಪುರಾತನ ಕಾಲದ ಯೋಗ ನರಸಿಂಹನ ತುಂಡಾದ ಮೂರ್ತಿಯನ್ನು ಪುರಾತತ್ವ ಇಲಾಖೆಯವರು ಕೃತಕವಾಗಿ ನಿರ್ಮಿಸಲು ಹೊರಟಾಗ ಇತಿಹಾಸಕ್ಕೆ ಅಪಚಾರ ಮಾಡಲು ನಿಮಗೆ ಅಧಿಕಾರ ಕೊಟ್ಟವರಾರು? ಎಂದು ಕಾರಂತರು ಗುಡುಗಿದ್ದರು. ಕಾರಂತರ ಗುಡುಗು ಅಂದಿನ ಪ್ರಧಾನಿ ರಾಜೀವ ಗಾಂಧಿಯವರ ವರೆಗೂ ಅಪ್ಪಳಿಸಿತ್ತು. ಸ್ವತಃ ಪ್ರಧಾನ ಮಂತ್ರಿಗಳೆ ಕಾಮಗಾರಿಯನ್ನು ತಡೆಹಿಡಿದು ಕಾರಂತರ ಸಲಹೆ ಕೇಳಿದ್ದರು. ಹಂಪೆಯ ಬಗ್ಗೆ ಕಾರಂತರು ಕೇಂದ್ರ ಸರ್ಕಾರಕ್ಕೆ ಬರೆದ ಪತ್ರದ ಬಗ್ಗೆ ಅಂದಿನ ವಾರಪತ್ರಿಕೆಯ ಸಂಪಾದಕ ಪ್ರಭಾವಿ ಪತ್ರಕರ್ತ ವೈಕುಂಠ ರಾಜು ಕಾರಂತರನ್ನು ಲೇಖನದ ಮೂಲಕ ಪ್ರಶ್ನಿಸಿದಾಗ ಕೇಳಿದ್ದು, ನನಗಾದ ಆತಂಕವನ್ನು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹೇಳಿದ್ದೇನೆ, ಅಭಿಪ್ರಾಯ ಹೇಳುವುದು ನನ್ನ ಹಕ್ಕು ಹಾಗೆಂದು ಲೇಖನ ಹಿಡಿದವರಿಗೆಲ್ಲಾ ಶಿವರಾಮ ಕಾರಂತ ಉತ್ತರಿಸುವ ಅಗತ್ಯವಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು.

ತುರ್ತು ಪರಿಸ್ಥಿತಿಯ ಅಂದಿನ ಕರಾಳ ದಿನಗಳಲ್ಲಿ ದೇಶದ ಮೂಲೆ ಮೂಲೆಗಳಲ್ಲಿರುವ ರಾಜಕಾರಣಿಗಳನ್ನೆಲ್ಲ ಸರಕಾರ ಸೆರೆಮನೆಗೆ ತಳ್ಳಿತ್ತು. ವಾಕ್ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯಗಳೆಲ್ಲವು ಧಮನವಾಗಿದ್ದವು. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಪರಕೀಯ ಬ್ರಿಟೀಷರು ಮಾಡದಷ್ಟು ಕೆಟ್ಟದ್ದಾಗಿ ಆಳುವ ಸರಕಾರ ತನ್ನ ವಿರೋಧಿಗಳಿಗೆ ಕಿರುಕುಳ ನೀಡುತ್ತಿತ್ತು. ದೇಶದೆಲ್ಲೆಡೆ ಸರಕಾರವನ್ನು ಪ್ರತಿರೋಧಿಸಿದವರೆಲ್ಲ ಶ್ರೀಕೃಷ್ಣನ ಜನ್ಮ ಸ್ಥಳ ಸೇರಿದ್ದರು. ಅದೆಂತೊ ಏನೋ ಖಂಡಿತವಾದಿ ಕಾರಂತರನ್ನು ಮಾತ್ರ ಸರಕಾರ ಮುಟ್ಟಲೇ ಇಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರೊಡನೆ ಬಡಿದಾಡಿ ಗೆದ್ದ ಕಾರಂತರು ಇಂದಿರಾ ಗಾಂಧಿಯವರು ದೇಶದಲ್ಲಿ ತಂದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ ಜನರಿಂದ ಆಯ್ಕೆ ಆದ ಸರಕಾರ, ಜನರ ಹಕ್ಕು, ಸ್ವಾತಂತ್ರ್ಯವನ್ನು ಕಸಿದುಕೊಂಡಿದ್ದು ಖಂಡಿಸಿದ್ದರು. ಸ್ವತಂತ್ರ ಭಾರತದ ಸರಕಾರ, ಸರ್ವಾಧಿಕಾರ ತೋರಿದಾಗ ಅದನ್ನು ವಿರೋಧಿಸಿ ಕಂಡ ಕಂಡಲ್ಲಿ ಭಾಷಣ ಮಾಡಿದ್ದರು, ಸರಕಾರದ ವಿರುದ್ಧ ಬರೆದಿದ್ದರು, ಆಳುವವರನ್ನು ಜರಿದಿದ್ದರು. ಈ ನಾಡಿನ ಪ್ರಜೆಗಳ ಬದುಕುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿರುವ ಕೇಂದ್ರ ಸರಕಾರದ ನಿಲುವನ್ನು ಪ್ರತಿಭಟಿಸಿ 1969 ರಲ್ಲಿ ರಾಷ್ಟ್ರಪತಿಗಳು ತಮ್ಮ ಕೈಯಾರೆ ಗೌರವಪೂರ್ವಕವಾಗಿ ತಮಗೆ ನೀಡಿದ ಪದ್ಮವಿಭೂಷಣ ಪ್ರಶಸ್ತಿಯನ್ನು ಕೇಂದ್ರ ಸರಕಾರಕ್ಕೆ ಹಿಂದಿರುಗಿಸಿದ್ದರು ಇದೇ ನಮ್ಮೂರ ಕಾರಂತರು.

ಕಾರಂತರು ಒಬ್ಬ ಶ್ರೇಷ್ಠ ಮಾನವತಾವಾದಿ. ಅಪಾರ ಅನುಭವದೊಂದಿಗೆ ಸಮಾಜವನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು ಜಗತ್ತನ್ನು ಸುತ್ತಿ ಕಂಡದ್ದನ್ನು ಮಾತ್ರ ಅನ್ಯರಿಗೆ ಸತ್ಯ ದರ್ಶನ ಮಾಡಿಸುತ್ತಾ ಮಾನವ ಧರ್ಮದ ಬದುಕಿನ ಮೌಲ್ಯಗಳನ್ನು ಬರಹದ ಮೂಲಕ ಇತಿಹಾಸಕ್ಕೆ ಬಿಟ್ಟುಹೋದರು. ಪರಿಸರದ ಬಗ್ಗೆ ಕಾರಂತರ ನಿಲುವು, ವಿಚಾರಧಾರೆಗಳು ಅಧ್ಬುತವಾಗಿದ್ದವು. ಈ ನೆಲ-ಜಲ, ಕಾಡು-ಮೇಡು, ಗುಡ್ಡ-ಬೆಟ್ಟ, ಝರಿ-ತೊರೆ ಇವೆಲ್ಲವುಗಳು ಪ್ರಕೃತಿಯ ಕೊಡುಗೆ. ಪ್ರಕೃತಿ ನಿರ್ಮಿತ ಭೂಮಿ ಮನುಷ್ಯನ ದುರಾಸೆಗೆ ಬಲಿಯಾಗಬಾರದು. ನಮ್ಮ ಹಿರಿಯರು ಉಳಿಸಿಕೊಂಡು ಬಂದ ಈ ಭೂಮಿಯ ನೆಲಗಟ್ಟು, ಶುದ್ಧಗಾಳಿ, ಕುಡಿಯುವ ನೀರು, ಇವೆಲ್ಲವು ಮಲೀನವಾಗಬಾರದು. ಈ ಭೂಮಿ ಇರುವುದು ನಮಗಾಗಿ ಅಲ್ಲ, ನಮ್ಮ ಮುಂದಿನ ಪೀಳಿಗೆಗಾಗಿ ಎಂಬ ಕಾರಂತರ ಸತ್ಯ ದರ್ಶನ ಇವತ್ತಿನ ಕಾಲಘಟ್ಟದಲ್ಲಿ ಕಾರಂತರ ಜನ್ಮ ದಿನವಾದ ಇಂದು ನಮಗೆ ಮತ್ತೆ ಮತ್ತೆ ನೆನಪಾಗುತ್ತಿದೆ.

(ಶ್ರೀಪಡ್ರೆ)

ಕುತೂಹಲವೆಂದರೆ ಅಕ್ಟೋಬರ್ 10 ರಂದು ಕಾರಂತರು ಹುಟ್ಟಿ ಬೆಳೆದ ಅವರ ತಾಯ್ನೆಲ ಕೋಟತಟ್ಟು ಗ್ರಾಮದ ಗ್ರಾಮ ಪಂಚಾಯತ್ ಈ ಯುಗ ಪುರುಷನ ಹೆಸರಿನಲ್ಲಿ ಕಾರಂತರ ಹುಟ್ಟೂರ ಪ್ರಶಸ್ತಿಯನ್ನು ನೀಡುತ್ತಿದೆ. ಇವತ್ತು ಅವರ ತಾಯ್ನೆಲ ಕೋಟದ ಶಿವರಾಮ ಕಾರಂತ ಥೀಂ ಪಾರ್ಕನಲ್ಲಿ ಪ್ರಧಾನವಾಗುವ ಈ ಪ್ರಶಸ್ತಿ, ಪ್ರಕೃತಿ ಪುರುಷ ಶ್ರೀಪಡ್ರೆಗೆ ಸಲ್ಲುತ್ತದೆ. ಓಡಲು ಬಿಡದಿರಿ ಮಳೆ ನೀರ ಎನ್ನುತ್ತಲೇ ಜನಶಕ್ತಿಯಿಂದ ನದಿಗಳಿಗೆ ಮರುಜೀವ ನೀಡಲು ಹೊರಟ, ಹಳ್ಳಿ ಮತ್ತು ದಿಲ್ಲಿಯ ಬೇಧವಿಲ್ಲದೆ ವ್ಯರ್ಥವಾಗುವ ನೀರಿಗೆ ಬೊಗಸೆಯೊಡ್ಡಿ ಹನಿಹನಿ ನೀರನ್ನು ಭುವಿಯಲ್ಲಿ ಇಂಗಿಸಿ, ಭೂಮಿಯ ಜಲಗಣಿ ಬೆಳೆಸಿ, ಬರಗಾಲದಲ್ಲಿ ನೀರಿಲ್ಲದೆ ತತ್ತರಿಸುವ ಜನರ ಸಮಸ್ಯೆಗಳನ್ನು ಮಳೆಕೊಯ್ಲಿನ ಮೂಲಕ ಹೋಗಲಾಡಿಸಿದ ಕೀರ್ತಿಗೆ ಪಾತ್ರರಾದ ಶ್ರೀಪಡ್ರೆ ಜಲಸಂರಕ್ಷಣೆಯ ಮೂಲಕ ಬರಡು ನೆಲದಲ್ಲಿ ಹಸಿರ ಹೊದಿಕೆಯನ್ನು ಸೃಷ್ಠಿಸಿದವರು. ಜನಸಾಮಾನ್ಯರಲ್ಲಿ ಜಾಢ್ಯವನ್ನು ತೊಲಗಿಸಿ ಶ್ರಮದಾನದ ಆಸಕ್ತಿ ಬೆಳೆಸಿ ಭುವಿಯ ಬಸಿರೊಳಗೆ ನೀರು ಇಂಗಿಸಿ ಜಲದಾಹ ತಣಿಸಿದವರು.

ಶ್ರೀಪಡ್ರೆಯವರ ಅಲಕ್ಷಿತ ಕಲ್ಪವೃಕ್ಷ, ಹಲಸು ಭವಿಷ್ಯದ ಬೆಳೆ ಎಂಬ ಘೋಷಣೆಗೆ ಕೇರಳ ಸರಕಾರ ಸಂಪೂರ್ಣ ಮನ್ನಣೆಕೊಟ್ಟು ಪ್ರೋತ್ಸಾಹ ನೀಡಿದೆ. ಕರ್ನಾಟಕವು ಸೇರಿದಂತೆ ಮಹಾರಾಷ್ಟ್ರ, ಶ್ರೀಲಂಕಾದಲ್ಲಿ ಶ್ರೀಪಡ್ರೆಯ ಮಾತಿಗೆ ಕಿವಿಯಾಗುವ ಲಕ್ಷಾಂತರ ಪರಿಸರ ಕಾರ್ಯಕರ್ತರ ಜಾಲವೇ ನಿರ್ಮಾಣಗೊಂಡಿದೆ. ಮಹಾರಾಷ್ಟ್ರ ಸರಕಾರದ ಜೊತೆ ಅನೇಕ ನಟ ನಟಿಯರು ಸೇರಿ ಸತ್ಯಮೇವ ಜಯತೆ ಎನ್ನುವ ಹೆಸರಿನಲ್ಲಿ ಹನಿ ನೀರು ಸಂಗ್ರಹಣ ಫೌಂಡೇಶನ್ ಒಂದನ್ನು ಸ್ಥಾಪಿಸಿ ಜಲಸಂಗ್ರಹಣೆಯ ಕುರಿತು ಅದ್ಭುತ ಶಕ್ತಿ ಪ್ರದರ್ಶಿಸಿದ್ದಾರೆ. ಜನಶಕ್ತಿಯಿಂದ ನದಿಗಳಿಗೆ ಮರುಜೀವ ಎಂಬ ಅಪೂರ್ವ ಪುಸ್ತಕ ಬರೆದ ಶ್ರೀಪಡ್ರೆ ನೀರು ಬೇಕು ಎಂಬ ಸಮಾಜಕ್ಕೆ ತೊಟ್ಟು ನೀರಿನ ಸಂಗ್ರಹಣೆಯ ಗುಟ್ಟು ಬಿಚ್ಚಿಟ್ಟಿದ್ದಾರೆ. ನೀರಿನ ಸಮೃದ್ಧಿಗೆ ನೂರಾರು ದಾರಿಗಳನ್ನು ಹುಡುಕಿ ಹುಡುಕಿ ಸಮಾಜದ ಎದುರು ತೆರೆದಿಟ್ಟ ಈ ಜಲತಜ್ಞ, ಮಣ್ಣು ಮತ್ತು ನೀರಿನ ಕುರಿತು 15ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಜಗತ್ತಿನಲ್ಲಿ ಮುಂದಿನ ಮಹಾಯುದ್ಧ ನಡೆದರೆ ಅದು ನೆಲಕ್ಕಾಗಿ ಅಲ್ಲ ಬದಲಾಗಿ ನೀರಿನ ಹನಿಗಾಗಿ ಎಂಬ ಭಯಾನಕ ವರದಿಗಳು ಬರುತ್ತಿರುವಾಗಲೇ ಓರ್ವ ಕೃಷಿಕ, ಲೇಖಕ, ಪರಿಸರತಜ್ಞ ಶ್ರೀಪಡ್ರೆ ನಮ್ಮ ನೆಲ ಮತ್ತು ಜಲದ ಕುರಿತು ವಹಿಸಿರುವ ಕಾಳಜಿ ಮುಂದಿನ ಜಗತ್ತಿನ ನೀರಿನ ಸಮಸ್ಯೆಯನ್ನು ಪರಿಹರಿಸಬಲ್ಲಷ್ಟು ಆಳವಾದ ಅನುಭವದ ಮೂಟೆಯನ್ನು ಸಮಾಜಕ್ಕೆ ಕಟ್ಟಿಕೊಟ್ಟಿದ್ದಾರೆ. ಒಂದೆಡೆ ಕೊಳೆ ರೋಗ ಮತ್ತೊಂದೆಡೆ ಬರಗಾಲಕ್ಕೆ ತುತ್ತಾಗಿ ಅಡಿಕೆಯ ಕೃಷಿಕರೆಲ್ಲರೂ ಕಂಗಲಾಗಿ ಚಿಂತಾಕ್ರಾಂತರಾದಾಗ ಇದೇ ಶ್ರೀಪಡ್ರೆ ಅಡಿಕೆ ಪತ್ರಿಕೆ ಎಂಬ ಪತ್ರಿಕೆಯನ್ನು ಹೊರತಂದು ಅಡಿಕೆ ಕೃಷಿಕರಲ್ಲಿ ಭರವಸೆ ಮೂಡಿಸಿದ್ದರು. ಕೃಷಿಕನೊಬ್ಬನ ಮನದಲ್ಲಿ ಮೂಡಿಬಂದ ಅಡಿಕೆ ಪತ್ರಿಕೆ, ಪತ್ರಿಕಾ ಜಗತ್ತಿನಲ್ಲಿಯೇ ಕೃಷಿಕರ ಕೈಗೆ ಲೇಖನಿ ಕೊಟ್ಟು ರೈತನ ಮನದಾಳದ ಮಾತು ಪ್ರಕಟವಾಗುವ ಮೂಲಕ ಹೊಸ ಭರವಸೆ ಮೂಡಿಸಿತು. ಅಲ್ಲದೇ ಅಡಿಕೆ ಬೆಳೆಗಾರರ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

ಅಧಿಕಾರ ಮತ್ತು ಹಣಕ್ಕಾಗಿ ಹಾಗೂ ಒಂದಷ್ಟು ಪ್ರಚಾರಕ್ಕಾಗಿ ಹೋರಾಟ ನಡೆಸುವವರು ಸುತ್ತಲ ಸಮಾಜದಲ್ಲಿ ಸಾಕಷ್ಟು ಮಂದಿಯಿರಬಹುದು. ಆದರೆ ಬರಡಾಗುತ್ತಿರುವ ಭೂಮಿಯಲ್ಲಿ ಚಿಗುರು ಅರಳಿಸಲು ಕಡಲಿನ ಒಡಲು ಸೇರುತ್ತಿರುವ ನೀರಿನ ಹನಿಗಳನ್ನು ಭೂಮಿಯಲ್ಲಿ ಇಂಗಿಸಿ ಉಳಿಸಿಕೊಂಡು ಬೊಗಸೆ ನೀರಿಗಾಗಿ ಮುಂದಿನ ಜನ ಹಾಹಾಕಾರ ಮಾಡದಂತೆ ಜನಜಾಗೃತಿ ಮೂಡಿಸುತ್ತಿರುವ ಪಡ್ರೆ ಈ ದೇಶಕ್ಕೊಂದು ಅಪೂರ್ವ ಸ್ವತ್ತು ಎಂಬ ಸತ್ಯ ಒಂದು ಗ್ರಾಮ ಪಂಚಾಯತ್ಗೆ ಅರ್ಥವಾಗಿ ಕಾರಂತರ ಹೆಸರಿನಲ್ಲಿ ಪ್ರಶಸ್ತಿಗೆ ಶ್ರೀಪಡ್ರೆಯವರನ್ನು ಆಯ್ಕೆ ಮಾಡಿರುವುದೇ ಪ್ರಶಸ್ತಿಗಾಗಿ ಪರದಾಟಮಾಡುವ ಇವತ್ತಿನ ಕಾಲಘಟ್ಟದಲ್ಲಿ ಒಂದು ಅಚ್ಚರಿ.

ಮಳೆಕೊಯ್ಲು, ಇಂಗು ಬಾವಿ, ಅಡ್ಡಬೋರು ಇವುಗಳ ಬಗ್ಗೆ ಎಲ್ಲ ತಿಳುವಳಿಕೆ ನೀಡಿ ಶ್ರೀಪಢ್ರೆ ಮಾಡಿದ ತಿರುಗಾಟವಿದೆಯಲ್ಲಾ ಅದು ಸರಿಸುಮಾರು 35 ಸಾವಿರ ಕಿಲೋ ಮೀ ವ್ಯಾಪ್ತಿಯಂತೆ. ಜಗತ್ತಿನ ಮಹಾ ಜ್ಞಾನಿಗಳೆಲ್ಲ ನೀರಿನ ವಿಷಯದಲ್ಲಿ ಅಜ್ಞಾನಿಗಳಂತೆ ಆಕಾಶ ನೋಡುವಾಗ ಜಲಸಂರಕ್ಷಣೆಯ ಅವಕಾಶವನ್ನು ಜನರೆದುರು ತೆರೆದಿಟ್ಟ ಶ್ರೀಪಡ್ರೆ ಆಧುನಿಕ ಭಗೀರಥನಾಗಿ ನಮಗೆಲ್ಲ ಕಂಡು ಬರುತ್ತಾರೆ. ನೂರಾರು ಲೇಖನಗಳ ಮೂಲಕ ರೈತರಿಗೆ ಮಾಹಿತಿ ಕೊಡುತ್ತಾ, ಕೃಷಿಕರ ಕೈಗೆ ಲೇಖನಿ ಕೊಟ್ಟು ಅವರ ಭಾವನೆಗಳನ್ನು ಬರವಣಿಗೆಯ ಮೂಲಕ ಬಟ್ಟಿ ಇಳಿಸುತ್ತಾ ಮುಕ್ತ ಸಂವಾದಗಳಿಗೆ ಅವಕಾಶ ಮಾಡಿಕೊಟ್ಟು ವಿಚಾರ ವಿನಿಮಯದ ಮೂಲಕ ಸಮಸ್ಯೆಗಳಿಗೆ ಸ್ಪಷ್ಟತೆಕೊಡುತ್ತಾ ರಾಸಾಯನಿಕ ರಹಿತ ಕೃಷಿ 80ರ ದಶಕದಲ್ಲಿ ಆರಂಭಿಸಿದ ಈ ಕೃಷಿತಜ್ಞ ಸಾವಯವ ಗೊಬ್ಬರಗಳು ಮಾತ್ರ ದೀರ್ಘಕಾಲ ಭೂಮಿಯನ್ನು ರಕ್ಷಣೆ ಮಾಡಬಲ್ಲವು ಎಂದು ಉದ್ಘರಿಸಿದ್ದಾರೆ.

ಒಂದರ್ಥದಲ್ಲಿ ಸುತ್ತಲ ಸಮಾಜಕ್ಕೆ ನೀರ ಹನಿ ಹನಿ ಉಳಿಸಿಕೊಟ್ಟು ಮುಂದಿನ ಜನಾಂಗದ ಬದುಕು ಪ್ರಕೃತಿಯ ಸಂರಕ್ಷಣೆಯ ಮೂಲಕ ಮಾತ್ರ ಸಾಧ್ಯ ಎಂದ ಅಪೂರ್ವ ವ್ಯಕ್ತಿ ಶ್ರೀಪಡ್ರೆಗೆ ನಡೆದಾಡುವ ವಿಶ್ವಕೋಶ ಕಾರಂತ ಹುಟ್ಟೂರ ಪ್ರಶಸ್ತಿಯನ್ನು ಕರ್ನಾಟಕದ ಲೋಕಾಯುಕ್ತ ಶ್ರೀ ವಿಶ್ವನಾಥ ಶೆಟ್ಟಿ ಇಂದು ಹಸ್ತಾಂತರಿಸುತ್ತಾರೆ ಎನ್ನುವುದೇ ಕಾರಂತ ಮತ್ತು ಶ್ರೀಪಡ್ರೆಯವರ ಅಭಿಮಾನಿಗಳಿಗೆ ಬೆಚ್ಚನೆಯ ಅನುಭವ ಕೊಡಲಿದೆ. ಮರಳಿ ಮಣ್ಣಿಗೆ ಸೇರಿದ ಶಕಪುರುಷ ಕಾರಂತ ಪ್ರಶಸ್ತಿ ಪ್ರಕೃತಿ ಪುರುಷ ಶ್ರೀಪಡ್ರೆಯ ಮಡಿಲು ಸೇರುವುದೇ ಪ್ರಶಸ್ತಿಗೊಂದು ಗರಿ ಕಾರಂತರ ಬದುಕು ಕಣ್ಣಾರೆ ಕಂಡವರಿಗೆ ತೃಪ್ತಿ.

ಲೇಖನ: ಕೋಟ ಶ್ರೀನಿವಾಸ ಪೂಜಾರಿ (ವಿಧಾನ ಪರಿಷತ್ ಪ್ರತಿಪಕ್ಷ ನಾಯಕ)


Comments are closed.